ಕೆ.ಆರ್. ಕ್ಷೇತ್ರ: ಶಾಸಕ ರಾಮದಾಸ್ ವಿರುದ್ಧ ವಿಪ್ರ ಮುಖಂಡರು ತಿರುಗಿ ಬಿದ್ದಿದ್ದೇಕೆ?
ಶಾಸಕ ರಾಮದಾಸ್ ಅವರು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ರೀತಿಯ ಉಪಯೋಗಗಳನ್ನು ಮಾಡಿಲ್ಲ. ಸೌಲಭ್ಯ ತಂದಿಲ್ಲ ಎಂಬ ಅಸಮಾಧಾನವನ್ನು ವಿಪ್ರ ಮುಖಂಡರು ಹೊರ ಹಾಕಿದ್ದಾರೆ. ಬಿಜೆಪಿಯ ಹಾಲಿ ಶಾಸಕ ಎಸ್.ಎ.ರಾಮದಾಸ್ ವಿರುದ್ಧವೇ ಸಮರ ಆರಂಭವಾಗಿದೆ.
ಮೈಸೂರು, ಫೆಬ್ರವರಿ 24: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಕೃಷ್ಣರಾಜ ಕ್ಷೇತ್ರದಲ್ಲೀಗ ಸಂಚಲನ ಶುರುವಾಗಿದೆ. ಇಲ್ಲಿ ಬಿಜೆಪಿಯ ಹಾಲಿ ಶಾಸಕ ಎಸ್.ಎ.ರಾಮದಾಸ್ ವಿರುದ್ಧವೇ ಸಮರ ಆರಂಭವಾಗಿದೆ. ಸಮರ ಸಾರಿದವರು ಕ್ಷೇತ್ರದ ಜನರಲ್ಲ, ವಿರೋಧ ಪಕ್ಷದವರೂ ಅಲ್ಲ. ಅವರ ಸಮುದಾಯದವರೇ ಎನ್ನುವುದು ಗಂಭೀರ ವಿಚಾರ. ಈ ಸಮರದ ಹಿಂದೆ ಕ್ಷೇತ್ರದ ಕೆಲ ಬಿಜೆಪಿ ನಾಯಕರ ಕೈವಾಡವಿದೆಯಾ ಎನ್ನುವ ಚರ್ಚೆ ನಡೆಯುತ್ತಿದೆ.
ಕೆ.ಆರ್.ಕ್ಷೇತ್ರದಲ್ಲಿ ವಿಪ್ರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೆಲ್ಲರ ಬೆಂಬಲ ಶಾಸಕ ರಾಮದಾಸ್ ಅವರಿಗಿದೆ. ಜೊತೆಗೆ ರಾಮದಾಸ್ ಅವರನ್ನು ಹೊರತು ಪಡಿಸಿ ಎರಡನೇ ದರ್ಜೆಯ ವಿಪ್ರ ಸಮುದಾಯದ ನಾಯಕರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ರಾಜಕೀಯವಾಗಿ ಮುನ್ನಲೆಗೆ ಬರಬೇಕಾದರೆ ಶಾಸಕ ರಾಮದಾಸ್ ಅವರು ಹಿಂದೆ ಸರಿಯಲೇ ಬೇಕಾಗಿದೆ. ಅವರು ಹಿಂದೆ ಸರಿಯದ ಹೊರತು ಇತರೆ ನಾಯಕರು ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಿಲ್ಲದಂತಾಗಿದೆ.

ಈಗಾಗಲೇ ಶಾಸಕ ರಾಮದಾಸ್ ಅವರಿಗೆ ಪರ್ಯಾಯವಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರಿದ್ದು, ಅವರ ಜೊತೆಜೊತೆಗೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಫಣೀಶ್, ಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್ ಹೀಗೆ ಒಬ್ಬರ ಮೇಲೆ ಒಬ್ಬರಿದ್ದಾರೆ. ಅವರೆಲ್ಲರ ರಾಜಕೀಯ ಬೆಳವಣಿಗೆಗೆ ರಾಮದಾಸ್ ಅಡ್ಡಗಾಲಾಗಿದ್ದಾರೆ. ಹೀಗಾಗಿ ಅವರೆಲ್ಲರ ಪರವಾಗಿ ಮತ್ತು ರಾಮದಾಸ್ ವಿರುದ್ಧವಾಗಿ ವಿಪ್ರ ಸಮುದಾಯದ ಕೆಲವು ಮುಖಂಡರು ಬ್ಯಾಟಿಂಗ್ ಮಾಡಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ರಾಜೀವ್ ಪರ ವಿಪ್ರ ಮುಖಂಡರ ಬ್ಯಾಟಿಂಗ್!
ಶಾಸಕ ರಾಮದಾಸ್ ಅವರು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ರೀತಿಯ ಉಪಯೋಗಗಳನ್ನು ಮಾಡಿಲ್ಲ. ಸೌಲಭ್ಯ ತಂದಿಲ್ಲ ಎಂಬ ಅಸಮಾಧಾನವನ್ನು ಹೊರ ಹಾಕಿರುವ ವಿಪ್ರ ಮುಖಂಡರು ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ನೀಡದೆ ಸಮುದಾಯದ ಮತ್ತೊಬ್ಬ ನಾಯಕನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವ ಮೂಲಕ ಎಚ್.ವಿ.ರಾಜೀವ್ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಇದೀಗ ಶಾಸಕ ರಾಮದಾಸ್ ಅವರ ವಿರುದ್ಧವೇ ಕ್ಷೇತ್ರದ ಕೆಲವು ಬ್ರಾಹ್ಮಣ ಮುಖಂಡರು ತಿರುಗಿ ಬಿದ್ದಿರುವುದನ್ನು ಗಮನಿಸಿದರೆ ಈ ಬೆಳವಣಿಗೆಯನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಒಂದು ವೇಳೆ ರಾಮದಾಸ್ ಅವರಿಗೆ ಟಿಕೆಟ್ ನೀಡದಂತೆ ತಪ್ಪಿಸುವ ಕೆಲಸ ಪಕ್ಷದೊಳಗೆ ನಡೆಯುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.

ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಚುನಾವಣೆ ನಡೆದಾಗಲೆಲ್ಲ ರಾಮದಾಸ್ ಅವರೇ ಅಭ್ಯರ್ಥಿ ಆಗಿ ಮುಂದುವರೆಯುತ್ತಿದ್ದಾರೆ. ಇದು ಮುಂದುವರೆದರೆ ಇತರೆ ನಾಯಕರು ಮುನ್ನಲೆಗೆ ಬರುವುದು ಹೇಗೆ ಎಂಬ ಅಸಮಾಧಾನವೂ ಸಮುದಾಯದಲ್ಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆದ್ದಿದ್ದು ಬಿಜೆಪಿ
ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಒಂದಷ್ಟು ವಿಭಿನ್ನತೆ ಕೆ.ಆರ್. ಕ್ಷೇತ್ರದಲ್ಲಿ ಕಂಡು ಬರುತ್ತದೆ. ಇಲ್ಲಿ ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.
ಕೆ.ಆರ್.ಕ್ಷೇತ್ರದಲ್ಲಿ ಇದುವರೆಗೆ ಹನ್ನೊಂದು ಚುನಾವಣೆಗಳು ನಡೆದಿದ್ದು, 1967 ಎಚ್.ಚೆನ್ನಯ್ಯ (ಪಕ್ಷೇತರ), 1972 ಸೂರ್ಯ ನಾರಾಯಣರಾವ್ (ಕಾಂಗ್ರೆಸ್), 1978 ಎಚ್.ಗಂಗಾಧರನ್ (ಜನತಾಪಕ್ಷ), 1983ಎಚ್.ಗಂಗಾಧರನ್ (ಬಿಜೆಪಿ), 1985 ವೇದಾಂತ ಹೆಮ್ಮಿಗೆ (ಜನತಾಪಕ್ಷ), 1989 ಸೋಮಸುಂದರಂ (ಕಾಂಗ್ರೆಸ್), 1994 ಎಸ್.ಎ.ರಾಮದಾಸ್ (ಬಿಜೆಪಿ), 1999 ಎಸ್.ಎ.ರಾಮದಾಸ್ (ಬಿಜೆಪಿ), 2004 ಎ.ಕೆ.ಸೋಮಶೇಖರ್ (ಕಾಂಗ್ರೆಸ್), 2008 ಎಸ್.ಎ.ರಾಮದಾಸ್ (ಬಿಜೆಪಿ) 2013 ಎಂ.ಕೆ.ಸೋಮಶೇಖರ್ (ಕಾಂಗ್ರೆಸ್), 2018 ಎಸ್.ಎ.ರಾಮದಾಸ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ನಾಲ್ಕು ಬಾರಿ, ಬಿಜೆಪಿ ಐದು ಬಾರಿ, ಜನತಾಪಕ್ಷ ಎರಡು ಬಾರಿ, ಪಕ್ಷೇತರರು ಒಮ್ಮೆ ಗೆಲುವು ಸಾಧಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಬ್ರಾಹ್ಮಣ, ವೀರಶೈವ ಲಿಂಗಾಯತರು, ಕುರುಬರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದುವರೆಗಿನ ಚುನಾವಣೆಗಳಲ್ಲಿ ಬ್ರಾಹ್ಮಣರು, ಲಿಂಗಾಯತರೇ ಹೆಚ್ಚು ಬಾರಿ ಗೆದ್ದಿರುವುದು ಕಂಡು ಬಂದಿದೆ. ಇದೆಲ್ಲವನ್ನು ಗಮನಿಸಿದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಕಷ್ಟದಲ್ಲಿದ್ದು, ಆಡಳಿತ ವಿರೋಧಿ ಅಲೆ ಎದ್ದಿದ್ದು, ಅಧಿಕಾರ ಉಳಿಸಿಕೊಳ್ಳಬೇಕಾದರೆ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ. ಅದನ್ನು ಹೊರತು ಪಡಿಸಿ ಈ ಬಾರಿ ಕ್ಷೇತ್ರದಲ್ಲಿ ರಾಮದಾಸ್ ಅವರನ್ನು ಕಡೆಗಣಿಸಿದರೆ ಕಾಂಗ್ರೆಸ್ಗೆ ಸುಲಭ ಜಯವಾಗಲಿದೆ.
ಹೈಕಮಾಂಡ್ ನಾಯಕರ ತೀರ್ಮಾನ ಅಂತಿಮ
ಚುನಾವಣೆ ಕಾಲದಲ್ಲಿ ಶಾಸಕ ರಾಮದಾಸ್ ಅವರಿಗೆ ಸಂಕಷ್ಟಗಳು ಎದುರಾಗುವುದು ಹೊಸತೇನಲ್ಲ. ಆದರೆ ಈ ಬಾರಿ ಸಮುದಾಯದ ಮುಖಂಡರೇ ತಿರುಗಿಬಿದ್ದಿದ್ದು, ಟಿಕೆಟ್ ನೀಡದಂತೆ ಬಿಜೆಪಿ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿರುವುದು ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಅದೆಷ್ಟೋ ಮಂದಿಗೆ ಈಗಾಗಲೇ ಅಧಿಕಾರ ನಡೆಸಿರುವ ಸಮುದಾಯದ ನಾಯಕರ ಮೇಲೆ ಅಸಮಾಧಾನವಿದೆ.
ಬೇರೆಲ್ಲ ಸಮುದಾಯದ ನಾಯಕರು ತಮ್ಮ ಸಮುದಾಯಕ್ಕಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ನಮ್ಮ ನಾಯಕರು ಸಮುದಾಯಕ್ಕೆ ಅನುಕೂಲವಾಗುವಂತೆ ಶಾಲಾ, ಕಾಲೇಜು, ಹಾಸ್ಟೆಲ್, ಇನ್ನಿತರ ಯಾವುದೇ ಸೌಲಭ್ಯ ಮಾಡಿ ಕೊಟ್ಟಿಲ್ಲ ಎನ್ನುವುದಾಗಿದೆ. ಯಾರು ಏನೇ ಪರ-ವಿರೋಧದ ಬಗ್ಗೆ ಮಾತನಾಡಿದರೂ ಅಂತಿಮ ತೀರ್ಮಾನ ಪಕ್ಷದ್ದಾಗಿರುವುದರಿಂದ ಕಾದು ನೋಡುವುದು ಅನಿವಾರ್ಯವಾಗಲಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications