ಜೂನ್ 27ಕ್ಕೆ ಯದುವೀರ್ ಒಡೆಯರ್ ವಿವಾಹ
ಮೈಸೂರು, ಏಪ್ರಿಲ್ 26 : ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ. ಜೂನ್ 27ರಂದು ಅಂಬಾವಿಲಾಸ ಅರಮನೆಯಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ವಿವಾಹಕ್ಕೆ ಸಂಬಂಧಿಸಿದ ಲಗ್ನಪತ್ರಿಕೆ ಶಾಸ್ತ್ರ ಅಂಬಾವಿಲಾಸ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಸೋಮವಾರ ಬೆಳಗ್ಗೆ 10.15 ರಿಂದ 10.40ರ ಒಳಗಿನ ಶುಭ ಮಿಥುನ ಲಗ್ನದಲ್ಲಿ ನಡೆಯಿತು. ರಾಜಸ್ಥಾನದ ಡುಂಗರಾಪುರ್ ರಾಜವಂಶಸ್ಥರಾದ ತ್ರಿಷಿಕಾ ಕುಮಾರಿ ಸಿಂಗ್ ಅವರ ತಂದೆ ಹರ್ಷವರ್ಧನ್ ಸಿಂಗ್ ಹಾಗೂ ಪೋಷಕರು ಲಗ್ನ ಪತ್ರಿಕೆ ಶಾಸ್ತ್ರದಲ್ಲಿ ಉಪಸ್ಥಿತರಿದ್ದರು. [ಯದುವೀರ ಪಟ್ಟಾಭಿಷೇಕದ ಚಿತ್ರಗಳು]

ರಾಜಸ್ಥಾನದ ಡುಂಗರಾಪುರ್ ಮನೆತನದ ಹರ್ಷವರ್ಧನ್ ಸಿಂಗ್, ಮಹೇಶ್ರೀ ಕುಮಾರಿ ಅವರ ಕಿರಿಯ ಪುತ್ರಿ ತ್ರಿಷಿಕಾ ಕುಮಾರಿ ಸಿಂಗ್ ಅವರ ಜೊತೆ ಯದುವೀರ್ ಒಡೆಯರ್ ಅವರ ವಿವಾಹ ನಿಶ್ಚಯವಾಗಿತ್ತು. ಜೂನ್ 24 ರಂದು ಮದುವೆ ಕಾರ್ಯಗಳು ಆರಂಭವಾಗಲಿದ್ದು, ಜೂನ್ 27ರಂದು ಅಂಬಾ ವಿಲಾಸ ಅರಮನೆಯಲ್ಲಿ ಅದ್ದೂರಿ ವಿವಾಹ ನಡೆಯಲಿದೆ.[ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
2015ರ ಫೆಬ್ರವರಿ 23ರಂದು ದತ್ತು ಸ್ವೀಕಾರ ಸಮಾರಂಭ ಅರಮನೆಯಲ್ಲಿ ನಡೆದಿತ್ತು. ಮೇ 28ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆದಿತ್ತು. ನಂತರ ದಸರಾದಲ್ಲಿ ಅವರು ಖಾಸಗಿ ದರ್ಬಾರ್ ನಡೆಸಿದ್ದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಮತ್ತು ಖಾಸಗಿ ದರ್ಬಾರ್ ನೋಡಲು ತ್ರಿಷಿಕಾ ಕುಮಾರಿ ಸಿಂಗ್ ಮೈಸೂರಿಗೆ ಆಗಮಿಸಿದ್ದರು. [ಯುವರಾಣಿ ತ್ರಿಷಿಕಾ ಕಾಣದೆ ನಿರಾಶರಾದ ಜನ]
ಅರಮನೆಯಲ್ಲಿ ನಡೆದ ಯದುವೀರ್ ಒಡೆಯರ್ ಅವರ ದತ್ತು ಸ್ವೀಕಾರ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ಜನರಿಗೆ, ಶೀಘ್ರದಲ್ಲಿಯೇ ಅವರ ವಿವಾಹ ಮಹೋತ್ಸವನ್ನು ನೋಡುವ ಅವಕಾಶ ದೊರೆಯಲಿದೆ.












Click it and Unblock the Notifications