ಬೈಕ್ ಗೆ ಬಸ್ ಡಿಕ್ಕಿ: ಅಣ್ಣ ಸ್ಥಳದಲ್ಲೇ ಸಾವು, ತಂಗಿ ಸ್ಥಿತಿ ಗಂಭೀರ
ಮೈಸೂರು, ಡಿಸೆಂಬರ್ 13: ಬೈಕ್ ಮತ್ತು ಕೆಎಸ್ಆರ್ ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಅಣ್ಣ ಸಾವನ್ನಪ್ಪಿ, ತಂಗಿ ಗಂಭೀರವಾಗಿ ಗಾಯಗೊಂಡ ಘಟನೆ ಎಚ್.ಡಿ.ಕೋಟೆ ತಾಲೂಕು ಮಾದಾಪುರ ಬಳಿಯ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಸಂಭವಿಸಿದೆ.
ತುಂಬಸೋಗೆ ಗ್ರಾಮದ ರೇಣುಕಾ ಎಂಬುವರ ಪುತ್ರ ಅಮೃತರಾವ್ (26) ಮೃತಪಟ್ಟಿದ್ದರೆ, ಪುತ್ರಿ ಪುನೀತಾ (24) ಗಂಭೀರ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಐಸಿಐಸಿಐ ಬ್ಯಾಂಕಿನಲ್ಲಿ ನಡೆಯುತ್ತಿದ್ದ ತರಬೇತಿಗೆ ತಂಗಿ ಪುನೀತಾ ಹೋಗಿದ್ದರೆ, ಅಣ್ಣ ಅಮೃತರಾವ್ ಖಾಸಗಿ ಸಂಸ್ಥೆಯೊಂದಕ್ಕೆ ಸಂದರ್ಶನಕ್ಕೆ ಹೋಗಿದ್ದರು. ಇಬ್ಬರೂ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ತುಂಬಸೋಗೆಗೆ ತೆರಳುತ್ತಿದ್ದರು.[ಕೊಳ್ಳೇಗಾಲದಲ್ಲಿ ವಿದ್ಯುತ್ ದುರಂತ, ತಂದೆ ಸಾವು, ಮಗ ಸಜೀವ ದಹನ]

ಈ ಸಂದರ್ಭದಲ್ಲಿ ಎಚ್.ಡಿ.ಕೋಟೆ ಮಾದಾಪುರ ಬಳಿಯ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಎದುರಿನಿಂದ ಬಂದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಅಮೃತರಾವ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ತಂಗಿ ಪುನೀತಾ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು.[ಹುಬ್ಬಳ್ಳಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ: ತಾಯಿ-ಮಗ ಸಾವು]

ಕೂಡಲೇ ಸಾರ್ವಜನಿಕರು ಆಕೆಯನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಎಚ್.ಡಿ.ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications