ಸಿಖ್ ನರಮೇಧ ಪ್ರಕರಣ: ಸಜ್ಜನ್ ಕುಮಾರ್ ಜಾಮೀನು ಅರ್ಜಿ ವಜಾ
ನವದೆಹಲಿ, ಸೆ. 4: ಸಿಖ್ ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ಸಿನ ಮಾಜಿ ಮುಖಂಡ ಸಜ್ಜನ್ ಕುಮಾರ್ (74) ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಸೆ. 4) ತಿರಸ್ಕರಿಸಿದೆ.
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಬೊಬ್ಡೆ ಅವರಿದ್ದ ನ್ಯಾಯಪೀಠವು, ಸಜ್ಜನ್ ಕುಮಾರ್ ಅವರು ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿಲ್ಲ ಎಂದು ವರದಿ ಬಂದಿದೆ ಹೀಗಾಗಿ ಜಾಮೀನು ನೀಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
2018ರಿಂದ ಜೈಲಿನಲ್ಲಿರುವ ಸಜ್ಜನ್ ಕುಮಾರ್ ಅವರು ಸುಮಾರು 8 ರಿಂದ 10 ಕೆ.ಜಿ ತೂಕ ಕಳೆದುಕೊಂಡಿದ್ದಾರೆ, ಮಧ್ಯಂತರ ಜಾಮೀನು ನೀಡಬೇಕು ಎಂದು ಸಜ್ಜನ್ ಕುಮಾರ್ ಪರ ವಕೀಲ ವಿಕಾಸ್ ಸಿಂಗ್ ಮನವಿ ಸಲ್ಲಿಸಿದ್ದರು.

1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರು ಪ್ರಮುಖ ಆರೋಪಿಯಾಗಿದ್ದರು. ಅವರು ದೆಹಲಿಯ ಕಂಟೋನ್ಮೆಂಟ್ ಬಳಿ ಸಿಖ್ ಧರ್ಮೀಯರ ಮೇಲೆ ತಮ್ಮ ಬೆಂಬಲಿಗರಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಹಿಂಸಾಚಾರಕ್ಕೆ ಬೆಂಬಲ ನೀಡಿದ ಆರೋಪದ ಎರಡು ಪ್ರಕರಣವನ್ನೂ ಅವರು ಎದುರಿಸುತ್ತಿದ್ದರು.
ಕಾಂಗ್ರೆಸ್ ಹಿರಿಯ ಮುಖಂಡರು ಸೇರಿದಂತೆ ಅನೇಕ ಮಂದಿ ಮೇಲೆ ಗಲಭೆ, ಹತ್ಯೆ ಪ್ರಕರಣಗಳು ದಾಖಲಾಗಿವೆ. 1984ರಲ್ಲಿ ದೆಹಲಿಯ ಮಹಿಪಾಲ್ಪುರ್ ಪ್ರದೇಶದಲ್ಲಿ ಇಬ್ಬರು ಸಿಖ್ಖರನ್ನು ಕೊಂದ ಆರೋಪದ ಮೇಲೆ ಯಶ್ ಪಾಲ್ ಸಿಂಗ್ ಎಂಬ ಅಪರಾಧಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು. ಮತ್ತೊಬ್ಬ ಅಪರಾಧಿ ನರೇಶ್ ಸೆಹ್ರಾವತ್ ಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು.

ಸಜ್ಜನ್ ಕುಮಾರ್ ಅವರೊಂದಿಗೆ ಕ್ಯಾ.ಭಾಗ್ಮಲ್, ಗಿರಿದರ್ ಲಾಲ್ ಮತ್ತು ಕಾಂಗ್ರೆಸ್ಸಿನ ಮಾಜಿ ಕೌನ್ಸೆಲರ್ ಬಲ್ವಾನ್ ಖೋಖರ್ ಅವರನ್ನೂ ದೋಷಿಗಳೆಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಿಶನ್ ಖೊಕ್ಕರ್ಮತ್ತು ಮಾಜಿ ಶಾಸಕ ಮಹೇಂದರ್ ಯಾದವ್ ಅವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.












Click it and Unblock the Notifications