ವಾಟ್ಸ್ ಅಪ್ ವಿಡಿಯೋ ವೈರಲ್: ಏನಿದು 9.97 ಕೋಟಿ ರುಪಾಯಿ ಹಗರಣ?
ಮೈಸೂರು, ಆಗಸ್ಟ್ 3: ವಾಟ್ಸ್ ಅಪ್ ನಲ್ಲಿ ವಿಡಿಯೋ ಹರಿದಾಡುತ್ತಿದ್ದು, ಚರ್ಚೆಗೆ ಕಾರಣವಾಗಿದೆ. ಹತ್ತು ಕೋಟಿ ರುಪಾಯಿ ಹಗರಣವೊಂದರ ಬಗ್ಗೆ ಇದರಲ್ಲಿ ವ್ಯಕ್ತಿಯೊಬ್ಬರು ಮಾತನಾಡಿದ್ದು, ಕಬಿನಿ ಎಡದಂಡೆ ನಾಲೆ ಆಧುನೀಕರಣ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹಾಕಿಕೊಂಡಿರುವ ಸಾಧನೆ ಫ್ಲೆಕ್ಸ್ ಎದುರಿಗೆ ನಿಂತು ವಿಡಿಯೋ ಆರಂಭಿಸಲಾಗಿದೆ.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಹೊನ್ನೇಗೌಡ ಸರ್ಕಲ್ ಬಳಿ ಸರಕಾರವು ಹಾಕಿಕೊಂಡಿರುವ ಫ್ಲೆಕ್ಸ್ ನಲ್ಲಿ 9.97 ಕೋಟಿ ರುಪಾಯಿ ವೆಚ್ಚದಲ್ಲಿ ಸರಕಾರ ಕಬಿನಿ ಎಡದಂಡೆ ಕಾಮಗಾರಿ ಕೈಗೊಂಡಿದೆ. ನುಡಿದಂತೆ ನಡೆದಿದ್ದೇವೆ ಎಂಬ ವಿವರ ಇರುವುದನ್ನು ಕೂಡ ತೋರಿಸಲಾಗಿದೆ.

ಆರ್ ಟಿಐನಲ್ಲಿ ಅರ್ಜಿ ಹಾಕಿಕೊಂಡಾಗ, ಅದರಲ್ಲಿಯೂ ಕಾಮಗಾರಿ ಮುಗಿದಿದೆ ಎಂಬ ಉತ್ತರ ನೀಡಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಎಡದಂಡೆ ನಾಲೆ ಬಳಿಯ ಸ್ಥಿತಿಯನ್ನು ಕೂಡ ತೋರಿಸಿದ್ದು, ಅಲ್ಲಿ ಯಾವುದೇ ಕಾಮಗಾರಿ ಆಗಿಲ್ಲ ಎಂಬುದು ಗೋಚರವಾಗುತ್ತದೆ.
ಈ ಬಗ್ಗೆ ಕಬಿನಿ ನೀರಾವರಿ ಇಲಾಖೆಯ ಎಇಇ ಕೃಷ್ಣಯ್ಯ ಎಂಬುವವರ ಪ್ರತಿಕ್ರಿಯೆಯೂ ದಾಖಲಾಗಿದ್ದು, ಉಡಾಫೆಯಿಂದ ನೀಡಿದ ಉತ್ತರದ ಧ್ವನಿಯೂ ಕೇಳುತ್ತದೆ. ಈ ಕಾಮಗಾರಿ ಬಗ್ಗೆ ಸರಕಾರ ತನಿಖೆ ನಡೆಸಬೇಕು. ಹತ್ತು ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದದ್ದಾದರೂ ಎಲ್ಲಿ ಎಂದು ಪ್ರಶ್ನಿಸಲಾಗಿದೆ.
ಈ ಯೋಜನೆ ಹೆಸರಲ್ಲಿ ಅವ್ಯವಹಾರ ನಡೆದಿದೆಯಾ ಎಂಬುದನ್ನು ಸರಕಾರವಂತೂ ಸ್ಪಷ್ಟಪಡಿಸಬೇಕಾಗಿದೆ.












Click it and Unblock the Notifications