ಕ್ರಾಸ್ ಬ್ರೀಡಿಂಗ್ ವಿಚಾರ ನನಗೆ ಬೇಡ, ಅದು ದೊಡ್ಡವರ ವಿಚಾರ: ಎಚ್ಡಿಕೆ
ಮೈಸೂರು, ಡಿ 2: ಲವ್ ಜಿಹಾದ್ ವಿರುದ್ಧ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, "ಲವ್ ಜಿಹಾದ್ ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಲಿ" ಎಂದು ಸಲಹೆ ನೀಡಿದ್ದಾರೆ.
ಲವ್ ಜಿಹಾದ್ ಕಾಯ್ದೆ ಬಗ್ಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ, "ಲವ್ ಜಿಹಾದ್ ಕಾಯ್ದೆ ಜಾರಿಗೆ ಮುಂದಾಗಿರುವುದು ಮೂರ್ಖತನ. ಮುಸ್ಲಿಮರ್ರು 600 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಹೀಗಾಗಿ ಹಿಂದೂ ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಸಾಕಷ್ಟು ಜನ ಇದ್ದಾರೆ" ಎಂದಿದ್ದರು.
ಇದಕ್ಕೆ ಕಿಡಿಕಾರಿದ್ಧ ಸಚಿವ ಕೆ.ಎಸ್ ಈಶ್ವರಪ್ಪ, "ಕಾಂಗ್ರೆಸ್ ನವರದ್ದು ಕ್ರಾಸ್ ಬ್ರೀಡ್ ಸಂತತಿ. ಸಿದ್ದರಾಮಯ್ಯಗೆ ಕ್ರಾಸ್ ಬ್ರೀಡ್ ಮೇಲೆ ಆಸಕ್ತಿ" ಎಂದು ವಾಗ್ದಾಳಿ ನಡೆಸಿದ್ದರು. ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕ್ರಾಸ್ ಬ್ರೀಡ್ ವಿಚಾರ ನನಗೆ ಬೇಡ. ಅದು ದೊಡ್ಡವರಿಗೆ ಸಂಬಂಧಪಟ್ಟ ವಿಚಾರ ಎಂದು ಟಾಂಗ್ ನೀಡಿದ್ದಾರೆ.

"ಗ್ರಾ.ಪಂ ಚುನಾವಣೆ ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯಲ್ಲ. ಹೀಗಾಗಿ ಬಿಜೆಪಿಯವರ ಗ್ರಾಮ ಸ್ವರಾಜ್ ಕಾರ್ಯಕ್ರಮ ವರ್ಕೌಟ್ ಆಗಲ್ಲ. ಗ್ರಾ.ಪಂ ಚುನಾವಣೆಯಲ್ಲಿ ಯಾವುದೇ ಪಕ್ಷ ಇರಲ್ಲ. ಒಂದೇ ಪಕ್ಷದ ಇಬ್ಬರು, ಮೂವರು ಸ್ಪರ್ಧೆ ಮಾಡಬಹುದು"
"ಒಂದೇ ಕುಟುಂಬದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾಗಿರುವುದನ್ನು ನೋಡಿದ್ದೇವೆ. ಸ್ಥಳೀಯ ವಿಚಾರದ ಆಧಾರದ ಮೇಲೆ ಗ್ರಾ.ಪಂ ಚುನಾವಣೆ ನಡೆಯುತ್ತೆ. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ" ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಬಗ್ಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, "ಶಾಸಕ ಜಿ.ಟಿ.ದೇವೇಗೌಡ ನಮ್ಮನ್ನ ಬಿಟ್ಟು ಎಲ್ಲಿ ಹೋಗಿದ್ದಾರೆ. ಅವರು ಇನ್ನೂ ಜೆಡಿಎಸ್ ನಲ್ಲಿಯೇ ಇದ್ದಾರೆ. ಅವರೇ ಮೊನ್ನೆ ಜೆಡಿಎಸ್ ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಸರ್ಕಾರ ಕಾರ್ಯಕ್ರಮಗಳಲ್ಲಿ ಬಿಜೆಪಿಯವರ ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ. ಇದಕ್ಕೆ ಬೇರೆ ರೀತಿಯ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು ಬೇಡ" ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications