ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಹೆಗ್ಗಡಹಳ್ಳಿ ಜನತೆ
ಮೈಸೂರು, ಜನವರಿ 30 : ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಸಮೀಪ ಕಬಿನಿ ಉಪನಾಲೆಯ ನೀರಿನ ಪೈಪ್ ಬಳಿ ಅವಿತುಕೊಂಡಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಚಿರತೆ ಅವಿತು ಕೂತಿದ್ದ ವಿಷಯ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಮುಂದಾದರು. ಸೆರೆ ಹಿಡಿಯಲು ಉಪಾಯ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ತೂಬಿನ ಒಂದು ದ್ವಾರದ ಬಳಿ ಬೋನು ಇರಿಸಿ ಮತ್ತೊಂದು ಬದಿಯಿಂದ ಹೊಗೆ ಹಾಕಿದರು. ಇದರಿಂದ ವಿಚಲಿತವಾದ ಚಿರತೆ ಆಚೆ ಬರಲು ಪ್ರಯತ್ನಪಟ್ಟು ಬೋನಿಗೆ ಬಿದ್ದು ಸೆರೆಯಾಯಿತು.[ನಂಜನಗೂಡು: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ]

ಕಳೆದ ಒಂದು ತಿಂಗಳಿನಿಂದ ಉಪಟಳ ನೀಡುತ್ತಾ ಬಂದಿದ್ದ ಚಿರತೆ, ಜಾನುವಾರುಗಳ ಮೇಲೆ ದಾಳಿ ಮಾಡಿ ಭಯ ಹುಟ್ಟಿಸಿತ್ತು. ಇದಲ್ಲದೆ ಗ್ರಾಮದಲ್ಲಿ ಅಡ್ಡಾಡುತ್ತಿದ್ದ ಹಲವಾರು ನಾಯಿಗಳನ್ನು ಹೊತ್ತೊಯ್ದಿತ್ತು. ಆಹಾರ ಅಗತ್ಯವಿದ್ದಾಗ ಓಂಕಾರ ಅರಣ್ಯ ವಲಯದಿಂದ ಆಚೆ ಬರುತ್ತಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತ್ತು. ಚಿರತೆ ಸೆರೆಯಾಗುತ್ತಿದ್ದಂತೆ ಹೆಗ್ಗಡಹಳ್ಳಿಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ.[ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿದ ಪದೂರು ಗ್ರಾಮದ ಯುವಕರು]
ಹೆಣ್ಣು ಜಿಂಕೆ ಮೇಲೆ ನಾಯಿ ದಾಳಿ: ಚಿಕಿತ್ಸೆ
ಮೈಸೂರು: ಆಹಾರ ಅರಸಿ ಬಂದ ಜಿಂಕೆ ಮೇಲೆ ನಾಯಿ ದಾಳಿ ಮಾಡಿದ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಬಳಿ ಜರುಗಿದೆ.

ಕಾಡಿನಿಂದ ನಾಡಿಗೆ ಬಂದಿದ್ದ ಎರಡು ವರ್ಷದ ಹೆಣ್ಣು ಜಿಂಕೆಯ ಮೇಲೆ ದಾಳಿ ಮಾಡಿದ ನಾಯಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆ ನಾಲೆಗೆ ಬಿದ್ದು ಗಾಯಗೊಂಡಿದೆ. ಎಚ್.ಡಿ.ಕೋಟೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಜಿಂಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅರಣ್ಯ ಇಲಾಖೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಚೇತರಿಕೆ ಬಳಿಕ ಜಿಂಕೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.












Click it and Unblock the Notifications