ದಸರಾ ಯುವ ಸಂಭ್ರಮದಲ್ಲಿ ಮಹದೇಶ್ವರನ ಹಾಡಿಗೆ ಹೆಜ್ಜೆ ಹಾಕಿದ ಜಿಟಿಡಿ
ಮೈಸೂರು, ಅಕ್ಟೋಬರ್.01 : ಅಲ್ಲಿ ಉಲ್ಲಾಸದ ನದಿ ತುಂಬಿ ಹರಿಯುತ್ತಿತ್ತು. ಯುವ ಮನಸ್ಸುಗಳ ಸಡಗರ, ಸಂತಸಕ್ಕೆ ಪಾರವೇ ಇರಲಿಲ್ಲ. ಯುವ ಸಮೂಹವಂತೂ ಕುಣಿದು ಕುಪ್ಪಳಿಸಿತು. ಇಂಪಾದ ಹಾಡಿಗೆ, ನೃತ್ಯದ ಮಾಧುರ್ಯಕ್ಕೆ ನೋಡುಗರ ಜತೆಗೆ ಗಿಡ ಮರಗಳೂ ತಲೆದೂಗಿದ್ದವು ಅಂದರೆ ತಪ್ಪಾಗಲಾರದು.
ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಮುನ್ನುಡಿಯಂತೆ ದಸರಾ ಮಹೋತ್ಸವ 2018ರ ಯುವ ಸಂಭ್ರಮ' ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಚಾಲನೆಗೊಂಡಿತು. ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರ ನೃತ್ಯದ ಸೊಬಗು ಪ್ರೇಕ್ಷಕರ ಗಣದಲ್ಲಿ ಮಿಂಚು ಹರಿಸಿತ್ತು.
ಅದರಲ್ಲಿಯೂ ವಿಶೇಷ ವಿದ್ಯಾರ್ಥಿಗಳ ನರ್ತನ ಕೌಶಲ ನೋಡುಗರನ್ನು ಬೆರಗುಗೊಳಿಸಿತ್ತು.

ಉಕ್ರೇನ್ ದೇಶದ ಯೂಲಿಯಾ ತಾವೇ ತಯಾರಿಸಿದ 'ಕ್ಲಸ್ಟರ್ ಹಿಲಿಯಂ ಬಲೂನ್ ಆಕ್ಟ' ಎಂಬ ವಿಶೇಷ ಬಲೂನಿಗೆ ದೀಪಾಲಂಕಾರ ಮಾಡಿದ್ದರು. ಬಳಿಕ ಸೊಂಟಕ್ಕೆ ಕಟ್ಟಿಕೊಂಡು ಸುಮಾರು 100 ಅಡಿ ಎತ್ತರದಿಂದ ಸಾಹಸ ಮಾಡುತ್ತಾ ಚಾಲನೆ ನೀಡಿ ಯುವ ಸಮೂಹದ ಮನಸ್ಸು ಗೆದ್ದರು.
ಇತ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಜಿಟಿ ದೇವೇಗೌಡ, ಮೈಸೂರು ಮಹಾರಾಜರು ದಸರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆ, ಅಭಿವೃದ್ಧಿಯ ಮೂಲಕ ಮೈಸೂರಿನ ಕೀರ್ತಿಯನ್ನು ದೇಶ-ವಿದೇಶದಲ್ಲಿ ಹರಡಲು ಕಾರಣಕರ್ತರಾಗಿದ್ದಾರೆ. ಅವರ ನೀಡಿರುವ ಕೊಡುಗೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಬಳಿಕ ಸಾಂಪ್ರದಾಯಿಕವಾಗಿ ಕನ್ನಡ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಮಹದೇಶ್ವರನ ಹಾಡಿನೊಂದಿಗೆ ಹೆಜ್ಜೆ ಹಾಕಿದರು.

ಯಳಂದೂರಿನ ಜೆಎಸ್ ಎಸ್ ಮಹಿಳಾ ಸಂಯುಕ್ತ ಪದವಿಪೂರ್ವ ಕಾಲೇಜು, ಮಂಡ್ಯದ ಭಾರತೀ ಕಾಲೇಜು, ಮೈಸೂರಿನ ಕರುಣಾಮಯಿ ವಿಶೇಷ ಮಕ್ಕಳ ತರಬೇತಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ 14 ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.












Click it and Unblock the Notifications