ಜೆಡಿಎಸ್ ಬಿಟ್ಟು ಹೋಗಲ್ಲ: ದೇವೇಗೌಡರನ್ನು ಕಂಡು ಭಾವುಕರಾದ ಜಿಟಿಡಿ
ಮೈಸೂರು ಅಕ್ಟೋಬರ್ 20: ಮೈಸೂರಿನ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರ ಮನೆಗೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.
ಮೈಸೂರಿನ ಒಂಟಿಕೊಪ್ಪಲ್ನಲ್ಲಿರುವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರನ್ನು ಜಿ.ಟಿ.ದೇವೇಗೌಡರ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.
ಜಿಡಿಎಸ್ ಪಕ್ಷದ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಜಿ.ಟಿ.ದೇವೇಗೌಡರ ಮನ ಬದಲಿಸುವಲ್ಲಿ ಎಚ್.ಡಿ.ದೇವೇಗೌಡರ ಯಶಸ್ವಿಯಾಗಿದ್ದಾರೆ. ಈ ಮೂಲಕ ಜಿ.ಟಿ.ದೇವೇಗೌಡ ಜೆಡಿಎಸ್ ತೊರೆಯುತ್ತಾರೆ ಎನ್ನುವ ಊಹಾಪೋಹಕ್ಕೆ ಬ್ರೇಕ್ ಬಿದ್ದಿದೆ.

ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ
ಜಿ.ಟಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ, "ಶಾಸಕ ಜಿ.ಟಿ.ದೇವೇಗೌಡ ಅವರನ್ನು ನಾನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಾ.ರಾ.ಮಹೇಶ್ ಬರುವ ಮೊದಲು ಜಿ.ಟಿ.ದೇವೇಗೌಡರ ನಮ್ಮ ಜೊತೆಯಲ್ಲಿ ಇದ್ದರು. ಜಿಟಿಡಿ ಬೆಳೆಯಲು ಬಿಡಬಾರದು ಎಂದು ಎಂಪಿ ಚುನಾವಣೆಯಲ್ಲಿ ಸೋಲಿಸಿದರು. ಅಂತವರು ಈಗ ಅವರು ನಮ್ಮ ಜೊತೆಯಲ್ಲಿ ಇಲ್ಲ, ನಮ್ಮಪಕ್ಷದಲ್ಲಿ ಇಲ್ಲ," ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಎದುರಾಳಿ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ
ಮಾತು ಮುಂದುವರಿಸಿದ ಎಚ್.ಡಿ ದೇವೇಗೌಡ ಅವರು, "ಶಾಸಕ ಜಿ.ಟಿ.ದೇವೇಗೌಡ ಅವರನ್ನು ಬೆಳೆಯಲು ಬಿಟ್ಟರೆ ಆಕ್ರಮಣ ಮಾಡಿಕೊಳ್ಳುತ್ತಾರೆ ಎಂದು ಅವರ ಬೆಳವಣಿಗೆ ತಡೆಗಟ್ಟಿದ್ದರು.ಇಂದು ನಾನು ಜಿ.ಟಿ.ದೇವೇಗೌಡರ ಮನೆಗೆ ಬಂದಿದ್ದೇನೆ. ಇವತ್ತು ನನಗೆ ಬಹಳ ಸಂತೋಷವಾಗಿದೆ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಇದೀಗ ಸಮಯ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಸೇರಿದ್ದೇವೆ. ತುಂಬಾ ಸಂತೋಷ. ಪಾರ್ಲಿಮೆಂಟ್ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎದುರಾಳಿ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ. ಆ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು," ಎಂದು ಹೇಳಿದರು.

ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ಕಣ್ಣೀರಿಟ್ಟ ಜಿಟಿಡಿ
ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ ಆಗಮನದಿಂದ ಶಾಸಕ ಜಿ.ಟಿ.ದೇವೇಗೌಡ ಭಾವುಕರಾದ್ದಾರೆ. ದೇವೇಗೌಡರು ತಮ್ಮ ಮೇಲಿಟ್ಟಿರುವ ಪ್ರೀತಿ ಕಂಡು ಗಳಗಳನೆ ಕಣ್ಣಿರಿಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, "ದೇವೇಗೌಡರು ತಮ್ಮ ಪ್ರೀತಿಯಿಂದ ಹಗ್ಗ ಕಟ್ಟಿ ಹಾಕಿದ್ದಾರೆ. ಜೆಡಿಎಸ್ನಲ್ಲಿ ಉಳಿಯುತ್ತೇನೆ. ನನ್ನ ಹಿಂದಿನ ನಿರ್ಧಾರವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುತ್ತೇನೆ. ಪಕ್ಷದ ಬಗ್ಗೆ ನಾಯಕರ ಬಗ್ಗೆ ನನಗೆ ಯಾವುದೇ ಮುನಿಸು ಇಲ್ಲ. ನಾನು ಒಂದೇ ಒಂದು ದಿನ ಪಕ್ಷಕ್ಕೆ ಕಳಂಕ ಅಥವಾ ಧಕ್ಕೆ ತಂದಿಲ್ಲ," ಎಂದು ಭಾವುಕರಾದರು.

ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ
ಇನ್ನು ಮಾತು ಮುಂದುವರಿಸಿದ ಅವರು, "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಕ್ಷಕ್ಕೆ ಕರೆದಿದ್ದರು, ಬಿಜೆಪಿನವರು ಕರೆದಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟು ಹೋಗಲ್ಲ. ಎಚ್.ಡಿ.ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ಅವರು ನನ್ನನ್ನು ಮರಿ ದೇವೇಗೌಡ ಎಂದು ಕರೆಯುತ್ತಿದ್ದರು. ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ. ಎಚ್.ಡಿ.ದೇವೇಗೌಡರು ಹಿಂದೆ ಹಲವು ಸ್ಥಾನ ಕೊಟ್ಟಿದ್ದರು. ಕಳೆದ ಮೂರು ವರ್ಷಗಳ ಕಾಲ ದೂರ ಇದ್ದರೂ, ಅವರಿಗೆ ನನ್ನ ಬಗ್ಗೆ ಇರುವ ಪ್ರೀತಿ ಕಡಿಮೆ ಆಗಿರಲಿಲ್ಲ. ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದ್ದರು. ಈಗ ನಾವು ದೇವೇಗೌಡರು ಕಂಡ ಕನಸು ನನಸು ಮಾಡುತ್ತೇವೆ. ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ," ಎಂದರು.
ಇನ್ನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಜೆಡಿಎಸ್ ಸಜ್ಜಾಗುತ್ತಿದ್ದೆ. ಈಗಾಗಲೇ ಚುನಾವಣಾ ಸಿದ್ಧತೆ ಆರಂಭಿಸಿರುವ ಜೆಡಿಎಸ್, ಟಿಕೆಟ್ ಆಕಾಂಕ್ಷಿಗಳಿಗೆ ಎರಡು ದಿನದ ಕಾರ್ಯಾಗಾರ ಆಯೋಜನೆ ಮಾಡಿದೆ. ಬಿಡದಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಜನತಾ ಪರ್ವ ಕಾರ್ಯಾಗಾರ ನಡೆಯುತ್ತಿದೆ.












Click it and Unblock the Notifications