ಯೋಜನೆಗೂ ಮುನ್ನವೇ ಟ್ರಿಣ್ ಟ್ರಿಣ್ ಸೈಕಲ್ ಕಳುವು
ಮೈಸೂರಿನ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ಮುಂಭಾಗ ಡಾಕಿಂಗ್ ಹಬ್ ನಲ್ಲಿ ನಿಲ್ಲಿಸಿದ್ದ ಟ್ರಿಣ್ ಟ್ರಿಣ್ ಯೋಜನೆಯ ಎರಡು ಸೈಕಲ್ಗಳನ್ನು ಕಳ್ಳರು ಅಪಹರಿಸಿದ್ದಾರೆ.
ಮೈಸೂರು, ಮಾರ್ಚ್ 18: ಟ್ರಿಣ್ ಟ್ರಿಣ್ ಯೋಜನೆ ಜಾರಿಯಾಗುವ ಮುನ್ನವೇ ಎರಡು ಸೈಕಲ್ಗಳನ್ನು ಕಳ್ಳರು ಕದ್ದೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ಮುಂಭಾಗ ಡಾಕಿಂಗ್ ಹಬ್ ನಲ್ಲಿ ನಿಲ್ಲಿಸಿದ್ದ ಎರಡು ಸೈಕಲ್ಗಳನ್ನು ಕಳ್ಳರು ಅಪಹರಿಸಿದ್ದಾರೆ. ಒಂದು ವಾರದ ಹಿಂದೆ ಎರಡು ಸೈಕಲ್ಗಳನ್ನು ನಿಲ್ಲಿಸಿ ಅವುಗಳಿಗೆ ಬೀಗ ಹಾಕಲಾಗಿತ್ತು.[ಮೈಸೂರಿನಲ್ಲಿ ಪ್ರವಾಸಿಗರಿಗೆ ಬಾಡಿಗೆ ಸೈಕಲ್, ಕೇಳಲಿದೆ ಟ್ರಿಣ್-ಟ್ರಿಣ್]

ಬುಧವಾರ ರಾತ್ರಿ ಯಾರೋ ಅಪರಿಚಿತ ವ್ಯಕ್ತಿಯೋರ್ವ ರಾತ್ರಿ 12 ಗಂಟೆ ವೇಳೆಯಲ್ಲಿ ಬಂದು ಬಲಪ್ರಯೋಗದಿಂದ ಸೈಕಲ್ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಸೈಕಲ್ ನಿರ್ವಹಣೆ ಮಾಡುತ್ತಿರುವ ಸಾಗರ್ ಎಂಬುವರು ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರು ನಗರದ ಹಲವೆಡೆ ಡಾಕಿಂಗ್ ಹಬ್ ನಿರ್ಮಿಸಲಾಗಿದ್ದು, ಇದಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಎಷ್ಟು ಸೈಕಲ್ ಗಳು ಕೈತಪ್ಪಿ ಹೋಗಲಿವೆಯೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ರಾಜ್ಯಸರ್ಕಾರ ಗ್ಲೋಬಲ್ ಎನ್ವಿರಾನ್ ಮೆಂಟ್ ಫೆಸಿಲಿಟಿ ಗ್ರ್ಯಾಂಟ್ ಹಾಗೂ ಮೈಸೂರು ನಗರಪಾಲಿಕೆ ಸಹಯೋಗದಲ್ಲಿ ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಶೇರಿಂಗ್ ಪರಿಸರ ಸ್ನೇಹಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತ್ತು. ಪ್ರವಾಸಿಗರಿಗೆ ಮತ್ತು ವಾಹನದ ಅಗತ್ಯ ಇರುವವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ರೂಪಿಸಿದ ಈ ಪರಿಸರ ಸ್ನೇಹಿ ಯೋಜನೆಗೆ ಆರಂಭದಲ್ಲೇ ವಿಘ್ನ ಬಂದಿರುವುದು ನಿಜಕ್ಕೂ ಶೋಚನೀಯ ಎನ್ನಿಸಿದೆ.












Click it and Unblock the Notifications