ಮಳೆಯಿಂದ ಸಂಕಷ್ಟಕ್ಕೊಳಗಾದ ಜನರ ಪರ ನಾವಿದ್ದೇವೆ: ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು, ಜುಲೈ 12: ಸರಕಾರದ ಎಲ್ಲಾ ಸಚಿವರುಗಳು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತಿದ್ದಾರೆ. ನಾನೂ ಕೂಡ ಮಂಗಳವಾರ ಮಡಿಕೇರಿ, ಮಂಗಳೂರು, ಉಡುಪಿ ಪ್ರವಾಸ ಕೈಗೊಳ್ಳಲಿದ್ದೇನೆ. ಅಲ್ಲೆಲ್ಲ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ. ಸಂಕಷ್ಟದಲ್ಲಿರುವ ಜನರ ಜೊತೆ ನಾವು ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಾಲ್ಕು ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ "ಮಳೆ ಹಾನಿ ಕುರಿತು ಕೆಲವು ಮಾಹಿತಿಗಳಿವೆ. ಪ್ರಾಣಹಾನಿ, ಮನೆಗಳು ಬಿದ್ದಿರುವಂಥದ್ದು, ಕೃಷಿ ಹಾನು ಬಗ್ಗೆ ಸರ್ವೇ ನಡೆದಿದೆ. ಮುಖ್ಯವಾಗಿ ಈ ಬಾರಿ ಮಳೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂಕುಸಿತವಾಗಿದೆ".
"ಕಳೆದ ಬಾರಿ ಕೂಡ ಭೂ ಕುಸಿತವಾಗಿತ್ತು. ಕೊಡಗು ಬಳಿ ಭೂಕಂಪವಾಗಿದೆ. ಕಡಲ ತೀರದಲ್ಲಿ ಕಡಲಕೊರೆತವಾಗಿದೆ. ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ತೊಂದರೆಯಾಗಿದೆ. ಅಲ್ಲಲ್ಲಿ ಅಲ್ಲಲ್ಲಿ ನೀರು ಜಲಾಶಯದಿಂದ ಹೆಚ್ಚು ಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿತ್ತು. ಅಷ್ಟೂ ಕೂಡ ಸಮೀಕ್ಷೆ ಆಗಿದೆ. ಪ್ರಥಮ ಹಂತದ ಸಮೀಕ್ಷೆ ಇಂದು ಸಾಯಂಕಾಲ ಸಿಗಲಿದೆ. ಬಂದ ನಂತರ ಪತ್ರಿಕಾಗೋಷ್ಠಿ ನಡೆಸಿ ನಿಖರವಾಗಿ ಹೇಳುತ್ತೇನೆ" ಎಂದು ತಿಳಿಸಿದರು.

ಉತ್ತರ ಕನ್ನಡದಲ್ಲಿ 63 ಊರುಗಳನ್ನು ಸ್ಥಳಾಂತರ
ಉತ್ತರ ಕರ್ನಾಟಕದಲ್ಲಿ 63 ಊರುಗಳನ್ನು ಸ್ಥಳಾಂತರಿಸಲಾಗಿದೆ. ಕೆಲವು ಕಡೆ ಜನರು ಸ್ಥಳಾಂತರ ವಾಗಿಲ್ಲ. ವಿಶೇಷವಾಗಿ ನದಿ ಪಾತ್ರಲ್ಲಿರುವ ಗ್ರಾಮಗಳಲ್ಲಿನ ಮನೆಗಳನ್ನು ಸ್ಥಳಾಂತರ ಮಾಡಿ ಸುರಕ್ಷಿತಗೊಳಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಆ ಪ್ರಕಾರ ವಿಶೇಷವಾದ ಯೋಜನೆ ಗಳನ್ನು ರೂಪಿಸಲಾಗುವುದು ಎಂದರು.

ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ
ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ನಲ್ಲಿ 739ಕೋಟಿ ಹಣ ಇದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ, ರೆಸ್ಕ್ಯೂ ಮತ್ತು ರಿಲೀಪ್ ಕಾರ್ಯಾಚರಣೆಗೆ ಯಾವುದೇ ರೀತಿ ಹಣದ ಕೊರತೆ ಇಲ್ಲ. ಕೆಲವು ಕಡೆ ಸ್ಥಳಾಂತರ ಕಾರ್ಯ ನಡೆದಿದೆ. ಉತ್ತರ ಕರ್ನಾಟಕದಲ್ಲಿ 63 ಊರುಗಳನ್ನು ಶಿಫ್ಟ್ ಮಾಡಿದ್ದೇವೆ. ಶಾಶ್ವತವಾಗಿ ಏನು ಪರಿಹಾರ ಮಾಡಬಹುದು, ನದಿ ಪಾತ್ರದ ಪಕ್ಕದಲ್ಲಿರುವ ಗ್ರಾಮಗಳಿಗೆ ಪೂರ್ಣಪ್ರಮಾಣದಲ್ಲಿ ಗ್ರಾಮಗಳಿಲ್ಲದಿದ್ದರೂ ನದಿಪಾತ್ರದಲ್ಲಿರುವ ಮನೆಗಳನ್ನು ಶಿಫ್ಟ್ ಮಾಡಿ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ತಜ್ಞರ ಅಭಿಪ್ರಾಯ ಕೇಳಿದ್ದೇನೆ. ಆ ಪ್ರಕಾರ ಒಂದು ವಿಶೇಷವಾದ ಯೋಜನೆಯನ್ನು ಬರುವಂತಹ ದಿನಗಳಲ್ಲಿ ಮಾಡುತ್ತೇವೆ ಎಂದರು.

ನಿಗಮ ಮಂಡಳಿಗೆ ಹೊಸಬರಿಗೆ ಅವಕಾಶ
ನಿಗಮ ಮಂಡಳಿ ಕುರಿತು ಕೋರ್ ಕಮಿಟಿಯಲ್ಲಿ ಈಗಾಗಲೇ 6 ತಿಂಗಳ ಹಿಂದೆ ಯಾರಿಗೆ ಒಂದೂವರೆ ವರ್ಷ ಮೇಲಾಗಿದೆ ಅವರನ್ನು ತೆಗೆದು ಹೊಸಬರಿಗೆ ಅವಕಾಶ ಕೊಡಬೇಕೆನ್ನುವ ತೀರ್ಮಾನವಾಗಿದೆ. ಆ ಪ್ರಕಾರ ಬರುವಂತಹ ದಿನಗಳಲ್ಲಿ ಆ ಕೆಲಸ ಮಾಡುತ್ತೇವೆ. ಬೇರೆಯವರಿಗೂ ಅವಕಾಶ ಕೊಡಬೇಕಲ್ಲ ಎಂದು ಉತ್ತರಿಸಿದರು. ಉಸ್ತುವಾರಿ ಸಚಿವರನ್ನು ತೊಡಗಿಸಿಕೊಳ್ಳುತ್ತಿಲ್ಲವೆಂಬ ಆರೋಪ ಕುರಿತು ಪ್ರತಿಕ್ರಿಯಿಸಿ ಅವರನ್ನು ಯಾರೂ ಇನ್ವಾಲ್ವ್ ಮಾಡುವ ಅವಶ್ಯಕತೆ ಇಲ್ಲ, ಅವರೇ ಎಲ್ಲರನ್ನೂ ಇನವಾಲ್ವ್ ಮಾಡಿಕೊಳ್ಳಬೇಕು ಎಂದರು.

ಕಷ್ಟದಲ್ಲಿರುವ ಜನತೆ ಜೊತೆಗೆ ಇಡೀ ಸರಕಾರ ಇದೆ
ಕೊಡಗಿನಲ್ಲಿ ಬೆಟ್ಟದ ಮೇಲೆ ಮನೆ ಇದೆ. ಎಲ್ಲಿ ಜನರ ಪ್ರಾಣ, ಆಸ್ತಿ ಹಾನಿ ಇದೆ ಅಲ್ಲಿ ಅವರ ಮನವೊಲಿಸುವ ಕೆಲಸ ಮಾಡಲಾಗುವುದು. ಕೆಲವು ಸೆನ್ಸಿಟಿವ್ ಸೆಸ್ಮಿಕ್ ಜೋನ್ಸ್ ಇದೆ. ಅಲ್ಲಿ ಕಳೆದ ಬಾರಿ ಆದಲ್ಲೇ ಕೆಲವು ಭೂ ಕುಸಿತವಾಗುತ್ತಿದೆ. ಅಲ್ಲಿ ನಾವು ಮುಂಜಾಗರೂಕತೆ ವಹಿಸಿದ್ದೇವೆ. ಉಡುಪಿಯಲ್ಲಿ ಸಚಿವ ಅಂಗಾರ , ದಕ್ಷಿಣ ಕನ್ನಡದಲ್ಲಿ ಸಚಿವ ಸುನಿಲ್ ಕುಮಾರ್ ಉತ್ತರ ಕನ್ನಡ ದಲ್ಲಿ ಶ್ರೀನಿವಾಸ ಪೂಜಾರಿ ಆಗಲೇ ಹೋಗಿದ್ದಾರೆ. ಇವತ್ತು ಸೋಮಶೇಖರ್ ಪಿರಿಯಾಪಟ್ಟಣ ಹೋಗುತ್ತಿದ್ದಾರೆ. ಕಂದಾಯ ಸಚಿವರು ಕೊಡಗು, ಚಿಕ್ಕಮಗಳೂರು ಹೋಗಿಬಂದಿದ್ದಾರೆ. ನಿನ್ನೆ ಲೋಕೋಪಯೋಗಿ ಸಚಿವರು ಶಿರಾಡಿ ಘಾಟ್ ಎಲ್ಲ ಹೋಗಿದ್ದಾರೆ. ಇಡೀ ಸರಕಾರವೇ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅಧಿಕಾರಿಗಳೂ ತೊಡಗಿಸಿಕೊಂಡಿದ್ದಾರೆ. ಸಂಕಷ್ಟ ಕಾಲದಲ್ಲಿ ಜನರ ಜೊತೆ ನಿಲ್ಲುತ್ತೇವೆ ಎಂದುತ್ತರಿಸಿದರು.
ಚಾಮರಾಜಪೇಟೆ ಈದ್ಗಾ ಮೈದಾನ ಕುರಿತು ಪ್ರತಿಕ್ರಿಯಿಸಿ ಅದನ್ನು ಸ್ಥಳೀಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದರು. ಈ ಸಂದರ್ಭದಲ್ಲಿ ಸಚಿವರಾದ ವಿ.ಸುನೀಲ್ ಕುಮಾರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications