ಮೈಸೂರಲ್ಲೇ ಡಯಾಗ್ನೋಸ್ಟಿಕ್ ಪ್ರಯೋಗಾಲಯ ಸ್ಥಾಪಿಸಿ
ಮೈಸೂರು, ಫೆ. 13: ಮೈಸೂರಿಗೆ ಪ್ರತಿದಿನ ಹಲವು ದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. 2009ರಿಂದಲೂ ಜಿಲ್ಲೆಯಲ್ಲಿ ಎನ್1ಎನ್1 ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ರೋಗಾಣುಗಳ ಪತ್ತೆಗೆ ಆಗತ್ಯ ಪ್ರಯೋಗಾಲಯವೇ ಇಲ್ಲ.
ಆದ್ದರಿಂದ ಮೈಸೂರಿನಲ್ಲಿ ಡಯಾಗ್ನೋಸ್ಟಿಕ್ ಪ್ರಯೋಗಾಲಯ ಸ್ಥಾಪಿಸಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮನವಿ ಸಲ್ಲಿಸಿದ್ದಾರೆ. [ಹಂದಿ ಜ್ವರ : ಮಾಡಬೇಕಾದ್ದು, ಮಾಡಬಾರದ್ದು]

ಮೈಸೂರಿನ ಶಂಕಿತ ರೋಗಿಗಳ ಗಂಟಲು ಕೋಶದ ಮಾದರಿ ಸಂಗ್ರಹಿಸಿ ಬೆಂಗಳೂರಿನ ನಿಮ್ಹಾನ್ಸ್ ನ್ಯೂರೋ ವೈರಾಲಜಿ ವಿಭಾಗಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಎಚ್1ಎನ್1 ಇನ್ಫ್ಲುಯೆನ್ಸಾ ಎಆರ್ಟಿಪಿಸಿಆರ್ ವೈರಾಲಜಿ ಹಾಗೂ ಇನ್ನಿತರ ರೋಗಾಣುಗಳ ಪತ್ತೆಗೆ ಡಯಾಗ್ನೋಸ್ಟಿಕ್ ಪ್ರಯೋಗಾಲಯ ಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. [ಹಂದಿಜ್ವರ ಪೀಡಿತರಿಗೆ ತುರ್ತು ಚಿಕಿತ್ಸೆ]
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಕೇವಲ 15 ವೆಂಟಿಲೇಟರ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗೆ 100 ವೆಂಟಿಲೇಟರ್ಗಳನ್ನು ಪೂರೈಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಮನವಿಯ ಒಂದು ಪ್ರತಿಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೂ ಸಲ್ಲಿಸಲಾಗಿದೆ. [ಈ ಆಸ್ಪತ್ರೆಯಲ್ಲಿ ಹಂದಿಜ್ವರಕ್ಕೆ ಔಷಧಿ ಸಿಗುತ್ತೆ]
ರಾಜ್ಯದಲ್ಲಿ ಈಗಾಗಲೇ ಹಂದಿ ಜ್ವರದಿಂದ 15 ಜನ ಮೃತಪಟ್ಟಿರುವ ಕಾರಣ ಜನರಲ್ಲಿ ಭೀತಿ ಮನೆಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಮೂಲದವರೇ ಆಗಿರುವ ಕಾರಣ ಈ ಬೇಡಿಕೆಗಳು ಈಡೇರುವ ನಿರೀಕ್ಷೆ ಜನರಲ್ಲಿದೆ.












Click it and Unblock the Notifications