ಮೈಸೂರು ಜರ್ಮನ್ ಪ್ರೆಸ್ಗೆ ಬೀಗ, ನೌಕರರ ಪ್ರತಿಭಟನೆ
ಮೈಸೂರು, ಅಕ್ಟೋಬರ್ 10 : ಮೈಸೂರಿನ ಪ್ರತಿಷ್ಠಿತ ಜರ್ಮನ್ ಪ್ರೆಸ್ ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದಕ್ಷಿಣ ಭಾರತದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಮೂರು ಮುದ್ರಣಾಲಯಗಳಲ್ಲಿ ಜರ್ಮನ್ ಪ್ರೆಸ್ ಒಂದಾಗಿದೆ.
ಮುದ್ರಣಾಲಯವನ್ನು ಮುಚ್ಚಿ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಪ್ರೆಸ್ ಜೊತೆ ವಿಲೀನಗೊಳಿಸುವ ಚಿಂತನೆ ಕೇಂದ್ರ ಸರ್ಕಾರದ್ದು. ದಕ್ಷಿಣ ಭಾರತದ ಮುದ್ರಣಾಲಯವನ್ನು ಮುಚ್ಚಿ ಉತ್ತರ ಭಾರತದ ಮುದ್ರಣಾಲಯಗಳನ್ನು ಆಧುನೀಕರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಮೈಸೂರಿನ ಜರ್ಮನ್ ಪ್ರೆಸ್ ಅನ್ನು 1976ರಲ್ಲಿ ಭಾರತ ಸರ್ಕಾರಕ್ಕೆ ಜರ್ಮನ್ ಸಂಸ್ಥೆ ಉಡುಗೊರೆಯಾಗಿ ನೀಡಿತ್ತು. ಇದೀಗ ಪ್ರೆಸ್ ಬಾಗಿಲು ಹಾಕಲು ಮುಂದಾಗಿರುವುದರಿಂದ 27 ನೌಕರರ ಬದುಕಿಗೆ ಬರೆ ಎಳೆದಂತಾಗುತ್ತಿದೆ. ಕೇಂದ್ರದ ನಿರ್ಧಾರಕ್ಕೆ ಮೈಸೂರು-ಕೊಡಗು ಸಂಸದ ಬಿಜೆಪಿಯ ಪ್ರತಾಪ ಸಿಂಹ ಮೌನ ವಹಿಸಿದ್ದಾರೆ.
ಕೇಂದ್ರ ಸಶಸ್ತ್ರ ಮೀಸಲು ಪಡೆ, ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಂಸ್ಥೆಗಳ ಮುದ್ರಣ ಕಾರ್ಯವನ್ನು ಜರ್ಮನ್ ಪ್ರೆಸ್ ನಲ್ಲಿ ನಡೆಸಲಾಗುತ್ತಿತ್ತು. ಜರ್ಮನ್ನಿಂದ ಆಮದು ಮಾಡಿಕೊಂಡಿರುವ 4 ವೆಬ್ ಆಫ್ಸೆಟ್ ಮುದ್ರಣ ಯಂತ್ರಗಳು ಇಲ್ಲಿವೆ. ಮುದ್ರಣಕ್ಕೆ ಬೇಕಾದ ಅಗತ್ಯ ಕಾಗದ, ಶಾಯಿ ಸಹ ಸಾಕಷ್ಟು ಇದ್ದು, ಕಾರ್ಖಾನೆಯನ್ನು ಮುಚ್ಚಿದರೆ ಜೀವನ ಅತಂತ್ರವಾಗಲಿದೆ ಎನ್ನುತ್ತಾರೆ ನೌಕರರು.
ಪ್ರತಿಭಟನೆ : ಜರ್ಮನ್ ಪ್ರೆಸ್ ಮುಚ್ಚುವ ನಿರ್ಧಾರವನ್ನು ಖಂಡಿಸಿ ಕಳೆದ ಒಂದು ವಾರದಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಸಿಬ್ಬಂದಿಗಳು ಪ್ರೆಸ್ ಮುಚ್ಚಬಾರದು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಮೊದಲು ಇಲ್ಲಿ 105 ಸಿಬ್ಬಂದಿಗಳಿದ್ದರು, ಸದ್ಯ 27 ಜನರಿದ್ದಾರೆ.
ಕೇಂದ್ರ ಸರ್ಕಾರ ದೆಹಲಿಯ 3, ನಾಸಿಕ್ ಹಾಗೂ ಕೋಲ್ಕತ್ತದ ತಲಾ ಒದೊಂದು ಮುದ್ರಣ ಘಟಕ ಉಳಿಸಿಕೊಳ್ಳುತ್ತಿದೆ. ಮೈಸೂರು, ಕೇರಳ ಹಾಗೂ ತಮಿಳುನಾಡಿನ ಘಟಕಗಳನ್ನು ಮುಚ್ಚುತ್ತಿದೆ. ಸಿಬ್ಬಂದಿಗಳನ್ನು ಉತ್ತರ ಭಾರತಕ್ಕೆ ವರ್ಗಾಯಿಸಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿದೆ.











Click it and Unblock the Notifications