ಕಂಬಳ ಪರವಾಗಿ ಕಾನೂನು ಜಾರಿ: ಸುತ್ತೂರು ಜಾತ್ರೆಯಲ್ಲಿ ಸಿಎಂ ಘೋಷಣೆ
ಕಂಬಳ ಪರವಾಗಿ ಸುತ್ತೂರು ಜಾತ್ರೆಯಲ್ಲಿ ಮಾತನಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಅಗತ್ಯ ಕಂಡುಬಂದರೆ ಕಂಬಳ ಪರವಾಗಿ ಕಾನೂನು ಜಾರಿ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ. ಜಲ್ಲಿಕಟ್ಟು ಪರವಾದ ತಮಿಳರ ಹೋರಾಟ, ಪಟ್ಟು ಪಾಠ ಕಲಿಸಿದಂತೆ ಕಾಣುತ್ತಿದೆ.
ಮೈಸೂರು, ಜನವರಿ 25: ಸುತ್ತೂರಿನಲ್ಲಿ ಆರು ದಿನ ನಡೆಯುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಂಜೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಮಾಜದಲ್ಲಿರುವ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವಾರು ಸಮಾಜ ಸುಧಾರಕರು ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಮೂಢನಂಬಿಕೆ, ಕಂದಾಚಾರ ಹೋಗಬೇಕು. ಮೌಢ್ಯದಿಂದಾಗಿ ಸಮಾಜ ಜಡ್ಡುಗಟ್ಟಿದೆ. ಇದನ್ನು ಶಿಕ್ಷಣದಿಂದ ಮಾತ್ರ ಇವನ್ನು ಹೋಗಲಾಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸುತ್ತೂರು ಶ್ರೀಕ್ಷೇತ್ರ ಮಠವು ಧಾರ್ಮಿಕ, ಶಿಕ್ಷಣ, ಆರೋಗ್ಯ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಕೆಲಸ ಮಾಡಿದೆ. ಪೂರ್ವ ಪ್ರಾಥಮಿಕ ಶಾಲೆಗೆ ಸೇರಿದ ಮಗು ಈ ಶಿಕ್ಷಣ ಸಂಸ್ಥೆಗಳಲ್ಲೇ ಸ್ನಾತಕೋತ್ತರ ಪದವಿ ಮುಗಿಸಬಹುದಾದ ಅವಕಾಶವನ್ನು ಮಠ ಒದಗಿಸಿದೆ ಎಂದು ಶ್ಲಾಘಿಸಿದರು.[ಮೈಸೂರು: ಸರಕಾರದ ಸುರ್ಪದಿಗೆ ಸುತ್ತೂರು ಮಠದ ಆನೆಗಳು]
23ನೇ ಪೀಠಾಧ್ಯಕ್ಷರಾದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಶಿಕ್ಷಣ ಹಾಗೂ ಸಮಾಜ ಸುಧಾರಣೆಗೆ ಉತ್ತಮ ಅಡಿಪಾಯ ಹಾಕಿದ್ದಾರೆ. 24ನೇ ಪೀಠಾಧ್ಯಕ್ಷರಾದ ಈಗಿನ ದೇಶಿಕೇಂದ್ರ ಸ್ವಾಮೀಜಿ ಈ ಅಡಿಪಾಯದ ಮೇಲೆ ಭವ್ಯ ಸೌಧ ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.

ಜ್ಞಾನ ಪ್ರಸಾರ ಜಾತ್ರೆ
ಸುತ್ತೂರು ಜಾತ್ರೆ ಕೇವಲ ಜಾತ್ರೆಯಲ್ಲ. ಬದುಕಿಗೆ ಬೇಕಾದ ಜ್ಞಾನವನ್ನು ಬಿತ್ತುವ ಕಾರ್ಯಗಳನ್ನು ಈ ಜಾತ್ರೆಯ ಮೂಲಕ ಮಠ ಮಾಡುತ್ತಿದೆ. ಜಾತ್ರೆಯಲ್ಲಿ ವಸ್ತು ಪ್ರದರ್ಶನ, ಕೃಷಿ ಮೇಳವನ್ನು ಉದ್ಘಾಟನೆ ಮಾಡಿದ್ದೇನೆ. ಕೃಷಿಯಲ್ಲಿ ವೈಜ್ಞಾನಿಕ ಬೆಳೆ ಪದ್ಧತಿಯನ್ನು ರೈತರಿಗೆ ತಿಳಿಸಲಾಗುತ್ತಿದೆ. ಕೃಷಿಯಲ್ಲಿ ಹೊಸ ಬೆಳೆ, ಹೊಸ ತಳಿಗಳು, ತಂತ್ರಜ್ಞಾನದ ಬೆಳವಣಿಗೆ, ಮಾರುಕಟ್ಟೆ ಬೆಳವಣಿಗೆ ರೈತರಿಗೆ ತಿಳಿಯಬೇಕಾಗಿದೆ ಎಂದು ಹೇಳಿದರು.

ಕಂಬಳ ಪರವಾಗಿ ಕಾನೂನು ಜಾರಿ
ಜಲ್ಲಿಕಟ್ಟು ಅಪಾಯಕರ ಆಟ. ಆದರೆ ಕಂಬಳ ಅಪ್ಪಟ ಗ್ರಾಮೀಣ ಕ್ರೀಡೆ. ಇದರಲ್ಲಿ ಪ್ರಾಣಿ ಹಿಂಸೆಯಾಗಲಿ, ಮಾನವ ಜೀವಕ್ಕೆ ಹಾನಿಯಾಗಲಿ ಇಲ್ಲ. ನಾವು ಕಂಬಳ ಪರವಾಗಿದ್ದೇವೆ. ಅಗತ್ಯ ಬಿದ್ದರೆ ಈ ಗ್ರಾಮೀಣ ಕ್ರೀಡೆಯ ಪರವಾಗಿ ಕಾನೂನು ಕೂಡ ತರಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಗಣ್ಯರ ಉಪಸ್ಥಿತಿ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಸಚಿವರಾದ ಎಚ್.ಕೆ. ಪಾಟೀಲ್, ಸಂಸದ ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸ್ವಾಮೀಜಿಗಳ ಸಾನ್ನಿಧ್ಯ
ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಗೋವಾದ ತಪೋಭೂಮಿ ಗುರುಪೀಠದ ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.












Click it and Unblock the Notifications