ದಸರಾ ಕಾರ್ ರೇಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ
ಮೈಸೂರು, ಸೆಪ್ಟೆಂಬರ್ 23 :ನಾಡಹಬ್ಬ ದಸರಾ ಮಹೋತ್ಸವದ ವೇಳೆ ಸಾಹಸ ಕ್ರೀಡೆಯನ್ನು ಉತ್ತೇಜಿಸಲು ಇದೇ ಮೊದಲ ಬಾರಿಗೆ 'ಮೈಸೂರು ದಸರಾ ಗ್ರಾವೆಲ್ ಫೆಸ್ಟ್' ಕಾರ್ ರೇಸ್ ಸಂಘಟಿಸುತ್ತಿದೆ.
ಆಟೋ ಕಾರ್ಸ್ ಆಟೋಮೊಟಿವ್ ಸ್ಪೋರ್ಟ್ಸ್ ಕ್ಲಬ್ ಆಫ್ ಮೈಸೂರು ಆಶ್ರಯದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ಅ.7 ಮತ್ತು 8ರಂದು ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಕಾರ್ ರೇಸ್ ನಡೆಸಲು ಸಿದ್ಧತೆ ನಡೆಯುತ್ತಿದೆ.
ಇದು ಸಾಂಸ್ಕೃತಿಕ ನಗರಿಯಲ್ಲಿ 2ನೇ ಬಾರಿ ನಡೆಯುತ್ತಿರುವ ದಕ್ಷಿಣ ಭಾರತ ಮಟ್ಟದ ಅತಿದೊಡ್ಡ ಕಾರ್ ರೇಸ್ ಆಗಿದೆ. ವೇಗದ ಚಾಲಕನಿಗೆ 2 ಲಕ್ಷ ರೂ. ಬಹುಮಾನ ನೀಡುತ್ತಿರುವುದು ಹೆಚ್ಚು ಮೊತ್ತದ ನಗದು ಬಹುಮಾನವಾಗಿದೆ. ಇದರ ಜೊತೆಗೆ ಇನ್ನು ಅನೇಕ ನಗದು ಬಹುಮಾನಗಳಿವೆ.

2.15 ಕಿ.ಮೀ. ಟ್ರ್ಯಾಕ್ ನಲ್ಲಿ ಸ್ಪರ್ಧಿಸಲು ದೇಶದ ಟಾಪ್ ಡ್ರೈವರ್ಸ್ ಸಹ ಆಗಮಿಸುತ್ತಿದ್ದಾರೆ. ವಿಶೇಷ ಮಹಿಳಾ ವಿಭಾಗ ಸೇರಿದಂತೆ 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.
ಕಳೆದ ವರ್ಷದ ಕಾರ್ ರೇಸ್ ಅನ್ನು 12 ಸಾವಿರ ಮಂದಿ ವೀಕ್ಷಣೆ ಮಾಡಿದ್ದರು. ಈ ವರ್ಷ 6 ಸಾವಿರ ಮಂದಿ ಕುಳಿತು ರೇಸ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಮೈಸೂರನ್ನು ಅಡ್ವೆಂಚರ್ ಹಬ್ ಮಾಡಲು ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ಅವರು ನಿರ್ಧರಿಸಿದ್ದಾರೆ.
ಇದಕ್ಕೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಜನಾರ್ಧನ್ ಅವರು ಕೈ ಜೋಡಿಸಿದ್ದಾರೆ. ಮೈಸೂರು ದಸರಾ ಗ್ರಾವೆಲ್ ಫೆಸ್ಟ್ ಗೆ ಜಿಲ್ಲಾಡಳಿತ ಮತ್ತು ಪ್ರವಾಸ್ಯೋದ್ಯಮ ಇಲಾಖೆ ಸಹಕಾರ ನೀಡಿದ್ದು, ರೇಸ್ ಅನ್ನು ಉತ್ತಮ ರೀತಿಯಲ್ಲಿ ಸಂಘಟಿಸಲಾಗುತ್ತಿದೆ.
ರೇಸ್ ನಲ್ಲಿ ಭಾಗವಹಿಸಲೆಂದೇ ಖ್ಯಾತ ನಟ ದರ್ಶನ್ ಅವರು 2 ಕಾರುಗಳನ್ನು ಖರೀದಿ ಮಾಡಿದ್ದು, ಈಗಾಗಲೇ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇವರೊಂದಿಗೆ ಅನೇಕ ಮಂದಿ ಸೆಲೆಬ್ರೆಟಿಗಳು ಬರುವ ನಿರೀಕ್ಷೆ ಇದೆ. ನಟಿ ನಿಧಿ ಸುಬ್ಬಯ್ಯ ಸಹ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications