Wodeyar Express : ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಮರು ನಾಮಕರಣ
ಮೈಸೂರು, ಅಕ್ಟೋಬರ್ 7: ಬೆಂಗಳೂರು -ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು 'ಒಡೆಯರ್ ಎಕ್ಸ್ಪ್ರೆಸ್' ಎಂದು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಶುಕ್ರವಾರ ತಿಳಿಸಿದೆ. ಹಾಗೆಯೇ ತಾಳಗುಪ್ಪ-ಮೈಸೂರು ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್ಪ್ರೆಸ್ ರೈಲಿನ ಹೆಸರನ್ನು 'ಕುವೆಂಪು ಎಕ್ಸ್ಪ್ರೆಸ್' ಎಂದು ಮರುನಾಮಕರಣ ಮಾಡಲಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಬೇಕೆಂದು ದೆಹಲಿಯಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈಗಾಗಲೆ ಸಾಕಷ್ಟು ಜನರು ರೈಲಿನ ಹೆಸರನ್ನು ಬದಲಾಯಿಸಲು ಒತ್ತಾಯ ಮಾಡಿದ್ದಾರೆ. ಏಕೆಂದರೆ ಮೈಸೂರಿಗೆ ರೈಲು ಸಂಪರ್ಕ ತರಬೇಕೆಂಬುದು ಮೈಸೂರಿನ ಒಡೆಯರ್ ವಂಶಸ್ಥರ ಕನಸಾಗಿತ್ತು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಹಾಗಾಗಿ ಟಿಪ್ಪು ಎಕ್ಸ್ಪ್ರೆಸ್ ಹೆಸರಿನ ಬದಲು ಒಡೆಯರ್ ಎಕ್ಸ್ಪ್ರೆಸ್ ಎಂದು ಬದಲಾಯಿಸುತ್ತೇವೆ ಎಂದು ತಿಳಿಸಿದ್ದರು.
ಟಿಪ್ಪು ಖಡ್ಗ ಹಿಡಿದ ಬಿಜೆಪಿ ನಾಯಕರ ಚಿತ್ರ ಹಂಚಿಕೊಂಡು ಕಾಂಗ್ರೆಸ್ ವಾಗ್ದಾಳಿ
ಶುಕ್ರವಾರ ಶುಭ ಸುದ್ದಿ
ರೈಲ್ವೇ ಇಲಾಖೆ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ರೈಲ್ವೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು " ಒಡೆಯರ್ ಎಕ್ಸ್ಪ್ರೆಸ್" ನಿಮಗೆ ಸೇವೆ ನೀಡಲಿದೆ .ಮೈಸೂರು-ತಾಳಗುಪ್ಪ ರೈಲು "ಕುವೆಂಪು ಎಕ್ಸ್ಪ್ರೆಸ್ '' ಆಗಲಿದೆ. ಥಾಂಕ್ಯೂ ಅಶ್ವಿನಿ ವೈಷ್ಣವ್ ಜಿ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಸರ್" ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಟಿಪ್ಪು ಹೆಸರಿನ ವಿರುದ್ಧ ಬಿಜೆಪಿ ಸಮರ ಸಾರುತ್ತಿರುವುದು ಇದೇ ಮೊದಲೇನಲ್ಲ, ಈಗಾಗಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರಂಭಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಿದೆ. ಜೊತೆಗೆ 7 ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ, ಆದರೆ 6 ಹಾಗೂ 10 ನೇ ತರಗತಿಯಲ್ಲಿ ಟಿಪ್ಪು ಪಠ್ಯವನ್ನು ಉಳಿಸಿದೆ.