ಪಗಡೆಯಾಟ ಆಡಿ ಬಾಲ್ಯ ಮೆಲುಕು ಹಾಕಿದ ವಿ.ಸೋಮಣ್ಣ
ಮೈಸೂರು, ಅಕ್ಟೋಬರ್ 3: "ಮನುಷ್ಯನಿಗೆ ಯಾವುದಾದರೊಂದು ಕಲೆ ಇರಬೇಕು. ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ದ್ವೇಷ, ಅಸೂಯೆಗಳಂಥ ಆಲೋಚನೆಗಳಿಂದ ದೂರವಿರಬಹುದು" ಎಂದು ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2019ರ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 'ಪಾರಂಪರಿಕ ಆಟಗಳ ಸ್ಪರ್ಧೆ' ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಪಗಡೆ ಆಟ ಆಡುವ ಮೂಲಕ ಸೋಮಣ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
"ಆಟಗಳು ಪೂರ್ವಜರು ನೀಡಿದ ಕೊಡುಗೆ. ಹಳ್ಳಿಗಳಲ್ಲಿ ಕುಂಟೆಬಿಲ್ಲೆ ಆಟ ಆಡ್ತಾ ಇದ್ವಿ. ಚಿನ್ನಿದಾಂಡು ಆಡುವುದರಲ್ಲಿಯೂ ನಾನು ಎಕ್ಸ್ ಪರ್ಟ್. ಎರಡು, ಮೂರು ನಾಲ್ಕು ಸಾರಿ ಆಡಿ ಐದನೇ ಸಲ ಹೊಡೆಯುತ್ತಿದ್ದೆ. ಅದಕ್ಕೆ ಕಾಸು ಕೊಡೋರು, ಕಲ್ಲು ಮೇಲೆ ಕಲ್ಲು ಇಟ್ಟು ಲಗೋರಿ ಆಡೋರು. ಗೋಲಿಯನ್ನು ಗುಳಿಯಲ್ಲಿ ಬೀಳಿಸುವ ಅಳಗುಳಿ ಮಣೆ ಆಟಗಳನ್ನು ಆಡುತ್ತಿದ್ದೆವು" ಎಂದು ಬಾಲ್ಯದ ದಿನಗಳನ್ನು ಸ್ಮರಿಸಿದರು.

"ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸೋಂಬೇರಿಗಳ ಇಲಾಖೆ ಎಂದುಕೊಂಡಿದ್ದೆ. ಆದರೆ ಇಲ್ಲೂ ಕೂಡ ಏನೆಲ್ಲ ಸುಧಾರಣೆಗಳನ್ನು ಮಾಡಬಹುದು ಎಂಬುದನ್ನು ಇಲ್ಲಿನ ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ" ಎಂದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕಿ ನಿರ್ಮಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ 10-16ರ ವಯಸ್ಸಿನ ಮಕ್ಕಳಿಗೆ ಕಣ್ಣಾ ಮುಚ್ಚಾಲೆ, ಕುಂಟಾಬಿಲ್ಲೆ, ಹಾವು-ಏಣಿ, ಗೋಲಿ, ಚೌಕಾಬಾರಾ, ಮೂರು ಕಾಲಿನ ಓಟ ಏರ್ಪಡಿಸಲಾಗಿದೆ. 17-25ರ ವಯಸ್ಸಿನ ಯುವಕ ಯುವತಿಯರಿಗೆ ಅಳಗುಳಿಮಣೆ, ಹಗ್ಗ-ಜಗ್ಗಾಟ, ಹಾವು-ಏಣಿ, ಗೋಲಿ, ಬಿಲ್ಲು-ಬಾಣ, ಚಿನ್ನಿದಾಂಡು, ಬುಗುರಿ, ಗೋಣೀಚೀಲ ಓಟ, ಮೂರು ಕಾಲಿನ ಓಟ, ಹುಲಿ-ಕುರಿ, 25 ವರ್ಷ ಮೇಲ್ಪಟ್ಟವರಿಗೆ ಪಗಡೆ, ಹಗ್ಗ ಜಗ್ಗಾಟ, ಅಳಗುಳಿಮಣೆ, ಬಿಲ್ಲುಬಾಣ, ಚೌಕಾಬಾರ ಆಟಗಳು ನಡೆದವು.












Click it and Unblock the Notifications