ಮೈಸೂರು; ಒಂಟಿಕೊಪ್ಪಲಿನಲ್ಲಿ ವೆಂಕಟೇಶ್ವರನ ದರ್ಶನವಿಲ್ಲ
ಮೈಸೂರು, ಡಿಸೆಂಬರ್ 25: ವೈಕುಂಠ ಏಕಾದಶಿ ಸಂದರ್ಭದಲ್ಲಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬ ಜನರ ಆಸೆ ಈಡೇರಿಲ್ಲ. ಮೈಸೂರಿನ ಒಂಟಿ ಕೊಪ್ಪಲಿನಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೋವಿಡ್ ಸೋಂಕಿನ ಹರಡುವಿಕೆ ತಡೆಯಲು ಒಂಟಿ ಕೊಪ್ಪಲಿನಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಬ್ರಿಟನ್ನಲ್ಲಿ ರೂಪಾಂತರಗೊಂಡ ಕೋವಿಸ್ ಸೋಂಕು ಪತ್ತೆಯಾಗಿದೆ. ಇದು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿದೆ.
ಕರ್ನಾಟಕದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಒಂಟಿ ಕೊಪ್ಪಲಿನ ವೆಂಕಟೇಶ್ವರ ದೇವಾಲಯದಲ್ಲಿ ವೈಭವದ ವೈಕುಂಠ ಏಕಾದಶಿಗೆ ತಡೆ ಹಾಕಲಾಗಿದೆ. ದೇವಾಲಯದ ಆಡಳಿತ ಮಂಡಳಿ ಮುಖ್ಯದ್ವಾರವನ್ನು ಬಂದ್ ಮಾಡಲಾಗಿದ್ದು, ಜನರಿಗೆ ಪ್ರವೇಶವಿಲ್ಲ.

ಧಾರ್ಮಿಕ ವಿಧಿ-ವಿಧಾನದಂತೆ ಆಡಳಿತ ಮಂಡಳಿಯಿಂದ ಮಾತ್ರ ಪೂಜೆ ಕಾರ್ಯ ನಡೆಯುತ್ತಿದೆ. ಭಕ್ತರು ಹೊರಭಾಗದಿಂದಲೇ ದೇವರಿಗೆ ನಮಸ್ಕರಿಸುತ್ತಿದ್ದಾರೆ. ನಿರ್ಬಂಧ ನಡುವೆಯೂ ದೇವಾಲಯಕ್ಕೆ ಭಕ್ತಸಮೂಹ ಆಗಮಿಸುತ್ತಿದ್ದು, ಹೊರಭಾಗದಲ್ಲೇ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದಾರೆ.
ಪ್ರತಿ ವರ್ಷವೂ ವೈಕುಂಠ ಏಕಾದಶಿ ದಿನದಂದು ಒಂಟಿ ಕೊಪ್ಪಲಿನಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ, ಈ ಬಾರಿ ಕೋವಿಡ್ ದೇವರ ದರ್ಶನಕ್ಕೆ ಬ್ರೇಕ್ ಹಾಕಿದೆ.












Click it and Unblock the Notifications