ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡುವಂತೆ ಯದುವೀರ್ ಗೆ ಮನವಿ
ಮೈಸೂರು, ಫೆಬ್ರವರಿ 14:ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಗೆ ರಾಜವಂಶಸ್ಥ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೆಯೇ ಕಟ್ಟಡಗಳ ಮಾಹಿತಿ ತಿಳಿದುಕೊಂಡರು.
ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಸದರಿ ಕಟ್ಟಡಗಳನ್ನು ನಿಮ್ಮ ಹಿರಿಯರು ನಿರ್ಮಿಸಿದ್ದಾರೆ. ಆದರೆ ಸರ್ಕಾರ ಇದನ್ನು ಕೆಡವಿ ಪುನಃ ನಿರ್ಮಿಸಲು ಹೊರಟಿದೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡಿ ಎಂದು ಯದುವೀರ ಅವರಿಗೆ ಮನವಿ ಮಾಡಿಕೊಂಡರು.
ಸರ್ಕಾರ ಮೈಸೂರಿನ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆ ಕೆಡವಿ ಪುನಃ ನಿರ್ಮಿಸಲು ಮುಂದಾಗಿದ್ದು, ಈ ಬಗ್ಗೆ ಯದುವೀರ್ ಮಾಧ್ಯಮದೊಂದಿಗೆ ಮಾತನಾಡಿ, ಕಟ್ಟಡ ಶಿಥಿಲಗೊಂಡಿದೆ ಎಂಬ ನೆಪವೊಡ್ಡಿ ನಗರದ ಎಲ್ಲ ಪಾರಂಪರಿಕ ಕಟ್ಟಡಗಳನ್ನು ಈ ರೀತಿ ಕೆಡವುತ್ತಾ ಹೋದರೆ ಮೈಸೂರನ್ನು ಸಾಂಸ್ಕೃತಿಕ ನಗರಿ ಎನ್ನಲು ಏನು ಉಳಿಯುವುದಿಲ್ಲ.

ತಜ್ಞರ ವರದಿ ಪ್ರಕಾರ ಎರಡು ಪಾರಂಪರಿಕ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಲು ಅವಕಾಶವಿದೆ. ಇದಕ್ಕಾಗಿ ಹಲವು ರೀತಿಯ ತಂತ್ರಜ್ಞಾನಗಳು ಕೂಡ ಚಾಲ್ತಿಯಲ್ಲಿವೆ. ದೇಶದ ಹಲವೆಡೆ ನಾನಾ ನಗರಗಳಲ್ಲಿ ಕುಸಿಯುವ ಹಂತದಲ್ಲಿದ್ದ ಕಟ್ಟಡಗಳನ್ನು ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಮೈಸೂರಿನ ಲ್ಯಾನ್ಸ್ ಡೌನ್ ಹಾಗೂ ದೇವರಾಜ ಮಾರುಕಟ್ಟೆಯನ್ನು ಸಹ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಪಾರಂಪರಿಕ ಕಟ್ಟಡಗಳಿಂದ ಘೋಷಣೆಯಾಗಿರುವ ಈ ಕಟ್ಟಡಗಳು ಸರಿಯಾಗಿ ನಿರ್ವಹಣೆಯಿಲ್ಲದೇ ಸೊರಗಿವೆ. ಸಂರಕ್ಷಣೆ ಕಾರ್ಯ ನಡೆಯುವಾಗ ಈ ಹಿಂದೆಯೂ ಕಮಾನನ್ನು ಉದ್ದೇಶಪೂರ್ವಕವಾಗಿ ಬೀಳಿಸಲಾಗಿತ್ತು. ಹೊಸ ಕಟ್ಟಡ ನಿರ್ಮಾಣ ಮಾಡಲು ನಗರ ಪಾಲಿಕೆಯಲ್ಲಿ ವಿರೋಧ ಭಿನ್ನಾಭಿಪ್ರಾಯಗಳು ಒಟ್ಟಾಗಿದೆ. ಮನಬಂದಂತೆ ನಿರ್ಧಾರ ಕೈಗೊಂಡಿರುವುದು ಹಲವು ಅನುಮಾನ ಉಂಟು ಮಾಡಿದೆ ಎಂದು ಇನ್ನು ಇಲ್ಲಿನ ಜನರು ದೂರುತ್ತಾರೆ.
ಗೋಲಗುಂಬಜ್ , ಗಗನ್ ಮಹಲ್, ಲೋಟಸ್ ಮಹಲ್ ಇತ್ಯಾದಿ ಕಟ್ಟಡಗಳಂತೆ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕು. ಆ ಮೂಲಕ ಅಲ್ಲಿ ಕೆಲಸ ಮಾಡುವ ನಮ್ಮ ಹಾಗೂ ಕುಟುಂಬದ ಸದಸ್ಯರೆಲ್ಲರೂ ನೆಮ್ಮದಿ ಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಇದೇ ವೇಳೆ ಮೈಸೂರಿನ ಪಾರಂಪರಿಕ ಕಟ್ಟಡ ಒಡೆಯುವ ಹಿಂದೆ ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಮಾತು ಸಹ ದಟ್ಟವಾಗುತ್ತಿದೆ.












Click it and Unblock the Notifications