ಅಪ್ಪನನ್ನು ಕೊಂದ ಒಂದು ವಾರದಲ್ಲೆ ಮಗನನ್ನೂ ಕೊಂದರು; ಅಷ್ಟಕ್ಕೂ ನಡೆದಿದ್ದೇನು?
ಮೈಸೂರು, ಜನವರಿ 8: ತಂದೆಯನ್ನು ಕೊಲೆಗೈದ ಒಂದು ವಾರದಲ್ಲಿಯೇ ಮಗನನ್ನೂ ಹಾಡಹಗಲೇ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಅಮಾನುಷ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕೊಲೆಯಾದ ಯುವಕನನ್ನು ಮಂಡಕಳ್ಳಿ ಗ್ರಾಮದ ಮರಿಕೋಟೆ ಗೌಡರ ಪುತ್ರ ಸತೀಶ್(25) ಎಂದು ಗುರುತಿಸಲಾಗಿದೆ. ಇವರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಂಡಕಳ್ಳಿಯಲ್ಲಿಯೂ ಈ ಹಿಂದೆ ಗಲಾಟೆಯೂ ನಡೆದಿತ್ತು ಎನ್ನಲಾಗಿದೆ. ಶುಕ್ರವಾರದಂದು ಸತೀಶ್ ಅವರು ಮೈಸೂರಿಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರ ಬಳಸಿ ಕೊಚ್ಚಿ ಕೊಲೆಗೈದಿದ್ದಾರೆ.
ಮೈಸೂರಿನ ಕೂರ್ಗಲ್ಲು ಗ್ರಾಮದಲ್ಲಿ ಸಿಕ್ತು ಶಿಲಾಯುಗದ ಕಲ್ಲಿನ ಕೊಡಲಿ!
ಸತೀಶ್ ಅವರ ತಂದೆ ಮರಿಕೋಟೆ ಗೌಡ ಅವರನ್ನು ಕೂಡ ಕಳೆದ ಜನವರಿ 2ರಂದು ಮಂಡಕಳ್ಳಿ ಸಮೀಪವೇ ದುಷ್ಕರ್ಮಿಗಳು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ ಕೊಲೆ ಮಾಡಿದ್ದರು. ಕಳೆದ ಬಾರಿ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರೆ ಈ ಬಾರಿ ಮಾರಕಾಸ್ತ್ರಗಳನ್ನು ಬಳಸಲಾಗಿದೆ.
ಮರಿಕೋಟೆ ಗೌಡ ಅವರ ಪತ್ನಿ ಈಗಾಗಲೇ ನಿಧನರಾಗಿದ್ದು, ಓರ್ವ ಪುತ್ರ ಮತ್ತು ಪುತ್ರಿ ಇದ್ದರು. ಕಳೆದ ಶನಿವಾರ ಬೆಳಿಗ್ಗೆ ೭.೩೦ಕ್ಕೆ ಮಹದೇವಪುರದಿಂದ ಹೋಗುವಾಗ ಮಂಡಕಳ್ಳಿಯಿಂದ ಮುಕ್ಕಾಲು ಕಿ.ಮೀ ಮುಂದೆ ಇರುವ ಕಾಲುವೆ ಬಳಿ ಅವರ ಬೈಕ್ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ದೊಣ್ಣೆಗಳಿಂದ ಗೌಡ ಅವರ ತಲೆ ಭಾಗಕ್ಕೆ ತೀವ್ರವಾಗಿ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆಯ ಉದ್ದೇಶ ಏನು ಎಂಬುದೇ ತಿಳಿಯದೆ ಕೊಲೆಗಾರರನ್ನು ಬಂಧಿಸಲು ವಿಫಲವಾಗಿದ್ದರು.
ಇದೀಗ ಮಗನನ್ನೂ ಕೊಂದಿರುವುದರಿಂದ ಆಸ್ತಿ ವಿಚಾರವಾಗಿ ತಂದೆ-ಮಗ ಇಬ್ಬರನ್ನೂ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಪೋಲೀಸರು ಕ್ಷಿಪ್ರವಾಗಿ ತಂದೆಯ ಕೊಲೆಗಾರರನ್ನು ಬಂಧಿಸಿದ್ದಿದ್ದರೆ ಮಗನ ಕೊಲೆ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.