ಆಷಾಢ ಶುಕ್ರವಾರ; ಚಾಮುಂಡಿ ಬೆಟ್ಟಕ್ಕೆ ಹರಿದು ಬಂತು ಭಕ್ತಸಾಗರ
ಆಷಾಢ ಶುಕ್ರವಾರದ ಅಂಗವಾಗಿ ಸಾವಿರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು 'ಲಕ್ಷ್ಮಿ' ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡರು.
'ಗಿಳಿ ಹಸಿರು' ಬಣ್ಣದ ಸೀರೆ ಹಾಗೂ ಆಭರಣಗಳಿಂದ ಉತ್ಸವ ಮೂರ್ತಿಯನ್ನು ಸಿಂಗರಿಸಲಾಗಿತ್ತು. ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಮುಖ್ಯದ್ವಾರದಲ್ಲಿ'ಅಮ್ಮ' ಎಂದು ಹೂವುಗಳಿಂದ ಬರೆಯಲಾಗಿತ್ತು. ಮುಂಜಾನೆ 3.30ರಿಂದ ಚಾಮುಂಡೇಶ್ವರಿ ದೇಗುಲದಲ್ಲಿ ಆಷಾಢದ ಪೂಜೆ ಆರಂಭವಾಯಿತು. ದೇವಿಯ ಮೂರ್ತಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಗ್ಗೆ 5.30ಕ್ಕೆ ದೇವಿಗೆ 'ಲಕ್ಷ್ಮಿ' ಅಲಂಕಾರ ಪೂರ್ಣಗೊಳಿಸಲಾಯಿತು.

ಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಕೆಲವರು ಸಾರಿಗೆ ಬಸ್ನಲ್ಲಿ ಬಂದರೆ, ಮತ್ತೆ ಕೆಲವರು ಮೆಟ್ಟಿಲುಗಳ ಮೂಲಕ ಬಂದರು. ಸಾವಿರಾರು ಭಕ್ತರಿಗೆ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7ರಿಂದ ರಾತ್ರಿವರೆಗೂ ಪ್ರಸಾದ ವಿತರಣೆ ನಡೆಯಿತು. ವಿಶೇಷ ದರ್ಶನಕ್ಕೆ 300 ಹಾಗೂ 50 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು. 40ಕ್ಕೂ ಹೆಚ್ಚು ಸಿಸಿಟಿವಿಯನ್ನು ಅಳವಡಿಸಲಾಗಿತ್ತು. ಭದ್ರತೆಗೆ ಸಿಎಆರ್ ಪೊಲೀಸರನ್ನು ಹಾಗೂ ಅಶ್ವದಳವನ್ನು ನಿಯೋಜಿಸಲಾಗಿತ್ತು.
ಆಷಾಢ ಮಾಸದ ಪ್ರಯುಕ್ತ ಬೆಟ್ಟಕ್ಕೆ ತಾಯಿ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಸೂಕ್ತ ವ್ಯವಸ್ಥೆಯೇ ಆಗಿರಲಿಲ್ಲ. ಸರತಿ ಸಾಲಿನಲ್ಲಿ ನಿಂತರು ಹಾಗೆ ಇದ್ದರು. ಆದರೆ, ಕೆಲವರಿಗೆ ಮುಖ್ಯದ್ವಾರದಿಂದಲೇ ದರ್ಶನಕ್ಕೆ ಬಿಡಲಾಗುತ್ತಿತ್ತು. ಪೊಲೀಸರು ದರ್ಶನಕ್ಕೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಎಲ್ಲರನ್ನೂ ಎಳೆದು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಾಸಕರಾದ ವಿನಯ್ ಕುಲಕರ್ಣಿ, ನರೇಂದ್ರ ಸ್ವಾಮಿ ಆಷಾಢ ಶುಕ್ರವಾರ ನಿಮಿತ್ತ ದೇವಿ ದರ್ಶನ ಪಡೆದರು.
25 ಸಾವಿರ ಮಂದಿಗೆ ಅನ್ನಸಂತರ್ಪಣೆ
ಆಷಾಢಮಾಸದ ಪೂಜೆಗಾಗಿ ಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು, ಚಾಮುಂಡೇಶ್ವರಿ ಸೇವಾ ಸಮಿತಿ 25 ಸಾವಿರ ಮೈಸೂರು ಪಾಕ್ ತಯಾರು ಮಾಡಿಸಿತ್ತು. 40 ಬಾಣಸಿಗರು 500 ಕೆ.ಜಿ.ಕಡ್ಲೆ ಹಿಟ್ಟು, 500 ಕೆ.ಜಿ.ಸಕ್ಕರೆ, ನಂದಿನಿ ತುಪ್ಪ, ಎಣ್ಣೆ ಇನ್ನಿತರ ಸಾಮಗ್ರಿ ಬಳಸಿ ಮೈಸೂರು ಪಾಕ್ ತಯಾರಿಸಿದ್ದರು. ಬೆಳಗ್ಗೆ ಪೊಂಗಲ್, ಇಡ್ಲಿಘಿ, ಚಟ್ನಿ ನೀಡಲಾಗಿತ್ತು. ಮಧ್ಯಾಹ್ನ ಬಿಸಿ ಬೇಳೆ ಬಾತ್, ಅನ್ನ, ಸಾಂಬಾರ್, ಪಲ್ಯ, ಕೋಸಂಬರಿ, ಲಾಡು, ಮೈಸೂರು ಪಾಕ್ ನೀಡಲಾಗಿತ್ತು.












Click it and Unblock the Notifications