ಜೋಡಿ ನಂದಿ ವಿಗ್ರಹ ನೋಡಲು ಸ್ವಲ್ಪ ದಿನದಲ್ಲೇ ಯದುವೀರ್ ಭೇಟಿ
ಮೈಸೂರು, ಜುಲೈ 17: ಮೈಸೂರಿನ ಅರಸಿನಕೆರೆ ಗ್ರಾಮದಲ್ಲಿ ಪತ್ತೆಯಾದ ಜೋಡಿ ನಂದಿ ವಿಗ್ರಹಕ್ಕೆ ಸಂಬಂಧಿಸಿದಂತೆ ಗ್ರಾಮದ ಕೆಲ ಮುಖಂಡರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ನಂದಿ ವಿಗ್ರಹವನ್ನು ನೋಡುವಂತೆ ಮನವಿ ಸಹ ಮಾಡಿದ್ದಾರೆ.
ಇದಕ್ಕೆ ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡುವುದಾಗಿ ಯದುವೀರ್ ಭರವಸೆಯನ್ನೂ ನೀಡಿದ್ದಾರೆ.
ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಅವರು "ಅರಸಿನಕೆರೆ ನಂದಿ ವಿಗ್ರಹ ಪತ್ತೆಯಾಗಿರುವ ವಿಚಾರ ತಿಳಿದು ಬಂದಿದೆ. ಅರಮನೆಯಲ್ಲಿ ಜಯಚಾಮರಾಜ ಒಡೆಯರ್ ಅವರ ಜನ್ಮದಿನದ ಕಾರ್ಯಕ್ರಮದ ಬಳಿಕ ಅಲ್ಲಿಗೆ ಭೇಟಿ ನೀಡುತ್ತೇನೆ. ವಿಗ್ರಹಕ್ಕೂ ರಾಜಮನೆತನಕ್ಕೂ ಸಂಬಂಧವಿದೆ. ಆದರೆ ಈ ಕುರಿತು ಇನ್ನು ಮಾಹಿತಿ ಸಿಕ್ಕಿಲ್ಲ. ನಂದಿ ವಿಗ್ರಹವನ್ನು ಹೊರ ತೆಗೆದಿರುವುದು ಖುಷಿ ತಂದಿದೆ. ಇನ್ನೆರಡು ಮೂರೂ ದಿನಗಳಲ್ಲಿ ನಾನು ಸ್ಥಳಕ್ಕೆ ಭೇಟಿ ನೀಡುತ್ತೇನೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ" ಎಂದು ಹೇಳಿದ್ದಾರೆ.

"ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಮ್ಮ ತಾಯಿ ಪ್ರಮೋದಾದೇವಿ ಅವರ ವತಿಯಿಂದ ಒಂದು ಸಂಸ್ಥೆ ತೆರೆದಿದ್ದೇವೆ. ಸರ್ಕಾರದಿಂದ ಕೋರಿಕೆ ಬಂದರೆ ಆ ವಿಗ್ರಹಗಳ ಸಂರಕ್ಷಣೆ ಮಾಡಲು ನಾವು ಸಿದ್ಧ. ಆ ಭಾಗದಲ್ಲಿ 10ಕ್ಕೂ ಹೆಚ್ಚು ಕಾಮಗಾರಿಗಳಿಗೆ ಚಾಮರಾಜ ಒಡೆಯರ್ ರವರೇ ಪೂಜೆ ಸಲ್ಲಿಸಿದ್ದರ ಬಗ್ಗೆ ಮಾಹಿತಿ ಇದೆ. ಅರಮನೆಯ ವಿಗ್ರಹಗಳು ಹಾಗೂ ಸಂಪತ್ತನ್ನು ರಕ್ಷಣೆ ಮಾಡುವುದು ಸರ್ಕಾರದ ಕೆಲಸ. ಇದನ್ನು ಸರ್ಕಾರವೇ ರಕ್ಷಣೆ ಮಾಡಬೇಕು. ಸರ್ಕಾರಕ್ಕೆ ಸಹಾಯ ಬೇಕಿದ್ದರೆ ಅರಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ" ಎಂದು ತಿಳಿಸಿದ್ದಾರೆ.












Click it and Unblock the Notifications