ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಜೆಡಿಎಸ್ ತಂತ್ರ: ಯಾರಿಗೆ ಲಾಭ? ಯಾರಿಗೆ ನಷ್ಟ?

ಮೈಸೂರು, ಜನವರಿ 18: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಕೃಷ್ಣರಾಜ(ಕೆ.ಆರ್.) ಕ್ಷೇತ್ರ ಮೇಲ್ನೋಟಕ್ಕೆ ಬಿಜೆಪಿಯ ಭದ್ರಕೋಟೆಯಂತೆ ಕಂಡು ಬಂದರೂ ಇಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ. ಬಿಜೆಪಿಯಲ್ಲಿ ಟಿಕೆಟ್ ವಿಚಾರಕ್ಕೇನಾದರೂ ಸ್ವಲ್ಪ ಮಟ್ಟಿಗೆ ಅಸಮಾಧಾನ ಕಂಡು ಬಂದರೂ ಅದರ ಲಾಭ ಕಾಂಗ್ರೆಸ್ ಗೆ ಆಗುವುದಂತು ಖಚಿತ. ಈಗಾಗಲೇ ಜೆಡಿಎಸ್ ನಿಂದ ಕೆ.ವಿ.ಮಲ್ಲೇಶ್ ರವರಿಗೆ ಟಿಕೆಟ್ ನೀಡಲಾಗಿದ್ದು, ಸ್ವತಃ ಹೆಚ್.ಡಿ.ಕುಮಾರಸ್ವಾಮಿಯೇ ಕ್ಷೇತ್ರಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ.

ಎಲ್ಲೋ ಒಂದು ಕಡೆ ಜೆಡಿಎಸ್‌ಗೆ ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿದೆ. ಇದನ್ನು ಸರಿಸಿ ಸರ್ವರ ಪಕ್ಷ ಎಂಬುದನ್ನು ಬಿಂಬಿಸಲು ಮತ್ತು ವೀರಶೈವ ಲಿಂಗಾಯಿತರನ್ನು ಓಲೈಸಿಕೊಳ್ಳಲು ಜೆಡಿಎಸ್ ಮುಂದಾಗಿದ್ದು ಅದರಂತೆ ಕೆ.ಆರ್.ಕ್ಷೇತ್ರದಿಂದಲೇ ಶರಣರನ್ನು ಸೇರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಸಂಬಂಧ ವೀರಶೈವರ ಮನವೊಲಿಸುವ ಕೆಲಸಕ್ಕೆ ಜೆಡಿಎಸ್ ಮುಂದಾಗಿದು, ಒಂದಷ್ಟು ಮುಖಂಡರು ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿದೆ.

ಈಗಾಗಲೇ ಜೆಡಿಎಸ್ ನಿಂದ ಅಭ್ಯರ್ಥಿಯ ಅಧಿಕೃತ ಘೋಷಣೆಯಾಗಿರುವುದರಿಂದಾಗಿ ಕೆ.ವಿ.ಮಲ್ಲೇಶ್ ಅವರು ಚುನಾವಣಾ ಪ್ರಚಾರಕ್ಕಿಳಿದಿದ್ದು ಮತದಾರರನ್ನು ಅದರಲ್ಲೂ ವೀರಶೈವಲಿಂಗಾಯಿತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು ಕ್ಷೇತ್ರದ ತುಂಬಾ ಸಂಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿಲ್ಲ. ಆದರೆ ಮೇಲ್ನೋಟಕ್ಕೆ ಬಿಜೆಪಿಯಿಂದ ಹಾಲಿ ಶಾಸಕ ಎಸ್.ಎ.ರಾಮದಾಸ್, ಕಾಂಗ್ರೆಸ್ ನಿಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ಟಿಕೆಟ್ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಕ್ಷೇತ್ರದ ಜನರಿಗೂ ಅವರನ್ನು ಹೊರತುಪಡಿಸಿ ಬೇರೆಯವರ ಪರಿಚಯ ಇದ್ದಂತಿಲ್ಲ.

ಎಲ್ಲ ಪಕ್ಷಗಳು ಗೆಲವು ಕಂಡ ಕೆ.ಆರ್ ಕ್ಷೇತ್ರ

ಎಲ್ಲ ಪಕ್ಷಗಳು ಗೆಲವು ಕಂಡ ಕೆ.ಆರ್ ಕ್ಷೇತ್ರ

ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕ್ಷೇತ್ರದಲ್ಲಿ ಚುನಾವಣಾ ಕಣ್ಕಕಿಳಿಯುವವರ ಸಂಖ್ಯೆ ಹೆಚ್ಚಾಗಿರುವುದರಂತು ನಿಜ. ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಪಕ್ಷೇತರರು ಸೇರಿದಂತೆ ಎಲ್ಲ ಪಕ್ಷಗಳು ಗೆಲುವು ಕಂಡಿವೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಜೋರಾಗಿದೆ. ಸದ್ಯ ಕ್ಷೇತ್ರದಲ್ಲಿ ಶಾಸಕರಾಗಿರುವ ಬಿಜೆಪಿಯ ಎಸ್.ಎ.ರಾಮದಾಸ್ ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನಡುವೆ ರಾಜಕೀಯವಾಗಿ ಬಹಳ ವರ್ಷಗಳಿಂದ ಪೈಪೋಟಿ ನಡೆಯುತ್ತಲೇ ಬರುತ್ತಿದೆ. ಅದರ ನಡುವೆಯೂ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಕಣಕ್ಕಿಳಿಯಲು ತಯಾರಾಗಿ ನಿಂತಿರುವುದು ಪಕ್ಷಗಳ ನಾಯಕರಿಗೆ ತಲೆನೋವು ತಂದಿದೆ.

ನಾಲ್ಕು ಬಾರಿ ಗೆಲವು ಸಾಧಿಸಿದ ಎಸ್.ಎ.ರಾಮದಾಸ್

ನಾಲ್ಕು ಬಾರಿ ಗೆಲವು ಸಾಧಿಸಿದ ಎಸ್.ಎ.ರಾಮದಾಸ್

ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಒಂದಷ್ಟು ವಿಭಿನ್ನತೆ ಇಲ್ಲಿ ಕಂಡು ಬರುತ್ತದೆ. ಇಲ್ಲಿ ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಜತೆಗೆ ತಮ್ಮದೇ ಆದ ಸಾಮಾಜಿಕ ಚಟುವಟಿಕೆಯಿಂದ ಕ್ಷೇತ್ರದ ಮತದಾರರ ಮನೆ ಬಾಗಿಲು ತಟ್ಟಿದ್ದಾರೆ. ಇವರ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ನ ಎಂ.ಕೆ.ಸೋಮಶೇಖರ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರಿಗೂ ಕ್ಷೇತ್ರದ ಮೇಲೆ ಹಿಡಿತವಿದೆ. ಜತೆಗೆ ಸದಾ ಕ್ಷೇತ್ರದ ಜನರೊಂದಿಗೆ ಒಡನಾಟ ಹೊಂದಿದ್ದಾರೆ. ಈಗಾಗಲೇ ಕ್ಷೇತ್ರದ ಮನೆಮನೆಗೆ ತೆರಳಿ ಜನರ ಯೋಗಕ್ಷೇಮಗಳನ್ನು ವಿಚಾರಿಸಿಕೊಂಡು ಬಂದಿದ್ದಾರೆ. ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸೋಮಶೇಖರ್ ಅವರಂತು ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಮಾಡುತ್ತಲೇ ಇರುವುದು ಕಂಡು ಬರುತ್ತಿದೆ.

ಹೆಚ್ಚಿದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ

ಹೆಚ್ಚಿದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ

ಕಳೆದ ಬಾರಿ (2018) ಬಿಜೆಪಿ ಶಾಸಕ ಎಸ್.ರಾಮದಾಸ್ ಎದುರು ಸೋಲು ಕಂಡ ಎಂ.ಕೆ.ಸೋಮಶೇಖರ್ ಆ ನಂತರವೂ ಮೌನಕ್ಕೆ ಶರಣಾಗದೆ ಸದಾ ಒಂದಲ್ಲ ಒಂದು ರೀತಿಯಿಂದ ಸುದ್ದಿ ಮಾಡುತ್ತಲೇ ಇದ್ದಾರೆ. ಇದರ ನಡುವೆ ಕಾಂಗ್ರೆಸ್‍ ನಿಂದಲೇ ಇವರಿಗೆ ಇನ್ನೊಂದಷ್ಟು ಮಂದಿ ಪೈಪೋಟಿ ನೀಡುವ ಸಾಧ್ಯಯತೆಯಿದೆ. ಈಗಾಗಲೇ ಟಿಕೆಟ್ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡ ಗುರುಪಾದಸ್ವಾಮಿ, ಪ್ರದೀಪ್‌ಕುಮಾರ್, ನವೀನ್‌ಕುಮಾರ್, ಎನ್.ಭಾಸ್ಕರ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ ಕಥೆಯೂ ಇದಕ್ಕೆ ವಿರುದ್ಧವಾಗಿದ್ದಂತಿಲ್ಲ. ಹಾಲಿ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಫಣೀಶ್, ಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್ ಅವರು ಟಿಕೆಟ್ ಗಾಗಿ ಹಾತೊರೆಯುತ್ತಿದ್ದಾರೆ.

ಕೆ.ಆರ್ ಕ್ಷೇತ್ರದಲ್ಲಿ ಕೈ-ಕಮಲ ಜಿದ್ದಾಜಿದ್ದಿ

ಕೆ.ಆರ್ ಕ್ಷೇತ್ರದಲ್ಲಿ ಕೈ-ಕಮಲ ಜಿದ್ದಾಜಿದ್ದಿ

ರಾಮದಾಸ್ ಅವರು ಕ್ಷೇತ್ರದಲ್ಲಿ ಹಲವು ರೀತಿಯ ಕೆಲಸಗಳನ್ನು ಮಾಡುತ್ತಿದ್ದು ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಸದಾ ಕ್ಷೇತ್ರದಲ್ಲಿ ಸುದ್ದಿಯಲ್ಲಿರುವ ಶಾಸಕರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆ.ಆರ್.ಕ್ಷೇತ್ರದಲ್ಲಿ ಇದುವರೆಗೆ ಹನ್ನೊಂದು ಚುನಾವಣೆಗಳು ನಡೆದಿದ್ದು, 1967 ಎಚ್.ಚೆನ್ನಯ್ಯ (ಪಕ್ಷೇತರ), 1972 ಸೂರ್ಯ ನಾರಾಯಣರಾವ್ (ಕಾಂಗ್ರೆಸ್), 1978 ಎಚ್.ಗಂಗಾಧರನ್ (ಜನತಾಪಕ್ಷ), 1983ಎಚ್.ಗಂಗಾಧರನ್ (ಬಿಜೆಪಿ), 1985 ವೇದಾಂತ ಹೆಮ್ಮಿಗೆ (ಜನತಾಪಕ್ಷ), 1989 ಸೋಮಸುಂದರಂ (ಕಾಂಗ್ರೆಸ್), 1994 ಎಸ್.ಎ.ರಾಮದಾಸ್ (ಬಿಜೆಪಿ), 1999 ಎಸ್.ಎ.ರಾಮದಾಸ್ (ಬಿಜೆಪಿ), 2004 ಎ.ಕೆ.ಸೋಮಶೇಖರ್ (ಕಾಂಗ್ರೆಸ್), 2008 ಎಸ್.ಎ.ರಾಮದಾಸ್ (ಬಿಜೆಪಿ) 2013 ಎಂ.ಕೆ.ಸೋಮಶೇಖರ್ (ಕಾಂಗ್ರೆಸ್), 2018 ಎಸ್.ಎ.ರಾಮದಾಸ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.

ಚುನಾವಣಾ ಇತಿಹಾಸವನ್ನು ನೋಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಲ್ಕು ಬಾರಿ, ಬಿಜೆಪಿ ಐದು ಬಾರಿ, ಜನತಾಪಕ್ಷ ಎರಡು ಬಾರಿ, ಪಕ್ಷೇತರರು ಒಮ್ಮೆ ಗೆಲುವು ಸಾಧಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಬ್ರಾಹ್ಮಣ, ಮಾಜದ ವೀರಶೈವ ಲಿಂಗಾಯತರು, ಕುರುಬರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದುವರೆಗಿನ ಚುನಾವಣೆಗಳಲ್ಲಿ ಬ್ರಾಹ್ಮಣರು, ಲಿಂಗಾಯತರೇ ಹೆಚ್ಚು ಬಾರಿ ಗೆದ್ದಿರುವುದು ಕಂಡು ಬಂದಿದೆ. ಈ ಬಾರಿಯ ಚುನಾವಣೆಗೆ ಯುವ ಮತದಾರರು ಎಂಟ್ರಿ ಕೊಡುತ್ತಿರುವುದರಿಂದ ಹಿಂದಿನ ಚುನಾವಣೆಗಳಂತೆ ಅಷ್ಟು ಸುಲಭವಾಗಿ ವಿಶ್ಲೇಷಣೆ ಮಾಡುವುದು ಕಷ್ಟವಾಗಬಹುದು. ಆದರೂ ರಾಜಕೀಯವಾಗಿ ನೋಡಿದರೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಹಣಾಹಣಿ ನಡೆಯುವುದಂತು ನಿಜ. ಆದರೆ ಅಭ್ಯರ್ಥಿಗಳು ಯಾರು ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+