Get Updates
Get notified of breaking news, exclusive insights, and must-see stories!

'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!

ಬೆಂಗಳೂರು, ಡಿಸೆಂಬರ್ 17 : "ನಮ್ಮ ತಾಯಿಯನ್ನು ಕೊಲ್ಲಲಾಗಿದೆ. ಸರ್ದಾರರನ್ನು ಕೊಲ್ಲಿರಿ" ಎಂದು 1984ರಲ್ಲಿ ಇಂದಿರಾ ಗಾಂಧಿಯ ಹತ್ಯೆಯ ಮರುದಿನ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಕೊಲೆಗಡುಕರನ್ನು ಪ್ರೇರೇಪಿಸಿದ್ದು ಅವರನ್ನು ಜೀವಾವಧಿ ಶಿಕ್ಷೆಯವರೆಗೆ ತಂದು ನಿಲ್ಲಿಸಿದೆ.

1984ರ ನವೆಂಬರ್ 1ರಿಂದ ಆರಂಭವಾದ ಸಿಖ್ ವಿರೋಧಿ ದಂಗೆಯಲ್ಲಿ, ಅಧಿಕೃತ ಅಂಕಿಅಂಶಗಳ ಪ್ರಕಾರ 2,800 ಸಿಖ್ ರನ್ನು ಹತ್ಯೆಗೈಯಲಾಗಿತ್ತು. ಇವರಲ್ಲಿ 2,100 ಹತ್ಯೆಯಾದವರು ದೆಹಲಿ ನಿವಾಸಿಗಳು. ಆದರೆ, ಅನಧಿಕೃತ ಅಂಕಿಸಂಖ್ಯೆಗಳ ಪ್ರಕಾರ 8,000ದಿಂ 17,000 ಸಿಖ್ ರನ್ನು ಕಾಂಗ್ರೆಸ್ ಬೆಂಬಲಿಗರು ಹತ್ಯೆ ಮಾಡಿದ್ದರು.

1984ರ ಅಕ್ಟೋಬರ್ 31ರಂದು, ಸಿಖ್ ಭದ್ರತಾ ಸಿಬ್ಬಂದಿಯಿಂದ ನಡೆದ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭೀಕರ ಹತ್ಯೆ ಮಾತ್ರವಲ್ಲ, ಮರುದಿನ ನವೆಂಬರ್ 1ರಿಂದ ನಡೆದ ಸಿಖ್ ವಿರೋಧಿ ದಂಗೆ ಮತ್ತು ಹತ್ಯಾಕಾಂಡ ಇಡೀ ದೇಶವನ್ನೇ ನಡುಗಿಸಿತ್ತು, ಕಂಡಲ್ಲಿ ಸಿಖ್ ರ ರಕ್ತದೋಕುಳಿಯಾಗಿತ್ತು.

ಸಜ್ಜನ್ ಕುಮಾರ್ ಅವರ ಹೇಳಿಕೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಚಾಮ್ ಕೌರ್ ಎಂಬ ಮಹಿಳೆ ನೀಡಿರುವ ಹೇಳಿಕೆ, 34 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ಆಗುವಂತೆ ಮಾಡಿದೆ. ಚಾಮ್ ಕೌರ್ ಅವರನ್ನು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯನ್ನಾಗಿ ಮಾಡಲಾಗಿತ್ತು. ಅವರು ಹೇಳಿದ್ದೇನೆಂದರೆ...

ಚಾಮ್ ಕೌರ್ ಕೋರ್ಟಿಗೆ ಹೇಳಿದ್ದೇನು?

ಚಾಮ್ ಕೌರ್ ಕೋರ್ಟಿಗೆ ಹೇಳಿದ್ದೇನು?

1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ಹತ್ಯೆಯಾಗಿದ್ದನ್ನು ನಾವು ಟಿವಿಯಲ್ಲಿ ವೀಕ್ಷಿಸಿದ್ದೆವು. ಆ ಹತ್ಯೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ನವೆಂಬರ್ 1ರಂದು ನಾನು ಕಳೆದುಹೋಗಿದ್ದ ನನ್ನ ಆಡನ್ನು ಹುಡುಕತ್ತ ಹೊರಗೆ ಹೋಗಿದ್ದಾಗ ಸಜ್ಜನ್ ಕುಮಾರ್ ಅವರು ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದುದನ್ನು ನೋಡಿದೆ. ಅವರು 'ನಮ್ಮ ತಾಯಿಯನ್ನು ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ' ಎಂದು ಉದ್ರಿಕ್ತ ಜನಸ್ತಾಮಕ್ಕೆ ನಿರ್ದೇಶನ ನೀಡುತ್ತಿದ್ದರು.

ಇಡೀ ರಾತ್ರಿ ಅಲ್ಲಿಯೇ ಬಚ್ಚಿಟ್ಟುಕೊಂಡು ಕಳೆದೆವು

ಇಡೀ ರಾತ್ರಿ ಅಲ್ಲಿಯೇ ಬಚ್ಚಿಟ್ಟುಕೊಂಡು ಕಳೆದೆವು

ಆಡನ್ನು ಹುಡುಕುವುದನ್ನು ಬಿಟ್ಟು, ನಾನು ಕೂಡಲೆ ನನ್ನ ಮನೆಗೆ ಮರಳಿದೆ ಮತ್ತು ನನ್ನ ನೆರೆಹೊರೆಯವರಿಗೆ ಸಜ್ಜನ್ ಕುಮಾರ್ ಅವರು ಆಡುತ್ತಿದ್ದ ಮಾತಿನ ಬಗ್ಗೆ ಹೇಳಿದೆ. ನಾವು ಕೂಡಲೆ ಎರಡನೇ ಮಹಡಿಯ ಮೇಲೆ ಏರಿ, ಮಕ್ಕಳು ಸೇರಿದಂತೆ ಇಡೀ ರಾತ್ರಿ ಅಲ್ಲಿಯೇ ಬಚ್ಚಿಟ್ಟುಕೊಂಡು ಕಳೆದೆವು ಎಂದು ಚಾಮ್ ಕೌರ್ ಅವರು ಜಿಲ್ಲಾ ನ್ಯಾಯಾಧೀಶೆ ಪೂನಂ ಎಂ ಬಂಬಾ ಅವರ ಮುಂದೆ ಹೇಳಿಕೆ ನೀಡಿದ್ದರು.

ಕೌರ್ ಮಗ, ಅಪ್ಪನ ಭೀಕರ ಹತ್ಯೆ

ಕೌರ್ ಮಗ, ಅಪ್ಪನ ಭೀಕರ ಹತ್ಯೆ

ನವೆಂಬರ್ 2ರಂದು ಉದ್ರೇಕಗೊಂಡಿದ್ದ ಜನರು ನಮ್ಮ ಎರಡನೇ ಮಹಡಿಗೇ ನುಗ್ಗಿ ನನ್ನ ಮಗ ಕಪೂರ್ ಸಿಂಗ್ ಮತ್ತು ನನ್ನ ತಂದೆ ಸರ್ದಾರ್ಜಿ ಸಿಂಗ್ ಅವರನ್ನು, ಅಡಗಿಕೊಂಡಿದ್ದ ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗಿದ್ದು ಮಾತ್ರವಲ್ಲ ಅವರನ್ನು ಚೆನ್ನಾಗಿ ಹೊಡೆದು ಮಹಡಿಯ ಮೇಲಿಂದ ಕೆಳಗೆ ತಳ್ಳಿದ್ದರು. ಜನರು ನನ್ನ ಮೇಲೆ ಕೂಡ ಹಲ್ಲೆ ಮಾಡಿದ್ದರು. ನನಗೆ ಬಲ ಹಣೆಯ ಮೇಲೆ ತೀವ್ರ ಪೆಟ್ಟಾಗಿತ್ತು. ಆ ಕಲೆ ನನ್ನ ಹಣೆಯ ಮೇಲೆ ಈಗಲೂ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಉದ್ರಿಕ್ತ ಜನರು ಮಾಡಿದ ಹಲ್ಲೆಯಿಂದಾಗಿ ಚಾಮ್ ಕೌರ್ ಅವರ ಮಗ ಮತ್ತು ಅಪ್ಪ ಸಾವಿಗೀಡಾಗಿದ್ದರು.

ಸಜ್ಜನ್ ಕುಮಾರ್ ರನ್ನು ಗುರುತಿಸಿದ್ದ ಚಾಮ್

ಸಜ್ಜನ್ ಕುಮಾರ್ ರನ್ನು ಗುರುತಿಸಿದ್ದ ಚಾಮ್

ರೇಷನ್ ಕಾರ್ಡ್ ಮತ್ತು ಪಾರ್ಸೋರ್ಟ್ ಮಾಡಿಸುವ ಸಲುವಾಗಿ ನಾವು, ಅಂದು ಸಂಸದರಾಗಿದ್ದ ಸಜ್ಜನ್ ಕುಮಾರ್ ಅವರನ್ನು ಭೇಟಿ ಆಗುತ್ತಿದ್ದರಿಂದ, ಕೋರ್ಟಿನಲ್ಲಿ ಹಾಜರುಪಡಿಸಿದಾಗ ಸಜ್ಜನ್ ಕುಮಾರ್ ಅವರನ್ನು ಸುಲಭವಾಗಿ ಗುರುತಿಸಿದ್ದೆ ಎಂದು ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಸಜ್ಜನ್ ಕುಮಾರ್ ಅವರ ಜೊತೆ ಇನ್ನಿಬ್ಬರನ್ನೂ ಚಾಮ್ ಕೌರ್ ಅವರು ಗುರುತಿಸಿದ್ದರು. ಅವರನ್ನು ಆರೋಪಿ ಪರ ವಕೀಲರು ಕೂಡ ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಪೊಲೀಸರು ಬಂದು ಸೈಟ್ ಪ್ಲಾನ್ ತಯಾರಿಸಲು ಕರೆದುಕೊಂಡು ಹೋಗಿದ್ದರಾ ಎಂಬ ಪ್ರಶ್ನೆಗೆ, ಅವರೇನು ಬರುತ್ತಾರೆ. ಸಿಖ್ಖರಾಗಿದ್ದ ಪೊಲೀಸರನ್ನೇ ಕೊಂದುಹಾಕಲಾಗುತ್ತಿತ್ತು ಎಂದು ಚಾಮ್ ಕೌರ್ ಅವರು ಉತ್ತರ ನೀಡಿದ್ದರು.

ನೆಚ್ಚಿನ ಭದ್ರತಾ ಸಿಬ್ಬಂದಿಯಿಂದಲೇ ಷಡ್ಯಂತ್ರ

ನೆಚ್ಚಿನ ಭದ್ರತಾ ಸಿಬ್ಬಂದಿಯಿಂದಲೇ ಷಡ್ಯಂತ್ರ

ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು 1984ರ ನವೆಂಬರ್ 31ರಂದು ಬೆಳಿಗಿನ ಸಮಯ 9.30ರ ಸುಮಾರಿಗೆ, ನವದೆಹಲಿಯ ಸಫ್ದರ್ ಜಂಗ್ ನಲ್ಲಿರುವ ಅವರ ನಿವಾಸದಲ್ಲಿ ಅವರ ಭದ್ರತಾ ಸಿಬ್ಬಂದಿಯಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರು ಗುಂಡಿನ ಮಳೆ ಸುರಿಸಿ ಹತ್ಯೆ ಮಾಡಿದ್ದರು. ಅಮೃತಸರದ ಗೋಲ್ಡನ್ ಟೆಂಪಲ್ ನೊಳಗೆ ನುಗ್ಗಿ ಭಾರತೀಯ ಸೇನೆ ನಡೆಸಿದ್ದ 'ಆಪರೇಷನ್ ಬ್ಲೂ ಸ್ಟಾರ್' ನಿಂದಾಗಿ ಸಿಖ್ಖರು ಭಾರೀ ರೊಚ್ಚಿಗೆದ್ದಿದ್ದರು ಮತ್ತು ಇಂದಿರಾ ಗಾಂಧಿಯನ್ನು ದ್ವೇಷಿಸಲು ಆರಂಭಿಸಿದ್ದರು. ಆಪರೇಷನ್ ಬ್ಲೂ ಸ್ಟಾರ್ ನಿಂದಾಗಿ ಸಿಡಿದೆದ್ದಿದ್ದ ಸಿಖ್ಖರು ಇಂದಿರಾ ಗಾಂಧಿಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು. ಈ ಕಾರಣದಿಂದಾಗಿ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ನಿಂದ ಸಿಖ್ಖರನ್ನು ತೆಗೆಯಲಾಗಿತ್ತು. ಆದರೆ, ಸಿಟ್ಟಿಗೆದ್ದಿದ್ದ ಸಿಖ್ಖರ ಮನ ಗೆಲ್ಲುವ ಉದ್ದೇಶದಿಂದ ಅವರನ್ನು ವಾಪಸ್ ಕರೆಯಿಸಿಕೊಂಡಿದ್ದರು ಇಂದಿರಾ ಗಾಂಧಿ. ಅವರಲ್ಲಿ ಇಂದಿರಾ ಅವರ ನೆಚ್ಚಿನ ಭದ್ರತಾ ಸಿಬ್ಬಂದಿಯಾಗಿದ್ದ ಬಿಯಾಂತ್ ಸಿಂಗ್ ಕೂಡ ಸೇರಿಕೊಂಡಿದ್ದ.

ಇಂದಿರಾ ಗಾಂಧಿ ಮೇಲೆ ಗುಂಡಿನ ಸುರಿಮಳೆ

ಇಂದಿರಾ ಗಾಂಧಿ ಮೇಲೆ ಗುಂಡಿನ ಸುರಿಮಳೆ

ಐರ್ಲೆಂಡ್ ಟಿವಿಗಾಗಿ ಬ್ರಿಟಿಷ್ ನಟ ಪೀಟರ್ ಉಸ್ತಿನೋವ್ ಎಂಬುವವರು ಸಾಕ್ಷ್ಯಚಿತ್ರ ಮಾಡುತ್ತಿದ್ದರು. ಅವರಿಗೆ ಸಂದರ್ಶನ ನೀಡಲೆಂದು ಇಂದಿರಾ ಗಾಂಧಿ ಅವರು 9.20ರ ಸುಮಾರಿಗೆ ಮನೆಯಿಂದ ಹೊರಟಿದ್ದರು. ನಂ.1 ಸಫ್ದರ್ ಜಂಗ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸದಿಂದ ಉದ್ಯಾನದ ಮೂಲಕ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಗೇಟ್ ಬಳಿಯೇ ಪಾಯಿಂಟ್ 38 ರಿವಾಲ್ವರ್ ಬಳಸಿ ಬಿಯಾಂತ್ ಸಿಂಗ್ ಮೂರು ಗುಂಡು ಹಾರಿಸಿದ್ದ. ಇಂದಿರಾ ನೆಲದ ಮೇಲೆ ಬೀಳುತ್ತಿದ್ದಂತೆ ತನ್ನ ಬಳಿಯಿದ್ದ ಸ್ಟೆನ್ ಮಷೀನ್ ಗನ್ ನಿಂದ ಸತ್ವಂತ್ ಸಿಂಗ್ 30 ಸುತ್ತು ಗುಂಡು ಹಾರಿಸಿದ್ದ. ಬಿಯಾಂತ್ ಸಿಂಗ್, "ನಾನು ಏನು ಬೇಕೋ ಅದನ್ನು ಮಾಡಿದ್ದೇನೆ. ನೀವು ಏನು ಬೇಕೋ ಅದನ್ನು ಮಾಡಿರಿ" ಎಂದು ಹೆಮ್ಮೆಯಿಂದ ಹೇಳಿದ್ದ. ಕೂಡಲೆ ಸ್ಥಳಕ್ಕೆ ಧಾವಿಸಿದ ಗಡಿ ಭದ್ರತಾ ಪೊಲೀಸರು ಬಿಯಾಂತ್ ನನ್ನು ಹಿಡಿದು ಅಲ್ಲಿಯೇ ಗುಂಡಿಕ್ಕೆ ಹತ್ಯೆ ಮಾಡಿದರು. ಪರಾರಿಯಾಗಲು ಯತ್ನಿಸಿದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್ ನನ್ನು ಹಿಡಿಯಲಾಯಿತು. ನಂತರ 1989ರಲ್ಲಿ ಅವರಿಬ್ಬರನ್ನು ಗಲ್ಲಿಗೇರಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+