Textbook: ಶಾಲೆಗಳಿಗೆ ಶೇ.95ರಷ್ಟು ಪಠ್ಯಪುಸ್ತಕ ವಿತರಣೆ: ಪರಿಷ್ಕರಣೆ ಬಗ್ಗೆ ಮಧು ಬಂಗಾರಪ್ಪ ಹೇಳಿದ್ದೇನು?
ಮೈಸೂರು, ಮೇ 29: ಪ್ರಸಕ್ತ ಶೈಕ್ಷಣಿಕ ಸಾಲಿನ ಕಾರ್ಯಚಟುವಟಿಕೆಗಳು ಪುನಾರಂಭಗೊಳ್ಳುತ್ತಿವೆ. ಎರಡು ತಿಂಗಳ ಬೇಸಿಗೆ ರಜೆ ಪೂರ್ಣಗೊಂಡಿದ್ದು, ಮುಂದಿನ ಬುಧವಾರದಿಂದ (ಜೂನ್ 01) ಶಾಲೆಗಳು ಮತ್ತೆ ಪುನಾರಂಭಗೊಳ್ಳಲಿವೆ. ಬಾಕಿ ಇರುವ ಪಠ್ಯ ಪುಸ್ತಕಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯದ ಶಾಲೆಗಳಿಗೆ ಈಗಾಗಲೇ ಶೇಕಡಾ 95ರಷ್ಟು ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಿದ್ದೇವೆ. ಬಾಕಿ ಉಳಿದ ಪಠ್ಯಪುಸ್ತಕಗಳ ವಿತರಣೆಯನ್ನು ಇದೇ ತಿಂಗಳೊಳಗೆ ಸರಬರಾಜು ಮಾಡಲಾಗುವುದು. ಬೇಸಿಗೆ ರಜೆ ಮುಗಿದಿದ್ದು ಮಕ್ಕಳು ಬುಧವಾರ ಶಾಲೆಗಳತ್ತ ಮುಖ ಮಾಡಲಿದ್ದಾರೆ ಎಂದರು.

ಪರಿಷ್ಕೃತ ಪಠ್ಯಪುಸ್ತಕ ವೆಬ್ಸೈಟ್ನಲ್ಲಿ ಲಭ್ಯ
ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ರಾಜ್ಯದಲ್ಲಿ ಹಿಂದಿನ ವರ್ಷವೇ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆ. ಈ ಬಾರಿ ಒಂದು ಪದ ಅಥವಾ ಸಾಲನ್ನು ಹೊರತುಪಡಿಸಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ. ಸರ್ಕಾರ ಪರಿಷ್ಕೃರಿಸಿ ಶಾಲಾ ಪಠ್ಯಪುಸ್ತಕಗಳು ಶಿಕ್ಷಣ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ಸಾಂಕ್ರಾಮಿಕದ ಆಗಮನ ಬಳಿಕ ಸಾಕಷ್ಟು ಬದಲಾವಣೆಗಳು ಆದವು. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕೋವಿಡ್ ಲಾಕ್ಡೌನ್ ಬಳಿಕ ಸರ್ಕಾರ ಸೈಕಲ್ ವಿತರಣೆಯನ್ನು ನಿಲ್ಲಿಸಿದೆ. ಪುನಃ ಸೈಕಲ್ ವಿತರಣೆ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವೇ ಈ ಬಗ್ಗೆ ಸೂಕ್ತ ನಿರ್ಧಾರ ತಿಳಿಸಲಾಗುವುದು ಎಂದು ವಿವರಿಸಿದರು.

3,000 ಶಾಲೆ ಸ್ಥಾಪನೆ, 600 ಶಾಲೆ ಮೇಲ್ದರ್ಜೆಗೆ
ಸದ್ಯ 6,000 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎರಡು ಗ್ರಾಮ ಪಂಚಾಯಿತಿಗಳಿಗೆ ತಲಾ ಒಂದು ಶಾಲೆ ಎಂಬಂತೆ ಒಟ್ಟು 3,000 ಕರ್ನಾಟಕ ಸಾರ್ವಜನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು. ರಾಜ್ಯ ಸರ್ಕಾರ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಸುಧಾರಣೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಕರ್ನಾಟಕದಲ್ಲಿ ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿಗಳಿಗೆ (ಎಸ್ಡಿಎಂಸಿ) ಈಗಾಗಲೇ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು ಹಣ ಬಿಡುಗಡೆ ಮಾಡಲಾಗಿದೆ. ಜೂನ್ ನಿಂದ ಶಾಲೆ ಆರಂಭವಾಗಿ ಮಕ್ಕಳು ಬರುತ್ತಿದ್ದಂತೆ ಅವುಗಳನ್ನು ಖರೀದಿಸಿ ಹಂತ ಹಂತವಾಗಿ ವಿತರಣೆ, ಎಲ್ಲ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಆರಂಭವಾಗಲಿವೆ ಎಂದು ಹೇಳಿದರು.












Click it and Unblock the Notifications