ಕಪಿಲ ನದಿಯಲ್ಲಿ ಸಿಕ್ಕಿದ್ದು ಮೂರು ಟ್ರ್ಯಾಕ್ಟರ್ ತ್ಯಾಜ್ಯ
ಫೆಬ್ರವರಿ 17ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಪಿಲ ನದಿಯ ಸೋಪಾನ ಕಟ್ಟೆ ಬಳಿ ನಡೆದ ಸ್ವಚ್ಛತೆಯಲ್ಲಿ ಸುಮಾರು ಮೂರು ಟ್ರ್ಯಾಕ್ಟರ್ ನಷ್ಟು ತ್ಯಾಜ್ಯ ಸಿಕ್ಕಿದೆ.
ನಂಜನಗೂಡು, ಫೆಬ್ರವರಿ. 17 : ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಕಪಿಲ ನದಿ ಅಶುಚಿತ್ವಗೊಂಡಿದ್ದ ಹಿನ್ನಲೆಯಲ್ಲಿ ಹಲವು ಸಂಘಟನೆಗಳ ಸಹಕಾರದೊಂದಿಗೆ ಶ್ರಮದಾನದ ಮೂಲಕ ನದಿಯಲ್ಲಿದ್ದ ತ್ಯಾಜ್ಯ ವಸ್ತುಗಳು, ಕಲ್ಮಶಗಳನ್ನು ಹೊರತೆಗೆಯುವ ಮೂಲಕ ಸ್ವಚ್ಛಗೊಳಿಸಲಾಯಿತು.
ಫೆಬ್ರವರಿ 17ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಪಿಲ ನದಿಯ ಸೋಪಾನ ಕಟ್ಟೆ ಬಳಿ ನಡೆದ ಸ್ವಚ್ಛತೆಯಲ್ಲಿ ಸುಮಾರು ಮೂರು ಟ್ರ್ಯಾಕ್ಟರ್ ನಷ್ಟು ತ್ಯಾಜ್ಯ ಸಿಕ್ಕಿದೆ.
ದೂರದಿಂದ ಬರುವ ಭಕ್ತರು ಹಾಗೂ ಪ್ರವಾಸಿಗರು ಇಲ್ಲಿನ ಸೋಪಾನ ಕಟ್ಟೆಯಲ್ಲಿ ಸ್ನಾನ ಮಾಡುವುದರೊಂದಿಗೆ ತಮ್ಮೊಂದಿಗೆ ತರುವ ವಸ್ತುಗಳು, ಪ್ಲಾಸ್ಟಿಕ್ ಕವರ್, ಬಟ್ಟೆ ಬರೆ, ಇನ್ನಿತರ ಪದಾರ್ಥಗಳನ್ನು ಎಸೆದು ಹೋಗುತ್ತಿದ್ದರು. ಇದೆಲ್ಲವೂ ನದಿಯಲ್ಲಿ ಸಂಗ್ರಹವಾಗಿ ನೀರು ಕಲ್ಮಶಗೊಳ್ಳತೊಡಗಿತ್ತು.

ಮೊದಲೆಲ್ಲ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ನದಿಗೆ ಬಿದ್ದ ತ್ಯಾಜ್ಯ ವಸ್ತುಗಳು ಹರಿದು ಹೋಗುತ್ತಿತ್ತು. ಆದರೆ ಈ ಬಾರಿ ನದಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ತ್ಯಾಜ್ಯಗಳೆಲ್ಲ ಅಲ್ಲಲ್ಲಿ ನಿಂತು ಅಸಹನೀಯ ವಾತಾವರಣವನ್ನು ಸೃಷ್ಟಿಸಿತ್ತು.
ಇದನ್ನು ನೋಡಿದ ನಂಜನಗೂಡು ನಗರದ ಯುವ ಬ್ರಿಗೇಡ್, ಶ್ರೀ ಕಂಠೇಶ್ವರ ಸ್ವಾಮಿ ದೋಣಿ ನಡೆಸುವವರ ಸಂಘ, ಜಯಕರ್ನಾಟಕ ಸಂಘಟನೆಯು ಜಂಟಿಯಾಗಿ ಸ್ವಪ್ರೇರಣೆಯಿಂದ ಶ್ರಮದಾನದ ಮೂಲಕ ಕಪಿಲ ನದಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಕುರಿತು ತೀರ್ಮಾನ ಕೈಗೊಂಡಿತು.

ಈ ಸಂದರ್ಭ ನದಿ ಮಧ್ಯೆ ಸಂಗ್ರಹವಾಗಿದ್ದ ಬಟ್ಟೆ ಬರೆ ಸೇರಿದಂತೆ ತ್ಯಾಜ್ಯವನ್ನು ಹೊರ ತೆಗೆಯಲಾಗಿದ್ದು ಸುಮಾರು ಮೂರು ಟ್ರ್ಯಾಕ್ಟರ್ನಷ್ಟು ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಸಿಕ್ಕಿದೆ.
ಶ್ರಮದಾನದ ಬಳಿಕ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು ಶ್ರೀಕಂಠೇಶ್ವರನ ಸನ್ನಿಧಿಗೆ ಬರುವ ಭಕ್ತಾಧಿಗಳು ನದಿಯ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನದಿಯಲ್ಲಿ ಹಳೆಯ ಬಟ್ಟೆ ಬರೆಗಳನ್ನು ಎಸಯಬಾರದು.
ಕಪಿಲ ನದಿಯ ನೀರನ್ನು ಶ್ರೀ ಕಂಠೇಶ್ವರನ ಅಭಿಷೇಕಕ್ಕೆ ಬಳಸುವುದರಿಂದ ನದಿಯ ನೀರನ್ನು ಮಲೀನಗೊಳಿಸದೆ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.












Click it and Unblock the Notifications