ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್
ಮೈಸೂರು, ಸೆಪ್ಟೆಂಬರ್ 27 : ನವರಾತ್ರಿಯ 7ನೇ ದಿನವಾದ ಇಂದು(ಸೆ.27) ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮೈಸೂರು ಮಹಾ ಸಂಸ್ಥಾನದ ವಿದ್ಯಾದೇವಿಯಾದ ಸರಸ್ವತಿಗೆ ಅಗ್ರ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿಗೆ ಪೂಜೆ ಸಲ್ಲಿಸಿದರು. ಆಯುಧ ಪೂಜೆಗೂ ಮುನ್ನವೇ ಮೈಸೂರು ಅಂಬಾವಿಲಾಸ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮಹಾರಾಜರಿಂದ ಸರಸ್ವತಿ ಪೂಜೆ ನೆರವೇರುತ್ತದೆ.
ಈ ವೇಳೆ ಶ್ರೀ ದುರ್ಗೆ, ವಾಗ್ದೇವಿ, ವೀಣಾಪಾಣಿ, ಪುಸ್ತಕ ದಾರಿ, ಮಹಾಲಕ್ಷ್ಮಿ, ಮಹಾ ಸರಸ್ವತಿಯ ಅಗ್ರಪೂಜೆಯನ್ನು ನವರಾತ್ರಿಯಲ್ಲಿ ಮಹಾರಾಜರು ನೆರವೇರಿಸುವುದು ವಿಶೇಷ.

ಸರಸ್ವತಿ ಪೂಜಾ ಕೈಂಕರ್ಯದಲ್ಲಿ ಮೈಸೂರು ಅರಸರ ಕುಲದೇವತೆ ಚಾಮುಂಡೇಶ್ವರಿ ದೇವಿ, ವಿಘ್ನಗಳ ನಿವಾರಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರಸ್ವತಿ ಪೂಜೆ ಅಂಗವಾಗಿ ಸರಸ್ವತಿಯ ಭಾವಚಿತ್ರದ ಜತೆಗೆ ಅರಮನೆಯಲ್ಲಿರುವ ವೀಣೆಗಳು, ಪುರಾತನ ಕಾಲದ ಗ್ರಂಥ, ಹಸ್ತಪ್ರತಿಗಳಿಗೆ ಯದುವೀರ್ ಅವರು ಪೂಜೆ ಸಲ್ಲಿಸಿದರು.
ಬಳಿಕ, ಅಲಪೀಠ ಪೂಜೆ, ದ್ವಾರಪಾಲಕ ಪೂಜೆ, ಮಂಟಪ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಈ ವೇಳೆ ರಾಜಪುರೋಹಿತರು, ಅರಮನೆ ಪಂಡಿತರು ವೇದ, ಮಂತ್ರಘೋಷಗಳನ್ನು ಹೇಳುವ ಮೂಲಕ ಶಾರದಾಂಬೆಯನ್ನು ಸ್ತುತಿಸಿದರು.












Click it and Unblock the Notifications