ಮೈಸೂರಿನ 93 ದೇವಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್
ಮೈಸೂರು, ಸೆಪ್ಟೆಂಬರ್ 14: ಮೈಸೂರಿನ ದೇವಾಲಯಗಳ ತೆರವು ಕಾರ್ಯಚರಣೆ ಸ್ಥಗಿತಗೊಳಿಸಬೇಕೆಂಬ ಹಿಂದೂ ಪರ ಸಂಘಟನೆಗಳ ಒತ್ತಾಯಕ್ಕೆ ಕಡೆಗೂ ಸರ್ಕಾರ ಮಣಿದಿದೆ. ಈ ಮೂಲಕ ಮೈಸೂರಿನ 93 ದೇವಾಲಯಗಳನ್ನು ತೆರವು ಮಾಡಬೇಕೆಂಬ ಜಿಲ್ಲಾಡಳಿತದ ಕ್ರಮಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ, "ಈಗಾಗಲೇ ದೇವಾಲಯ ನೆಲಸಮಗೊಳಿಸಿದ ಜಿಲ್ಲಾಡಳಿತದ ಕ್ರಮದ ಬಗ್ಗೆ ವಿವರಣೆ ಕೇಳಿ ಸರ್ಕಾರ ನೋಟಿಸ್ ಜಾರಿ ಮಾಡಿದೆ. ನನಗೆ ಮತ್ತು ತಹಶೀಲ್ದಾರರಿಗೆ ಈ ನೋಟಿಸ್ ಜಾರಿ ಮಾಡಿದ್ದು, ನಾವು ಉತ್ತರ ಕೊಡುತ್ತೇವೆ," ಎಂದು ಗೌತಮ್ ಬಗಾದಿ ಸ್ಪಷ್ಟಪಡಿಸಿದರು.
"ನಮಗೆ ನೀಡಿರುವ ನೋಟಿಸ್ನಲ್ಲಿ ಏನಿದೆ ಅಂತ ಬಹಿರಂಗ ಮಾಡಲು ಸಾಧ್ಯವಿಲ್ಲ. ಕಾರ್ಯಚರಣೆ ನಿಲ್ಲಿಸುವ ಬಗ್ಗೆ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದು, ಉತ್ತರ ಬರುವ ತನಕ ಸದ್ಯಕ್ಕೆ ಕಾರ್ಯಚರಣೆ ನಡೆಸುವುದಿಲ್ಲ. ಈ ಸಂಬಂಧ ಎಲ್ಲವೂ ಯಥಾಸ್ಥಿತಿಯಲ್ಲಿ ಇರುತ್ತದೆ," ಎಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ಹೇಳಿದರು.

"ಅಲ್ಲದೇ, ದೇವಸ್ಥಾನ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್ ಬಂದಿದೆ. ಅದಕ್ಕೆ ಉತ್ತರವನ್ನು ಕೊಡುತ್ತೇವೆ. ಸರ್ಕಾರದ ಅಧಿಕೃತ ನೋಟಿಸ್ ಆಗಿದೆ. ನೋಟಿಸ್ನಲ್ಲಿ ಏನಿದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಆದರೆ ಸರ್ಕಾರಕ್ಕೆ ಸಂಪೂರ್ಣ ವಿವರ ನೀಡುತ್ತೇವೆ," ಎಂದರು.
ಇನ್ನು ಕಾರ್ಯಚರಣೆ ನಿಲ್ಲಿಸುವ ಸಂಬಂಧದ ಪ್ರಶ್ನೆಗೆ ಉತ್ತರಿಸಿದ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, "ಸರ್ಕಾರದ ನಿರ್ದೇಶನಕ್ಕಾಗಿ ನಾವು ಕಾಯುತ್ತಿದ್ದೇವೆ. ಸರ್ಕಾರದ ಉತ್ತರ ಬರುವವರೆಗೂ ಸದ್ಯಕ್ಕೆ ಕಾರ್ಯಚರಣೆ ಇರುವುದಿಲ್ಲ. ಸರ್ಕಾರದ ಮುಂದಿನ ನಿರ್ದೇಶನದವರೆಗೂ ಎಲ್ಲವೂ ಯಥಾಸ್ಥಿತಿಯಲ್ಲಿ ಇರುತ್ತದೆ," ಎಂದು ತಿಳಿಸಿದರು.

ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಿಯೋಗ ದೂರು
ಮೈಸೂರಿನಲ್ಲಿ ಹಿಂದೂ ದೇವಸ್ಥಾನಗಳನ್ನು ತೆರವು ಮಾಡುತ್ತಿರುವ ಜಿಲ್ಲಾಡಳಿತದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಮುಸ್ಲಿಂರ ದರ್ಗಾ ಒಡೆಯಲು ನಿಮಗೆ ತೊಡೆ ನಡಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಕಾಂಗ್ರೆಸ್ ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ.
ಮೈಸೂರು ಸಂಸದರ ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕರು, ಇಂತಹ ಹೇಳಿಕೆ ನೀಡುವ ಮೂಲಕ ಸಂಸದ ಪ್ರತಾಪ್ ಸಿಂಹ, ಕೋಮುಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನಿಯೋಗ ಡಿಸಿ ಗೌತಮ್ ಬಗಾದಿಗೆ ದೂರು ನೀಡಿತು.
ಕೆಡಿಪಿ ಸಭೆಯಲ್ಲೇ ಸಂಸದರು ಜಿಲ್ಲಾಧಿಕಾರಿಗೆ ಈ ರೀತಿಯಾಗಿ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ. ಕೋಮುಗಲಭೆ ಸೃಷ್ಟಿಸಲು ರಾತ್ರೋರಾತ್ರಿ ಹಿಂದೂ ದೇವಾಲಯ ಹೊಡೆದು ಹಾಕಿ ರಾಜಕೀಯ ಲಾಭ ಹುನ್ನಾರ ಪ್ರತಾಪ್ ಸಿಂಹ ಅವರದ್ದಾಗಿದೆ. ಮೈಸೂರಿನ ಡಿ. ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ, ಇರ್ವೀನ್ ರಸ್ತೆಯಲ್ಲಿರುವ ಮಸೀದಿ ಎರಡೂ ವಿಚಾರ ಕೋರ್ಟ್ನಲ್ಲಿದೆ. ಹೀಗಿರುವಾಗ ಇದನ್ನು ಕೆಡವಿ ಎಂದು ಕೆಡಿಪಿ ಸಭೆಯಲ್ಲಿ ಸಂಸದರು ಆಗ್ರಹಿಸಿರುವುದು ತಪ್ಪು ಎಂದು ಆರೋಪಿಸಿ ಡಿಸಿಗೆ ಸ್ವವಿವರವಾಗಿ ಕಾಂಗ್ರೆಸ್ ನಿಯೋಗ ದೂರು ನೀಡಿದೆ.

ಒಟ್ಟಾರೆ ಮೈಸೂರಿನಲ್ಲಿ ನಡೆಯುತ್ತಿದ್ದ ಹಿಂದೂ ದೇವಾಲಯಗಳ ನೆಲಸಮ ಕಾರ್ಯಚರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಇದು ಮತ್ತೆ ಮರು ಜೀವ ಪಡೆಯುತ್ತಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ ಕಾದು ನೋಡಬೇಕಿದೆ.
ಜಿಲ್ಲಾಡಳಿತದ ವಿರುದ್ಧ ಏಕಾಂಗಿ ಪ್ರತಿಭಟನೆ
ಮೈಸೂರು ಜಿಲ್ಲೆಯಲ್ಲಿ ನಡೆಸಲಾದ ಹಿಂದೂ ದೇವಸ್ಥಾನಗಳ ನೆಲಸಮ ವಿಚಾರವನ್ನು ಖಂಡಿಸಿ ಜಾಗೋ ಮೈಸೂರು ಅಧ್ಯಕ್ಷ ಚೇತನ್ ಗೌಡರಿಂದ ಏಕಾಂಗಿ ಪ್ರತಿಭಟನೆ ನಡೆಸಿದರು.
ಮೈಸೂರಿನ ನ್ಯಾಯಾಲಯದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಚೇತನ್, ದೇವಾಲಯಗಳನ್ನು ತೆರವು ಮಾಡುವ ಮೂಲಕ ಜಿಲ್ಲಾಡಳಿತದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಏಕಾಏಕಿ ದೇವಾಲಯ ಕೆಡವಿರುವುದು ಖಂಡನೀಯ ಕ್ರಮವಾಗಿದ್ದು, ದೇವಾಲಯ ಕೆಡವಿದ ಅಧಿಕಾರಿಗಳ ವಜಾ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಚೇತನ್ ತಿಳಿಸಿದರು.












Click it and Unblock the Notifications