ಮುಂದಿನ ಮುಖ್ಯಮಂತ್ರಿಯ ಕೊನೆಯ ಚುನಾವಣೆ: ವರುಣಾದಲ್ಲಿ ಸಿದ್ದು ಪರ ಅಲೆಯ ಹಿಂದಿನ ಪ್ರಮುಖ ಕಾರಣಗಳಿವು- ಗ್ರೌಂಡ್ ರಿಪೋರ್ಟ್
ವರುಣಾ, ಮೇ 04: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರವು ಭಾರೀ ಸದ್ದು ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ವಿ ಸೋಮಣ್ಣ ನಡುವೆ ಸಂಘರ್ಷ ಏರ್ಪಟ್ಟಿರುವುದು ಇದಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಪೈಪೋಟಿ ಎದುರಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಆದರೆ, ವರುಣಾದ ಅಲೆ ಮಾತ್ರ ಸಿದ್ದರಾಮಯ್ಯ ಪರ ಇದೆ ಎಂದು ಗ್ರೌಂಡ್ ರಿಪೋರ್ಟ್ ಹೇಳುತ್ತಿದೆ. 'The Federal' ನ್ಯೂಸ್ ಪೋರ್ಟಲ್ ಈ ವರದಿಯನ್ನು ನೀಡಿದೆ.
ವರುಣಾ ಕ್ಷೇತ್ರದ ಹೆಚ್ಚಿನ ಯುವಕರು ಮತ್ತು ಹಿರಿಯರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದಾರೆ. ಅವರು ರಾಜ್ಯದ ಗದ್ದುಗೆ ಹಿಡಿಯುವುದು ನಿಶ್ಚಿತವೆಂದು ಕೆಲವರು ನಂಬಿಕೊಂಡಿದ್ದಾರೆ.

ಪ್ರಬಲ ನಾಯಕ ಸಿದ್ದರಾಮಯ್ಯ ಭಾರೀ ಅಂತರದಿಂದ ಗೆಲ್ಲಲಿದ್ದಾರೆ ಎಂಬ ಅಭಿಪ್ರಾಯವನ್ನು ಪ್ರಮುಖವಾಗಿ ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರು ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ವಿ ಸೋಮಣ್ಣ ಕಣಕ್ಕಿಳಿದಿದ್ದರೂ, ಮೇ 10 ರ ಫಲಿತಾಂಶವೂ ಸಿದ್ದರಾಮಯ್ಯ ಪರವೇ ಇರಲಿದೆ ಎಂದು ಬಹುತೇಕ ಮತದಾರರು ಅಭಿಪ್ರಾಯಪಟ್ಟಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಕಾರ್ಯಗಳಿಗೆ ಮೆಚ್ಚುಗೆ
ಸಿದ್ದರಾಮಯ್ಯನವರ ಜನಪ್ರಿಯತೆಗೆ ಒಂದು ಸ್ಪಷ್ಟ ಕಾರಣವೆಂದರೆ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರು ಮಾಡಿದ ಕಾರ್ಯಗಳು ಎಂದು ಕೆಲವರು ಹೇಳಿದ್ದಾರೆ.

ವರುಣಾದಲ್ಲಿನ ಬಹುತೇಕರೊಂದಿಗೆ ದಿ ಫೆಡರಲ್ ಮಾಧ್ಯಮ ಸಂವಾದ ನಡೆಸಿದೆ. ಹಿರಿಯ ಸಹೋದರ ರಾಕೇಶ್ ನಿಧನದ ನಂತರ ರಾಜಕೀಯಕ್ಕೆ ಕಾಲಿಟ್ಟ ಯತೀಂದ್ರ ಅವರ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಸ್ತಿಕ ಸಿದ್ದರಾಮಯ್ಯ ಬಗ್ಗೆ ದೈವಭಕ್ತರ ಅಭಿಮಾನ
ಸಿದ್ದರಾಮಯ್ಯನವರು ನಾಸ್ತಿಕ ಎಂದು ಬಿಜೆಪಿ ಕಟ್ಟಿಕೊಡುತ್ತಿರುವ ನಿರೂಪಣೆಗೆ ವರುಣಾದ ಜನರು ಸೊಪ್ಪು ಹಾಕುತ್ತಿಲ್ಲ. ಇದಕ್ಕೆ ಕಾರಣ, ಕ್ಷೇತ್ರದಲ್ಲಿ ಸಾಕಷ್ಟು ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ ಎಂದು ಮತದಾರರು ಹೇಳಿದ್ದಾರೆ.
ನಂಜುಂಡೇಶ್ವರ, ಸಿದ್ದರಾಮಪ್ಪ, ಮಾರಮ್ಮ, ಚಾಮುಂಡಮ್ಮ, ಸಿದ್ದೇಶ್ವರ, ರಾಮ, ಚೌಡೇಶ್ವರಿ ಮತ್ತು ಆಂಜನೇಯನಿಗೆ ಸಮರ್ಪಿತವಾದಂತಹ ಹಲವಾರು ಸಣ್ಣ ದೇವಾಲಯಗಳಿಗೆ 'ದಿ ಫೆಡರಲ್' ಭೇಟಿ ನೀಡಿದೆ.

ದೇವಾಲಯಗಳು ಕುರುಬರು, ಬೆಸ್ತರು (ಮೀನುಗಾರರು), ಎಸ್ಸಿ/ಎಸ್ಟಿಗಳು, ಒಕ್ಕಲಿಗರು ಮತ್ತು ಇತರ ಸಮುದಾಯಗಳಿಗೆ ಸೇರಿವೆ. ಅವುಗಳ ನಿರ್ವಹಣೆ ಮತ್ತು ನವೀಕರಣಕ್ಕೆ ಸಿದ್ದರಾಮಯ್ಯ ಮತ್ತು ಅವರ ತಂಡ ಹಣ ನೀಡಿದೆ.
ಹೊಸಕೋಟಾಲ್ ಗ್ರಾಮದ ರಮೇಶಪ್ಪ ಫೆಡರಲ್ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರ ಎಂಬ ಆರೋಪದ ಬಗ್ಗೆ ಇಲ್ಲಿನ ಜನರಿಗೆ ತಿಳಿದಿದೆ.
'ಇದು ತಪ್ಪು. ನಮ್ಮ ದೇವಸ್ಥಾನಗಳಿಗೆ ಸಿದ್ದರಾಮಯ್ಯ ಸದಾ ಸಹಾಯ ಮಾಡುತ್ತಿದ್ದಾರೆ. ಹಲವು ಬಾರಿ ಸಿದ್ದರಾಮಯ್ಯ ಅಥವಾ ಅವರ ಪುತ್ರ ದೇವಸ್ಥಾನದ ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ನಾವೆಲ್ಲರೂ ಅವರೊಂದಿಗೆ ಸಂತೋಷವಾಗಿದ್ದೇವೆ' ಎಂದು ರಮೇಶಪ್ಪ ತಿಳಿಸಿದ್ದಾರೆ.
ಆಲಂಬೂರು ಗ್ರಾಮದ ಹನುಮಾನ್ ದೇವಸ್ಥಾನದ ಅರ್ಚಕ ರಂಗಾಚಾರ್ ಮಾತನಾಡಿ, 'ಒಕ್ಕಲಿಗರಿಗೆ ಸೇರಿದ ದೇಗುಲವನ್ನು ಜೀರ್ಣೋದ್ಧಾರ ಮಾಡಲು ಯತೀಂದ್ರ ಸಿದ್ದರಾಮಯ್ಯ ಸಹಾಯ ಮಾಡಿದ್ದಾರೆ. ನಾವು ಅವರ ಸಹಾಯವನ್ನು ಕೋರಿದಾಗ ಮಾಜಿ ಮುಖ್ಯಮಂತ್ರಿ ಅವರು ಎಲ್ಲಾ ಬೆಂಬಲವನ್ನು ನೀಡಿದರು' ಎಂದು ಹೇಳಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಮುಖಂಡ ನಂಜಯ್ಯ ಮಾತನಾಡಿ, 'ಸಿದ್ದರಾಮಯ್ಯ ನಾಸ್ತಿಕರಾಗಿದ್ದರೂ ನಮ್ಮ ಭಾವನೆಗಳನ್ನು ಗೌರವಿಸುತ್ತಾರೆ. ಅವರು ಜಾತ್ಯತೀತರು ಮತ್ತು ಸಾಮಾಜಿಕ ನ್ಯಾಯವನ್ನು ನಂಬುತ್ತಾರೆ. ಅವರು ಎಲ್ಲಾ ಸಮುದಾಯಗಳು ಮತ್ತು ಜಾತಿಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ' ಎಂದು ಹೇಳಿದ್ದಾರೆ.
ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ನಮ್ಮ ಸಮಾಜವನ್ನು ವಿಭಜಿಸದೆ ಹೇಗೆ ರಾಜಕೀಯ ಮಾಡಬೇಕೆಂದು ತಿಳಿದಿರುವ ಚಾಣಾಕ್ಷ ರಾಜಕಾರಣಿ ಎಂದು ದಲಿತ ಮುಖಂಡರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಹಲವು ಚುನಾವಣಾ ಕದನಗಳ ಅನುಭವಿ. 2006ರಲ್ಲಿ ಜೆಡಿಎಸ್ ತೊರೆದು ಚಾಮುಂಡೇಶ್ವರಿ ಚುನಾವಣೆಯಲ್ಲಿ ಗೆದ್ದಿದ್ದರು.
ಕ್ಷೇತ್ರಗಳ ವಿಂಗಡಣೆಯ ನಂತರ, ವರುಣಾ ರಚನೆಯಾಯಿತು ಮತ್ತು ಅವರು ಅಲ್ಲಿಂದ 2008 ಮತ್ತು 2013 ರಲ್ಲಿ ಗೆದ್ದರು. 2018 ರಲ್ಲಿ, ಅವರ ಮಗ ಯತೀಂದ್ರ ಅವರ ತವರು ನೆಲದಿಂದ ಸ್ಪರ್ಧಿಸಿದರೆ, ಸಿದ್ದರಾಮಯ್ಯ ಸ್ವತಃ ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರು. ಚಾಮುಡೇಶ್ವರಿಯಲ್ಲಿ ಸೋತರೂ ಬಾದಾಮಿಯಲ್ಲಿ 1,696 ಮತಗಳಿಂದ ಗೆದ್ದಿದ್ದರು.
ಈ ಬಾರಿ ಅವರು ಕೋಲಾರ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂಬ ಆರಂಭಿಕ ಊಹಾಪೋಹದ ನಂತರ ಸಿದ್ದರಾಮಯ್ಯ ಅಂತಿಮವಾಗಿ ತಮ್ಮ ಜನ್ಮಸ್ಥಳವನ್ನು ಒಳಗೊಂಡಿರುವ ವರುಣಾವನ್ನು ಆಯ್ಕೆ ಮಾಡಿದ್ದಾರೆ.

ವರುಣಾದಾದ್ಯಂತ ಮತದಾರರಿಂದ ಸಹಾಯಕ್ಕಾಗಿ ಮನವಿಗೆ ಸ್ಪಂದಿಸಿದ್ದಕ್ಕಾಗಿ ಯತೀಂದ್ರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೂರಾರು ಯುವ ಮುಖಂಡರ ಹೆಸರು ಅವರಿಗೆ ಗೊತ್ತಿದೆ ಎಂದು ದಂಡಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ರಾಜೇಗೌಡ ಹೇಳಿದ್ದಾರೆ.
ಜನ ಮೆಚ್ಚಿದ ನಾಯಕ
ಸಿದ್ದರಾಮಯ್ಯನವರಿಗೂ ತಾವು ಭೇಟಿಯಾದ ಯುವಕರು ಮತ್ತು ಹಿರಿಯರನ್ನು ನೆನಪಿಸಿಕೊಳ್ಳುವ ಗುಣವಿತ್ತು. ಅವರ ಮಗ ಈ ಗುಣವನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ವರುಣಾ ಜನರು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಯತೀಂದ್ರ ಅವರು ವೃತ್ತಿಪರ ವೈದ್ಯರಾಗಿದ್ದರಿಂದ ಜನರು ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ವೈದ್ಯಕೀಯ ಬೆಂಬಲವನ್ನು ಪಡೆಯಲು ಸಹಾಯ ಮಾಡಿದರು ಎಂದು ಸಿದ್ದರಾಮನ ಹುಂಡಿಯ ಭರಮಪ್ಪ ತಿಳಿಸಿದ್ದಾರೆ.
ಅಭಿವೃದ್ಧಿ ಕೆಲಸ
ಉತ್ತಮ ರಸ್ತೆ, ಆಸ್ಪತ್ರೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ವರುಣಾ ಜನತೆಗೆ ಸಿಗುವಂತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರನ್ನು ಗ್ರಾಮಸ್ಥ ರಾಜಪ್ಪ ಕೊಂಡಾದಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಮತದಾರರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಇದು ವರುಣಾ ಜನತೆಯಲ್ಲಿ ಭಾವುಕತೆಯನ್ನು ಸೃಷ್ಟಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಸಿದರೆ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಇದೂ ಸಹಿತ ವರಣಾದಲ್ಲಿ ಸಿದ್ದರಾಮಯ್ಯ ಪರ ಬಹುದೊಡ್ಡ ಅಲೆ ಏಳುವಂತೆ ಮಾಡಿದೆ.












Click it and Unblock the Notifications