ಹೊಸವರ್ಷದಂದು ಕಪಿಲಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕರು ನೀರು ಪಾಲು
ಮೈಸೂರು, ಜನವರಿ 02: ಕಪಿಲಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ ಮೂವರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೆ, ಒಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹೆಜ್ಜಿಗೆ ಸೇತುವೆ ಬಳಿ ಮಂಗಳವಾರ ನಡೆದಿದೆ.
ಮೂಲತಃ ಉತ್ತರ ಪ್ರದೇಶದ ನಿವಾಸಿ ರಾಜೀವ್ ರಂಜನ್ ತಿವಾರಿ(28), ಕೊಲ್ಕತ್ತಾದ ಸ್ನೇಹ ಅಶೀಸ್ ಚಕ್ರವರ್ತಿ (29) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು. ನಂಜನಗೂಡು ಚಾಮಲಾಪುರಹುಂಡಿಯ ನಿವಾಸಿ ವಿನೋದ್ ಪ್ರಾಣಾಪಾಯದಿಂದ ಪಾರಾದವರು.
ನಂಜನಗೂಡು ತಾಲೂಕಿನ ಚಾಮಲಪುರಹುಂಡಿಯ ನಿವಾಸಿ ವಿನೋದ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನೀಯರಾಗಿದ್ದು ಹೊಸವರ್ಷಾಚರಣೆಗೆಂದು ಸ್ನೇಹಿತರಾದ ರಾಜೀವ್ ರಂಜನ್ ತಿವಾರಿ ಮತ್ತು ಸ್ನೇಹ ಅಶೀಸ್ ಚಕ್ರವರ್ತಿ ನಂಜನಗೂಡಿಗೆ ಬಂದಿದ್ದರು.

ಮೂವರು ಸೇರಿ ಹೊಸವರ್ಷದಂದು ಮಂಗಳವಾರ ಬೆಳಿಗ್ಗೆ 10.30ರಂದು ನಂಜನಗೂಡಿನ ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ನೀರಿನಲ್ಲಿ ಸ್ನಾನ ಮಾಡಲು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಈಜು ಬಾರದ ರಾಜೀವ್ ರಂಜನ್ ತಿವಾರಿ ಮತ್ತು ಸ್ನೇಹ ಅಶೀಸ್ ಚಕ್ರವರ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವೇಳೆ ಅಲ್ಪಸ್ವಲ್ಪ ಈಜು ಕಲಿತಿದ್ದ ವಿನೋದ್ ಪ್ರಾಣಾಪಾಯದಿಂದ ಪಾರಾಗಿ ದಡ ಸೇರಿಸಿದ್ದು ಸ್ನೇಹಿತರಿಬ್ಬರು ನೀರಿನಲ್ಲಿ ಮುಳುಗಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು ತಕ್ಷಣ ಡಿಎಸ್ಪಿ ಮಲ್ಲಿಕ್, ನಗರ ಠಾಣೆಯ ಪಿಎಸ್ ಐ ಆನಂದ್ ಸ್ಥಳಕ್ಕೆ ಆಗಮಿಸಿದ್ದಾರೆ.
ಅಗ್ನಿಶಾಮಕ ಠಾಣೆಯ ಅಧಿಕಾರಿ ಬಾಬು ಅವರ ಮಾರ್ಗದರ್ಶನದಲ್ಲಿ ನುರಿತ ಈಜುಗಾರರು ಬೋಟ್ ಮತ್ತು ತೆಪ್ಪದ ಸಹಕಾರದಿಂದ ಮೃತದೇಹಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದು ಮಧ್ಯಾಹ್ನ 12.40ಕ್ಕೆ ರಾಜೀವ್ ರಂಜನ್ ತಿವಾರಿಯ ಮೃತದೇಹ ಪತ್ತೆಯಾಯಿತು.
ನಂತರ ಇನ್ನೊಬ್ಬ ಸ್ನೇಹ ಅಶೀಸ್ ಮೃತದೇಹಕ್ಕಾಗಿ ವ್ಯಾಪಕ ಶೋಧನೆ ನಡೆಸಲಾಯಿತಾದರೂ ಮೃತದೇಹ ದೊರೆಯದ ಕಾರಣ ಹುಡುಕಾಟ ಮುಂದುವರೆಸಿದ್ದಾರೆ.











Click it and Unblock the Notifications