ಮೇಟಗಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯ ಆಡಳಿತಾವಧಿಯ ಮೂರು ವೀರಗಲ್ಲುಗಳು ಪತ್ತೆ
ಮೈಸೂರು, ಜುಲೈ 29: ಇಲ್ಲಿಗೆ ಸಮೀಪದ ಮೇಟಗಳ್ಳಿಯಲ್ಲಿ 15ನೇ ಶತಮಾನದ್ದೆಂದು ಹೇಳಲಾದ ಮೂರು ವೀರಗಲ್ಲುಗಳು ಪತ್ತೆಯಾಗಿದ್ದು, ಇವು ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯದ್ದೆಂದು ತಿಳಿದುಬಂದಿದೆ.
ಗ್ರಾಮದ ಸ್ವಚ್ಛತೆಗೆ ಮುಂದಾದ ವೇಳೆ ಗ್ರಾಮಸ್ಥರ ಕಣ್ಣಿಗೆ ಈ ವೀರಗಲ್ಲುಗಳು ಬಿದ್ದಿವೆ. ಮಣ್ಣಿನಲ್ಲಿ ಒಂದು ವೀರಗಲ್ಲು ಹುದುಗಿದ್ದು, ಗಿಡಗಂಟಿಗಳ ಮಧ್ಯೆ ಎರಡು ವೀರಗಲ್ಲುಗಳು ಪತ್ತೆಯಾಗಿವೆ. ಇವು ಕಪ್ಪುಶಿಲೆಯಲ್ಲಿ ನಿರ್ಮಿಸಿರುವ ಪುರಾತನ ವೀರಗಲ್ಲುಗಳಾಗಿದ್ದು, ಮಣ್ಣಿನಲ್ಲಿ ಮತ್ತಷ್ಟು ವೀರಗಲ್ಲುಗಳು ಹುದುಗಿರುವ ಸಾಧ್ಯತೆ ಇದೆ.

ಪುರಾತತ್ವ ಇಲಾಖೆ ಅಧಿಕಾರಿಗಳಾದ ಸುನಿಲ್ ಕುಮಾರ್ ಹಾಗೂ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೀರಗಲ್ಲಿನಲ್ಲಿ ಮೂರು ಪಟ್ಟಿಕೆ (section) ಇದೆ. ಕೆಳಗಿನ ಪಟ್ಟಿಕೆಯಲ್ಲಿ ವೀರರು ಹೋರಾಡುತ್ತಿರುವ ದೃಶ್ಯ ಕೆತ್ತನೆಯಾಗಿದೆ. ಮಧ್ಯದ ಪಟ್ಟಿಕೆಯಲ್ಲಿ ಹೋರಾಟಗಾರರು ಮಡಿದ ನಂತರ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವ ದೃಶ್ಯ ಕೆತ್ತನೆಯಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಹೋರಾಟದಲ್ಲಿ ಮಡಿದವರಿಗೆ ಸ್ವರ್ಗ ಪ್ರಾಪ್ತಿಯಾಗಿ ಸೂರ್ಯ ಚಂದ್ರರು ಇರುವವರೆಗೆ ಅಜರಾಮರವಾಗಿ ಇರುವ ದೃಶ್ಯ ಕೆತ್ತನೆಯಾಗಿದೆ. ಮೂರು ದೃಶ್ಯಗಳನ್ನ ಮೂರು ಪಟ್ಟಿಕೆಯಲ್ಲಿ ಕೆತ್ತನೆ ಮಾಡಿರುವ ಕಲಾವಿದನ ಕೈಚಳಕ ಇತಿಹಾಸವನ್ನು ನೆನಪಿಸುವಂತೆ ಮಾಡುತ್ತದೆ ಎಂದಿದ್ದಾರೆ.

ಈ ವೀರಗಲ್ಲುಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆ ನಿರ್ಧರಿಸಿದೆ. ಮುಂದಿನ ಪೀಳಿಗೆಗೆ ಗತಕಾಲದ ಇತಿಹಾಸವನ್ನು ಪರಿಚಯಿಸುವ ಉದ್ದೇಶ ಪುರಾತತ್ವ ಇಲಾಖೆಗೆ ಇದೆ. ಆದರೆ ಗ್ರಾಮಸ್ಥರೇ ಇವುಗಳನ್ನು ಸಂರಕ್ಷಿಸಲು ನಿರ್ಧಾರ ಕೈಗೊಂಡಿದ್ದಾರೆ.












Click it and Unblock the Notifications