ಹೈಕಮಾಂಡ್ ಭೇಟಿಯ ನಂತರ ಬಾದಾಮಿ ಬಗ್ಗೆ ನಿರ್ಧಾರ : ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 21 : "ಬಾದಾಮಿಯಲ್ಲಿ ಸ್ಪರ್ಧೆ ಮಾಡುವಂತೆ ಆ ಭಾಗದ ಮುಖಂಡರು ಒತ್ತಾಯಿಸ್ತಿದ್ದಾರೆ. ಇಂದು ಬೆಂಗಳೂರಿಗೆ ಹೋಗ್ತಿದ್ದಿನಿ, ಹೈಕಮಾಂಡ್ ಜತೆ ಚರ್ಚೆ ಮಾಡಿ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಲ್ಲಿಯವರೆಗೆ ಏನನ್ನೂ ಹೇಳುವುದಿಲ್ಲ."
ಹೀಗೆಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸಿದ್ದರಾಮಯ್ಯನವರು ಶನಿವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವ ಅವರು ಶುಕ್ರವಾರ ಭಾರೀ ಜನಸ್ತೋಮದೊಂದಿಗೆ ನಾಮಪತ್ರ ಸಲ್ಲಿಸಿದರು.
11 ಕೋಟಿ ರುಪಾಯಿ ಆಸ್ತಿಯ ಒಡೆಯರಾಗಿರುವ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ, ತಮ್ಮ ಒಂದಾನೊಂದು ಕಾಲದ ಗೆಳೆಯ ಮತ್ತು ಇದೀಗ ಜೆಡಿಎಸ್ ಸೇರಿರುವ ಜಿಟಿ ದೇವೇಗೌಡ ಅವರ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸೆಣೆಸಲಿದ್ದಾರೆ. ಇಬ್ಬರೂ ಒಂದೇ ದಿನ ನಾಮಪತ್ರ ಸಲ್ಲಿಸಿದ್ದಾರೆ.

ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದು ಅಷ್ಟು ಸಮಂಜಸವಲ್ಲ, ಇಲ್ಲಿ ಗೆಲುವು ಸುಲಭವಲ್ಲ ಎಂದು ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಬಾದಾಮಿಯಿಂದಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಕಾರಾತ್ಮಕ ಪ್ರತಿಕ್ರಿಯೆ ನೀಡಿತ್ತು.
ಸಿದ್ದರಾಮಯ್ಯನವರು ಸೋಲಿನ ಭೀತಿಯಿಂದ ಎರಡು ಕಡೆಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿರುವ ಬಗ್ಗೆ ತಿರುಗೇಟು ನೀಡಿದ ಅವರು, ಅವರದೇ ಪಕ್ಷದ ಕುಮಾರಸ್ವಾಮಿಯವರು ಎರಡು ಕ್ಷೇತ್ರಗಳಿಂದ (ರಾಮನಗರ ಮತ್ತು ಚನ್ನಪಟ್ಟಣ) ಸ್ಪರ್ಧಿಸುತ್ತಿಲ್ಲವೆ. ಅವರಿಗೂ ಸೋಲಿನ ಭೀತಿಯೇ ಎಂದು ಮರುಪ್ರಶ್ನಿಸಿದರು.
ಮಂಡ್ಯದಲ್ಲಿ ಅಂಬರೀಶ್ ತೋರಿಸುತ್ತಿರುವ ಅನಾಸಕ್ತಿಯ ಬಗ್ಗೆ ಅವರನ್ನು ಮಾಧ್ಯಮದವರು ಎಳೆದಾಗ, ಅವರಿಗೆ ಬಿ ಫಾರಂ ಕೊಟ್ಟಾಗಿದೆ. ಇನ್ನು ಚುನಾವಣೆಗೆ ನಿಲ್ಲುವುದು ಬಿಡುವುದು ಅವರಿಷ್ಟ. ಅವರನ್ನು ಇನ್ನು ನಾನು ಭೇಟಿಯಾಗಲು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಕಟುವಾಗಿ ನುಡಿದರು.
ತಮ್ಮ ಆಕ್ರೋಶವನ್ನು ಯಡಿಯೂರಪ್ಪ ಮತ್ತು ಅಮಿತ್ ಶಾ ವಿರುದ್ಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಯಡಿಯೂರಪ್ಪನವರು ಮೊದಲು ಶಿಕಾರಿಪುರದಿಂದ ಗೆದ್ದು ತೋರಿಸಲಿ, ನಂತರ ಮಾತಾಡಲಿ. ಅವರು ಯಾಕೆ ಜೈಲಿಗೆ ಹೋಗಿದ್ದೆ ಅಂತ ಜನರ ಮುಂದೆ ಹೇಳಲಿ ಎಂದು ವ್ಯಂಗ್ಯವಾಡಿದರು.
ಅಲ್ಲದೆ, ಅಮಿತ್ ಶಾ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ. ಮೊದಲು ಅವರು ತಮ್ಮ ಮಗನ ಭ್ರಷ್ಟಾಚಾರದ ಬಗ್ಗೆ ಮಾತಾಡಲಿ. ತಾವೇ ಸ್ವತಃ ಜೈನ್ ಅಗಿದ್್ದು, ಹಿಂದೂ ಅಂತ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ನುಡಿದರು.












Click it and Unblock the Notifications