ಎಚ್.ಡಿ.ಕೋಟೆಯಲ್ಲಿ ಗೃಹ ರಕ್ಷಕ ಸಿಬ್ಬಂದಿ ಕೊಲೆ
ಮೈಸೂರು, ಅ.6 : ಮೈಸೂರು ಅರಮನೆ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಎಚ್.ಡಿ.ಕೋಟೆ ಬಳಿ ಈ ಕೊಲೆ ನಡೆದಿದ್ದು, ಆಕೆಯ ಪ್ರಿಯಕರನೇ ಈ ಕೊಲೆ ಮಾಡಿದ್ದಾನೆ.
ಮೃತಪಟ್ಟ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಎಚ್.ಡಿ.ಕೋಟೆಯ ನೂರಲುಕೊಪ್ಪಲು ನಿವಾಸಿ ಪ್ರಿಯಾಂಕಾ (24) ಎಂದು ಗುರುತಿಸಲಾಗಿದೆ. ದಸರಾ ಮುಗಿದ ಬಳಿಕವೂ ಅರಮನೆ ಆವರಣದಲ್ಲಿ ಕರ್ತವ್ಯ ನಿರತರಾಗಿದ್ದ ಪ್ರಿಯಾಂಕಾರನ್ನು ಆಕೆಯ ಪ್ರಿಯಕರ ಭಾನುವಾರ ಸಂಜೆ ಎಚ್.ಡಿ.ಕೋಟೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದು, ಆತ ಪರಾರಿಯಾಗಿದ್ದಾನೆ. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

ಗೃಹ ರಕ್ಷಕ ದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಿಯಾಂಕಾಗೆ ವಿವಾಹವಾಗಿದ್ದು, ಒಂದು ಗಂಡು ಮಗುವಿದೆ. ಆದರೆ, ಗಂಡನಿಂದ ದೂರವಾಗಿರುವ ಈಕೆ ಒಂಟಿಯಾಗಿ ವಾಸಿಸುತ್ತಿದ್ದಾಳೆ. ಸೋಮಸುಂದರ ಎಂಬುವವರ ಪರಿಚಯ ಮಾಡಿಕೊಂಡ ಪ್ರಿಯಾಂಕಾ ಅವರನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಭಾನುವಾರ ಸೋಮಸುಂದರ ಪ್ರಿಯಾಂಕಾರ ಕೊಲೆ ಮಾಡಿದ್ದಾನೆ.
ಘಟನೆ ವಿವರ : ಭಾನುವಾರ ಸಂಜೆ ಬಾಡಿಗೆ ಕಾರು ಪಡೆದು ಮೈಸೂರು ಅರಮನೆ ಸಮೀಪ ಬಂದ ಸೋಮಸುಂದರ ಎಚ್.ಡಿ.ಕೋಟೆಗೆ ಹೋಗಿ ಬರೋಣ ಎಂದು ಪ್ರಿಯಾಂಕಾರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಇಬ್ಬರು ಜಗಳ ಆರಂಭಿಸಿದ್ದಾರೆ. ಆದರೆ, ಎಚ್.ಡಿ.ಕೋಟೆ ಬಳಿ ಪ್ರಿಯಾಂಕಾ ಜೋರಾಗಿ ಕಿರುಚಿಕೊಂಡಾಗ ಕಾರು ಚಾಲಕ ಕಾರನ್ನು ನಿಲ್ಲಿಸಿ ಸ್ಥಳೀಯರನ್ನು ಕರೆಯಲು ಓಡಿದ್ದಾನೆ.
ಸ್ಥಳೀಯರು ಕಾರಿನ ಬಳಿ ಬರುವಷ್ಟರಲ್ಲಿ ಸೋಮಸುಂದರ ಪ್ರಿಯಾಂಕ ಕುತ್ತಿಗೆಗೆ ಹಗ್ಗ ಬಿಗಿದು ಆಕೆಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಕಾರು ಚಾಲಕ ಎಚ್.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೋಮಸುಂದರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications