ಮೈಸೂರು ಬಹುರೂಪಿ ರಂಗೋತ್ಸವಕ್ಕೆ ಓಂ ಪುರಿ ಬರಬೇಕಿತ್ತಾ?
ಮೈಸೂರು, ಜನವರಿ 7: ಹಿರಿಯ ಚಲನಚಿತ್ರ ನಟ ಓಂಪುರಿ ನಿಧನ ಹಿನ್ನೆಲೆ ಮೈಸೂರಿನ ರಂಗಾಯಣದಲ್ಲಿ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆಗೆ ಅತಿಥಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಹೌದು, ಪ್ರತಿ ವರ್ಷ ರಂಗಾಯಣದಿಂದ ನಡೆಸಲಾಗುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಈ ಬಾರಿಯ ನಟ ಓಂಪುರಿಯನ್ನು ಆಯ್ಕೆಮಾಡಲಾಗಿತ್ತು. ಜನವರಿ 13 ರಿಂದ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಹಿನ್ನೆಲೆ ಒಂದು ದಿನ ಮುಂಚಿತವಾಗಿಯೇ ಮೈಸೂರಿಗೆ ಬರುವುದಾಗಿ ತಿಳಿಸಿದ್ದ ಓಂಪುರಿಯವರ ಅಕಾಲಿಕ ನಿಧನಕ್ಕೆ ರಂಗಾಯಣ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಬರಲು ಒಪ್ಪಿದ್ದ ಓಂಪುರಿ
ಈ ಬಾರಿ ಬಹುರೂಪಿ ನಾಟಕೋತ್ಸವದ ಉದ್ಘಾಟನೆಗೆ ಓಂಪುರಿಯವರನ್ನು ಆಹ್ವಾನಿಸಲು ನಿರ್ಧರಿಸಿದ ಮೇಲೆ ಅವರಿಗೆ ಮೊಬೈಲ್ ಕರೆ ಮಾಡಿ ಖಚಿತಪಡಿಸಿಕೊಳ್ಳಲು ಉಪನಿರ್ದೇಶಕಿ ನಿರ್ಮಲ ಮಠಪತಿ ತುಂಬಾ ಸಲ ಪ್ರಯತ್ನಿಸಿದ್ದರು. ಆದರೆ ನವೆಂಬರ್ 25 ರಂದು ನಿರ್ಮಲ ಅವರಿಗೆ ಫೋನ್ ಮಾಡಿದ್ದ ಓಂಪುರಿ 10 ನಿಮಿಷಗಳ ಕಾಲ ಮಾತನಾಡಿ ಬಹುರೂಪಿ ನಾಟಕೋತ್ಸವಕ್ಕೆ ಬರುವ ಭರವಸೆ ನೀಡಿದ್ದರು.
ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೂ ಮುನ್ನ ಚಾಮುಂಡಿ ತಾಯಿಯ ದರ್ಶನ ಪಡೆದು ಹೋಗುತ್ತೇನೆ ಎಂದು ಹೇಳಿದ್ದ ಹಿರಿಯ ನಟ ಓಂಪುರಿ ನಿಧನ ಕಲಾವಿದರಿಗೆ ಆಘಾತ ತಂದಿದೆ.[ಮರೆಯಲಾಗದ ಕಲಾವಿದ ಓಂ ಪುರಿಗೆ ನುಡಿನಮನ]
ಕನ್ನಡದಲ್ಲೇ ಮಾತನಾಡಿದ್ದ ಹಿರಿಯ ನಟ !
ಭರವಸೆ ನೀಡಿದ ಕೆಲ ಸಮಯದ ಬಳಿಕ ಓಂಪುರಿಯವರು ಮತ್ತೆ ಫೋನ್ ಮಾಡಿ, ಚೆನ್ನಾಗಿದ್ದೀರಾ ಊಟ ಆಯ್ತ ಎಂದು ಕನ್ನಡದಲ್ಲಿ ಮಾತನಾಡಿದ್ದರು. ಅವರು ತಮ್ಮ ಮಾತನ್ನು ಮುಂದುವರೆಸಿ ಬಹುರೂಪಿ ನಾಟಕೋತ್ಸವ ಉದ್ಘಾಟನೆಗೆ ನಾನು ಬರುತ್ತೇನೆ ಯಾಕೆಗೊತ್ತಾ ? ನಾನು ಚಾಮುಂಡಿಬೆಟ್ಟದಲ್ಲಿ ಬಿ.ವಿ. ಕಾರಂತ್ ನಿರ್ದೇಶನದ ಚಲನಚಿತ್ರದಲ್ಲಿ ನಟಿಸಿದ್ದೆ. ಆದ್ದರಿಂದ ಈ ಬಾರಿ ಬಹುರೂಪಿ ಉದ್ಘಾಟನೆಗೂ ಮೊದಲು ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದು ಬರುತ್ತೇನೆ ಎಂದಿದ್ದರಂತೆ.

ಓಪುರಿ ನಿಧನ ಹಿನ್ನೆಲೆ ಉಮಾಶ್ರೀಗೆ ಸ್ಥಾನ
ಆದರೆ ಹಿರಿಯ ಕಲಾವಿದ ಓಂಪುರಿ ನಿಧನದಿಂದ ಬಹುರೂಪಿ ಉದ್ಘಾಟನೆಗೆ ಹೊಸ ಅತಿಥಿಯನ್ನು ಆಯ್ಕೆ ಮಾಡಲು ಮೈಸೂರು ರಂಗಾಯಣ ಅಧಿಕಾರಿ ವರ್ಗ ಶುಕ್ರವಾರ ವಿಶೇಷ ಸಭೆ ನಡೆಸಿತು. ಈ ಸಭೆಯಲ್ಲಿ ಹಿರಿಯ ಕಲಾವಿದೆ ಹಾಗೂ ಸಚಿವೆ ಉಮಾಶ್ರೀ ಅವರನ್ನು ಉದ್ಘಾಟಕರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ರಂಗಾಯಣದೊಂದಿಗೆ ಅವಿನಾಭವ ನಂಟು ಹೊಂದಿದ ಓಂಪುರಿ ಯನ್ನು ಕಳೆದುಕೊಂಡ ಕಲಾವಿದರು ಮಾತ್ರ ದುಃಖದ ಮಡುವಿನಲ್ಲಿರುವುದಂತೂ ನಿಜ.












Click it and Unblock the Notifications