ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವಲು ಒಪ್ಪುವುದಿಲ್ಲವೆಂದ ಯದುವೀರ್
ಮೈಸೂರು, ಫೆಬ್ರವರಿ 15: ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವಲು ತೀರ್ಮಾನಿಸಿರುವ ಮಹಾನಗರ ಪಾಲಿಕೆ ನಿರ್ಧಾರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ದೇವರಾಜ ಮಾರುಕಟ್ಟೆಯನ್ನು ಸುಣ್ಣಗಾರೆ ಬಳಸಿ ನಿರ್ಮಾಣ ಮಾಡಲಾಗಿದೆ. ದೇವರಾಜ ಮಾರುಕಟ್ಟೆಯ ವಾಸ್ತವ ಸ್ಥಿತಿ ಪರಿಶೀಲಿಸಲು ನೇಮಿಸಿದ್ದ ತಜ್ಞರ ಸಮಿತಿಯಲ್ಲಿ ಪ್ರೊಫೆಸರ್ ರಂಗರಾಜು ಅವರನ್ನು ಹೊರತುಪಡಿಸಿದರೆ ಬೇರೆ ಯಾರೂ ನುರಿತ ಪಾರಂಪರಿಕ ತಜ್ಞರು ಇರಲಿಲ್ಲ. ಹಾಗಾಗಿ ದೇವರಾಜ ಮಾರುಕಟ್ಟೆ ಕೆಡವಬೇಕೆಂದು ತಜ್ಞರ ಸಮಿತಿ ನೀಡಿರುವ ವರದಿ ಅವೈಜ್ಞಾನಿಕ" ಎಂದರು.
"ಹೆರಿಟೇಜ್ ಕಮಿಟಿಯಲ್ಲಿ ಪ್ರೊಫೆಸರ್ ರಂಗರಾಜು ಬಿಟ್ಟರೆ ಉಳಿದವರೆಲ್ಲ ಸಿವಿಲ್ ಇಂಜಿನಿಯರ್ ಗಳು. ಪ್ರೊಫೆಸರ್ ರಂಗರಾಜು ಆರ್ಕಿಯಾಲಜಿಸ್ಟ್. ಸಿವಿಲ್ ಇಂಜಿನಿಯರ್ ಗಳಿಗೆ ಕಾಂಕ್ರಿಟ್ ಕಟ್ಟಡದ ಬಗ್ಗೆ ತಿಳಿದಿರೋದು. ಅವರು ಅದರ ಬಗ್ಗೆ ತಿಳಿಸಿದರೆ ನಾನು ಒಪ್ಪಿಕೊಳ್ಳಬಹುದು. ಆದರೆ ಇದು ಪಾರಂಪರಿಕ ಕಟ್ಟಡ. ಕನ್ಸರ್ವೇಟಿವ್ ಆರ್ಕಿಟೆಕ್ಟ್ ನಿಂದ ಒಂದು ಅಭಿಪ್ರಾಯ ತಿಳಿದುಕೊಳ್ಳಬೇಕಾಗಿದೆ" ಎಂದು ಸ್ಪಷ್ಟಪಡಿಸಿದರು.

"ಕೋರ್ಟ್ ನಿಂದ ಯಾವುದೇ ಆದೇಶ ಬಂದಿಲ್ಲ. ಹೆರಿಟೇಜ್ ಕಮಿಟಿ ಅಭಿಪ್ರಾಯ ಬಂದ ನಂತರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕೋರ್ಟ್ ನಿಂದ ಆದೇಶ ಬಂದಿದೆ. ಕಟ್ಟಡ ಕೆಡವಬೇಕು ಎಂದು ಆದೇಶ ಬಂದಿಲ್ಲ. ಯಥಾಸ್ಥಿತಿ ಕಾಪಾಡುವಂತೆ ಹೇಳಿದೆ. ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್ ಹೇಳುತ್ತಿರುವುದು ತಪ್ಪು. ಎಲ್ಲರೂ ಕುಳಿತು ಸರಿಯಾಗಿ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ" ಎಂದರು.












Click it and Unblock the Notifications