ಬೈಕ್-ಕಾರು ಡಿಕ್ಕಿ:ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರ ಪುತ್ರ ಸಾವು
ಮೈಸೂರು, ಫೆಬ್ರವರಿ 4:ಚಾಮುಂಡಿ ಬೆಟ್ಟದ ತಿರುವಿನಲ್ಲಿ ದ್ವಿಚಕ್ರವಾಹನ ಮತ್ತು ಮಾರುತಿ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತನನ್ನು ಮೈಸೂರಿನ ಸುಭಾಷ್ ನಗರದ ನಿವಾಸಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಗೋಲ್ಡನ್ ಪ್ಯಾಲೇಸ್ ಫಂಕ್ಷನ್ ಹಾಲ್ ಮಾಲೀಕ ಹಾಗೂ ವಕ್ಫ್ ಬೋರ್ಡ್ ಉಪಾಧ್ಯಕ್ಷ ಎ.ಜೆ.ಅಹ್ಮದ್ ಆಶ್ರಫಿ ಅವರ ಪುತ್ರ ಜಿಬ್ರಾನ್ ಹುಸೇನ್ (18) ಎಂದು ಗುರುತಿಸಲಾಗಿದೆ.
ಈತ ಕೆಟಿಎಂ ಬೈಕಿನಲ್ಲಿ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಗೇಟ್ ಸಮೀಪದ ತಿರುವಿನಲ್ಲಿ ಬರುತ್ತಿದ್ದಾಗ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ ಮಾರುತಿ 800 ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ಜಿಬ್ರಾನ್ ಹುಸೇನ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಸಿದ್ದಾರ್ಥ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸು ಕಳುವು ಮಾಡಲು ಹೋಗಿ ಸಿಕ್ಕಿಬಿದ್ದ
ಮತ್ತೊಂದು ಪ್ರಕರಣದಲ್ಲಿ ಹಸುವನ್ನು ಕದಿಯಲು ಬಂದಿದ್ದ ಮೂವರ ಪೈಕಿ ಓರ್ವನನ್ನು ಹಿಡಿದ ಸಾರ್ವಜನಿಕರು ಆತನನ್ನು ಪೊಲೀಸರಿಗೊಪ್ಪಿಸಿದ ಘಟನೆ ಶ್ರೀರಾಮಪುರ ಬಳಿ ಶಿವಪುರದಲ್ಲಿ ನಡೆದಿದೆ. ಬಂಧಿತನನ್ನು ರಾಜೀವ್ ನಗರದ ನಿವಾಸಿ ಮುದಾಸಿರ್(24)ಎಂದು ಗುರುತಿಸಲಾಗಿದೆ. ಈತ ಹಸು ಕಳುವು ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಇನ್ನಿಬ್ಬರು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ಶಿವಪುರದ ಅಶ್ವಿನಿ ಕಲ್ಯಾಣ ಮಂಟಪದ ಬಳಿ ಮನೆಯೊಂದರ ಕೊಟ್ಟಿಗೆಯಲ್ಲಿ ಹಸುಗಳನ್ನು ಕಳುವು ಮಾಡಲು ಹೊಂಚು ಹಾಕುತ್ತಿದ್ದಾಗ ಎಚ್ಚೆತ್ತ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ ಮುದಾಸಿರ್ ನನ್ನು ಹಿಡಿದು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳತನ ಮಾಡಿದ್ದ ವ್ಯಕ್ತಿಗಳಿಬ್ಬರ ಬಂಧನ
ಮೈಸೂರು ನಗರದ ಮಂಡಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ಹಿಂದೆ ತಮ್ಮ ಠಾಣಾ ಸರಹದ್ದಿನಲ್ಲಿ ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಹಣ, ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮೊಹಮದ್ ಅಬ್ರಾನ್ ಬಿನ್ ಅಕ್ರಂ ಪಾಷ( 22), ಶಕೀಲ್ ಪಾಷ,( 22) ಎಂದು ಗುರುತಿಸಲಾಗಿದೆ. ಇವರನ್ನು ಫೆ.2ರಂದು ರೈಲ್ವೆ ಸ್ಟೇಷನ್ ಸರ್ಕಲ್ ಬಳಿ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ಇವರುಗಳು ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಇವರಿಂದ 62,600 ರೂ ನಗದು, 35000 ರೂ. ಬೆಲೆಬಾಳುವ ಪ್ಲಾಟಿನಂ ಮತ್ತು ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications