ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ, ಬಿಜೆಪಿಯೇ ಮತ್ತೆ ಅಧಿಕಾರಕ್ಕೆ; ಅಶ್ವತ್ಥನಾರಾಯಣ
ಮೈಸೂರು, ಅಕ್ಟೋಬರ್ 4: "ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಇನ್ನೇನಿದ್ದರೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ," ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಮೈಸೂರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, "ರಾಜ್ಯದಲ್ಲಿ ಮುಂದೆ ಎಂದಿಗೂ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ ಎಂಬ ನಡುಕ ಹುಟ್ಟಿದೆ. ಅದಕ್ಕೆ ಇಲ್ಲದ ಕಥೆ ಕಟ್ಟಿ ಮಾತನಾಡುತ್ತಿದ್ದಾರೆ," ಎಂದು ಟೀಕಿಸಿದರು.
"ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಡೆದು ಚೂರಾಗುತ್ತಿದೆ. ಯಾರು ನಾಯಕರಾಗುತ್ತಾರೆ ಎಂಬ ಹುಡುಕಾಟ ನಡೆಯುತ್ತಿದೆ. ಈ ನಡುವೆ ರಾಜ್ಯದಲ್ಲಿ ಕೆಲವರು ನಾನು ಸಿಎಂ ಆಗುತ್ತೇನೆ, ತಾನು ಸಿಎಂ ಆಗುತ್ತೇನೆ ಅಂತ ಕೆಲವರು ಹಗಲು ಗನಸು ಕಾಣುತ್ತಿದ್ದಾರೆ," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಬಗ್ಗೆ ಬಿ.ಎಸ್. ಯಡಿಯೂರಪ್ಪ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, "ಹಾಸನಕ್ಕೆ ಹೋಗಿ ಕೇಳಿದರೂ, ಶೇ.65ರಷ್ಟು ಜನ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಕನಕಪುರಕ್ಕೂ ಹೋಗಿ ಕೇಳಿದರೂ ಮೋದಿ ಹೆಸರು ಹೇಳುತ್ತಾರೆ. ಅಲ್ಲೆಲ್ಲೂ ಸ್ಥಳೀಯ ನಾಯಕರ ಹೆಸರೇಳಲ್ಲ. ನರೇಂದ್ರ ಮೋದಿ ಅಲೆ ಸದಾ ಇದ್ದೆ ಇರುತ್ತದೆ," ಎಂದು ಹೇಳುವ ಮೂಲಕ ಸಚಿವ ಅಶ್ವತ್ಥನಾರಾಯಣ ದಳಪತಿಗಳು, ಕೆಪಿಸಿಸಿ ಅಧ್ಯಕ್ಯ ಡಿ.ಕೆ. ಶಿವಕುಮಾರ್ಗೆ ಟಾಂಗ್ ಕೊಟ್ಟರು.
ಎರಡು ಕ್ಷೇತ್ರಗಳ ಉಪ ಚುನಾವಣೆ ಬಿಜೆಪಿ ಉಸ್ತುವಾರಿಗಳ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರಗೆ ಕೋಕ್ ನೀಡಿದ್ದ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಸಚಿವಅಶ್ವತ್ಥನಾರಾಯಣ, "ಯಾರನ್ನು ಕೈ ಬಿಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ಬಿಜೆಪಿಯಲ್ಲಿ ಎಲ್ಲರೂ ಪ್ರಚಾರದಲ್ಲಿ ಭಾಗವಹಿಸಬಹುದು. ವಿಜಯೇಂದ್ರರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ," ಎಂದರು.
"ಬಿಜೆಪಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ರೈತರ ಪರವಾಗಿ ಬಿಜೆಪಿ ಕೆಲಸ ನಿರ್ವಹಿಸುತ್ತದೆ. ರಾಜ್ಯ ಹಾಗೂ ದೇಶದಲ್ಲಿ ಸುಭದ್ರ ಆಡಳಿತ ನೀಡುವುದೇ ಗುರಿ," ಎಂದು ತಿಳಿಸಿದರು.

"ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ನಡುಕ ಶುರುವಾಗಿದೆ. ಯಾರೊಬ್ಬರೂ ಬಿಜೆಪಿ ಬಿಡಲ್ಲ, ಕಾಂಗ್ರೆಸ್ ನಾಯಕರು ಮತ್ತೊಮ್ಮೆ ನಾವೆಲ್ಲರೂ ಅಧಿಕಾರಕ್ಕೆ ಬರುವುದಿಲ್ಲ ಅನ್ನೋದನ್ನು ಅರಿತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದೆ ಅಂತ ಹೇಳಿದರು. ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಮತ್ತೆ ಬರುತ್ತೇವೆ," ಎಂದು ಸಚಿವ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ಗೆ ಸಚಿವ ಸ್ಥಾನದ ಕುರಿತು ಮಾತನಾಡಿ, "ಶಾಸಕ ರಾಮದಾಸ್ ಎಂದಿಗೂ ಬಿಜೆಪಿ ಪಕ್ಷದ ನಾಯಕರಾಗಿ ಇದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಸ್ಥಾನಮಾನಗಳು ಸಿಗಲಿವೆ," ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
"ಪ್ರಾಥಮಿಕ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು. ಶಿಕ್ಷಣ ಕ್ಷೇತ್ರ ವಿಕಾಸ ಆಗಬೇಕು ಅಂದರೆ ಎನ್ಇಪಿ ಜಾರಿ ಅತ್ಯವಶ್ಯಕ. ಈ ಬಗ್ಗೆ ಅಪಪ್ರಚಾರ ಬೇಡ. ಜನರು ಇದರ ಮಹತ್ವ ಅರಿಯಬೇಕು," ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದರು.












Click it and Unblock the Notifications