"ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ. ಅದಕ್ಯಾಕೆ ಜನ?"
ಮೈಸೂರು, ಅಕ್ಟೋಬರ್ 10: ಈ ಬಾರಿಯ ಮೈಸೂರು ದಸರಾ ಆಚರಣೆ ಕುರಿತು ಈಗಾಗಲೇ ಕೆಲವು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಸರಳ ದಸರಾ ಎಂದು ಹೇಳಿ, ಕೋಟಿಗಟ್ಟಲೆ ಹಣ ಖರ್ಚು ಮಾಡುವ ಅವಶ್ಯಕತೆ ಏನಿದೆ? ಕೊರೊನಾ ಸೋಂಕಿನ ಬಿಕ್ಕಟ್ಟಿನ ನಡುವೆ, ನಗರದಲ್ಲಿ ಸುಮ್ಮನೆ ವಿದ್ಯುತ್ ದೀಪಾಲಂಕಾರ ಮಾಡುತ್ತಿದ್ದು, ಇದನ್ನು ನೋಡಲು ಜನರು ಬರದೇ ಇರುತ್ತಾರೆಯೇ? ಈ ಮೂಲಕ ಸೋಂಕು ಹರಡಲು ಕಾರಣವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದೀಗ ಈ ಕುರಿತು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಆಚರಣೆ ಬಗ್ಗೆ ವಿಶ್ವನಾಥ್ ತೀವ್ರ ಆಕ್ಷೇಪ
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ. ಅದಕ್ಯಾಕೆ ಜನ ಬೇಕು ಎಂದು, ಕಳೆದ ವರ್ಷ ದಸರಾ ಉದ್ಘಾಟಿಸಿದ್ದ ಎಸ್.ಎಲ್.ಭೈರಪ್ಪ ಅವರು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ದಸರಾಗೆ ಜನ ಸೇರುವುದನ್ನು ಆಕ್ಷೇಪಿಸಿದರು. ಎಲ್ಲರೂ ಅವರ ಮನೆಯಲ್ಲೇ ದಸರಾ ಮಾಡಲಿ. ಬೆಟ್ಟದಲ್ಲಿ ಪೂಜೆ ಮಾಡಲಿ. ಅದಕ್ಕೆ 200 ಮಂದಿ ಯಾಕೆ ಭಾಗಿಯಾಗಬೇಕು?. ಜಂಬೂಸವಾರಿ ನಡೆಸೋದು ಮಾವುತರು. ಅದಕ್ಕೂ ಜನರು ಬೇಕಾಗಿಲ್ಲ. ಕೆಲವರು ದಸರಾದಿಂದ ಬಿಸಿನೆಸ್ ಅಂತಾರೆ. ಜನರನ್ನು ಒಟ್ಟಾಗಿ ಸೇರಿಸಿ ಕೊರೊನಾ ಹೆಚ್ಚಾದರೆ ಹೊಣೆ ಯಾರು? ಬಿಸಿನೆಸ್ ಎಲ್ಲ ಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ" ಎಂದು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದಸರಾ ಆಚರಣೆಗೆ ಅವಕಾಶ ಮಾಡಿಕೊಡುವ ಮೂಲಕ ಬಂಬೂ ಸವಾರಿ ಮಾಡಿಸಲು ಹೊರಟ್ಟಿದ್ದೀರಾ ಎಂದು ಎಂಎಲ್ ಸಿ ಎಚ್.ವಿಶ್ವನಾಥ್ ಪ್ರಶ್ನಿಸಿದ್ದರು. ಸರ್ಕಾರ ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹೊರಟಿದ್ದು, ಮಹಿಷನನ್ನು ಸಂಹರಿಸಿದಂತೆ ಚುನಾಯಿತ ಪ್ರತಿನಿಧಿಗಳನ್ನೂ ಚಾಮುಂಡಿ ದೇವಿ ದಮನಿಸಲಿ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜೇ ಅರಸ್ ಅವರೂ ಆಕ್ರೋಶ ವ್ಯಕ್ತಪಡಿಸಿದ್ದರು.