ಸುತ್ತೂರಿನಲ್ಲಿ ಸುಮಲತಾ ಅಂಬರೀಶ್; ಇದೇನು ರಾಜಕೀಯ ಟ್ರೇಲರೋ ಅಥವಾ ಪಿಕ್ಚರೋ?

ಮೈಸೂರು, ಮಾರ್ಚ್ 2: ಈ ಸಲ ಮಂಡ್ಯ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳು ಭಾರೀ ಬೆಳವಣಿಗೆಗಳನ್ನು ಕಾಣಲಿವೆ. ಶನಿವಾರಂದು ಸುಮಲತಾ ಅಂಬರೀಶ್ ಅವರು ತಮ್ಮ ಮಗನ ಮೊದಲ ಸಿನಿಮಾದ ಟ್ರೇಲರ್ ತೋರಿಸುವ ಸಲುವಾಗಿ ಹಾಗೂ ಆಶೀರ್ವಾದ ಪಡೆಯಲು ಸುತ್ತೂರು ಮಠಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಸುಮಲತಾ ಅವರ ಜತೆಗೆ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಟ ದೊಡ್ಡಣ್ಣ ಸಹ ಇದ್ದರು. ಮೊದಲು ಸುತ್ತೂರು ಮಠಕ್ಕೆ ಅಲ್ಲಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮೈಸೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಎಷ್ಟು ಪ್ರಭಾವಿಗಳು ಹಾಗೂ ಅವರ ಮಾತಿನ ತೂಕ ಎಂಥದ್ದು ಎಂಬುದನ್ನು ಹೊಸದಾಗಿ ಹೇಳುವ ಅಗತ್ಯವಿಲ್ಲ.

ಸುಮಲತಾ ಅವರು ಮಾಧ್ಯಮಗಳ ಜತೆ ಮಾತನಾಡಿ, ನಮ್ಮ ಕುಟುಂಬಕ್ಕೆ ಸುತ್ತೂರು ಸ್ವಾಮೀಜಿ ಮೊದಲಿಂದಲೂ ಪರಿಚಿತರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ, ಅವರ ಆಶೀರ್ವಾದ ಪಡೆದಿದ್ದೇನೆ. ಅಭಿ ಸಿನಿಮಾದ ಬಗ್ಗೆ ಹೇಳಬೇಕಿತ್ತು. ಜತೆಗೆ ಈಗಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಆ ನಂತರ ಬಂದಿದ್ದೇ ನಿಜವಾದ ಚರ್ಚೆಯ ವಿಷಯ. ಮಂಡ್ಯ ಜಿಲ್ಲೆಯ ಪ್ರವಾಸ ಮಾಡುತ್ತಿದ್ದೇನೆ. ಇಂದು ಕೂಡ ಕೆ.ಆರ್.ನಗರಕ್ಕೆ ಭೇಟಿ ನೀಡಲಿದ್ದೇನೆ. ರಾಜಕೀಯ ಬೆಳವಣಿಗೆ ಬಗ್ಗೆ ಹೊಸದಾಗಿ ಏನೂ ಹೇಳುವ ಅಗತ್ಯವಿಲ್ಲ. ಆದರೆ ಈ ತನಕ ಜೆಡಿಎಸ್ ಪಕ್ಷದಿಂದ ನನ್ನ ಜತೆಗೆ ಯಾರೂ ಚರ್ಚೆ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.

ತಯಾರಿ ಆರಂಭಿಸಿದ್ದಾರೆ ಸುಮಲತಾ

ತಯಾರಿ ಆರಂಭಿಸಿದ್ದಾರೆ ಸುಮಲತಾ

ಲೋಕಸಭೆ ಚುನಾವಣೆಗೆ ಇನ್ನೇನು ಇದೇ ತಿಂಗಳು ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂದಿರುವ ಜೆಡಿಎಸ್-ಕಾಂಗ್ರೆಸ್ ಮಧ್ಯ ಸೀಟು ಹಂಚಿಕೆ ವಿಚಾರದಲ್ಲಿ ಕೆಲವೆಡೆ ಫೈಟು ಬಂದು ನಿಂತಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮಂಡ್ಯ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳು ಕಗ್ಗಂಟಾಗಿವೆ. ಇದರ ಜತೆಗೆ ಹಾಸನದಿಂದಲೂ ಅಪಸ್ವರ ಕೇಳಿಬರುತ್ತಿದೆ. ಈ ಮಧ್ಯೆ ನಟಿ ಸುಮಲತಾ ಅವರು ಯಾರು ಒಪ್ಪಲಿ- ಬಿಡಲಿ ತಮ್ಮ ಪತಿ ಅಂಬರೀಶ್ ರ ತವರು ನೆಲ ಮಂಡ್ಯ ಜಿಲ್ಲೆಯಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವುದು ಹೊಸ ಸವಾಲಾಗಿ ಪರಿಣಮಿಸಿದೆ. ಬರೀ ಘೋಷಣೆ ಅಲ್ಲ, ಅದಾಗಲೇ ಸುಮಲತಾ ಅವರು ಅದಕ್ಕೆ ಬೇಕಾದ ತಯಾರಿಯನ್ನೂ ಆರಂಭಿಸಿದ್ದಾರೆ. ಹಾಗೊಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನೀಡಬೇಕಾಗುತ್ತದೆ.

ಜೆಡಿಎಸ್ ಅಭ್ಯರ್ಥಿ ಇಳಿಸದಿರುವುದು ಸಾಧ್ಯವಿಲ್ಲ

ಜೆಡಿಎಸ್ ಅಭ್ಯರ್ಥಿ ಇಳಿಸದಿರುವುದು ಸಾಧ್ಯವಿಲ್ಲ

ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ಕಾರಣಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದು ಕೂಡ ಸಾಧ್ಯವಿಲ್ಲ. ಏಕೆಂದರೆ, ಮಂಡ್ಯ ಜಿಲ್ಲೆಯಲ್ಲಿ ಅಷ್ಟೂ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿ ಕಳುಹಿಸಲಾಗಿದೆ. ಹಾಗಂತ ಸುಮಲತಾರನ್ನು ಮನವೊಲಿಸಿ, ಬೇರೆ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವಂತೆ ಮಾಡುವುದೋ ಅಥವಾ ಸುಮ್ಮನಾಗಿಸುವುದೋ ಕಾಂಗ್ರೆಸ್ ನಲ್ಲಿರುವ ಕೆಲವರಿಗೆ ಬೇಡ. ಏಕೆಂದರೆ, ಮಂಡ್ಯದಲ್ಲಿ ಕಾಂಗ್ರೆಸ್ ಕಣಕ್ಕೆ ಇಳಿಯದಿದ್ದರೆ ಜೆಡಿಎಸ್ ಭಾರೀ ಬಲವಾಗಿ, ಮುಂದೆ ತಲೆ ಎತ್ತಲು ಸಾಧ್ಯವೇ ಇಲ್ಲದಂಥ ಹೊಡೆತ ಬಿದ್ದಂತಾಗುತ್ತದೆ. ಕಾರ್ಯಕರ್ತರು ಅಸಮಾಧಾನಗೊಳ್ಳುತ್ತಾರೆ. ಹೊರಗಿಂದಾದರೂ ಸುಮಲತಾರನ್ನು ಬೆಂಬಲಿಸಿ, ಅಂಬರೀಶ್ ರ ಜನಪ್ರಿಯತೆ ಲಾಭ ಪಡೆದುಕೊಳ್ಳಬೇಕು ಹಾಗೂ ಕಾಂಗ್ರೆಸ್ ಅಸ್ತಿತ್ವಕ್ಕೆ ಕುತ್ತು ಬಾರದಂತೆ ನೋಡಿಕೊಳ್ಳಬೇಕು ಎಂಬುದು ಈಗಿನ ಲೆಕ್ಕಾಚಾರವಾಗಿದೆ. ಆದರೆ ಅದು ಅಷ್ಟು ಸಲೀಸಲ್ಲ್.

ಪ್ರಜ್ವಲ್, ನಿಖಿಲ್ ಆರಾಮಾಗಿ ಗೆಲ್ಲಬಹುದಾದ ಕ್ಷೇತ್ರಗಳು

ಪ್ರಜ್ವಲ್, ನಿಖಿಲ್ ಆರಾಮಾಗಿ ಗೆಲ್ಲಬಹುದಾದ ಕ್ಷೇತ್ರಗಳು

ಈ ಹಂತದಲ್ಲಿ ನಿಜವಾದ ಸಮಸ್ಯೆಗೆ ಸಿಲುಕಿಕೊಂಡಿರುವುದೇ ಜೆಡಿಎಸ್. ಏಕೆಂದರೆ, ಈಗಾಗಲೇ ಇರುವ ನಿರೀಕ್ಷೆಯಂತೆ ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದು. ಆ ಕ್ಷೇತ್ರವನ್ನೂ ಬಿಟ್ಟುಕೊಟ್ಟರೆ ಅದಕ್ಕಿಂತ ಮೂರ್ಖತನ ಮತ್ತೊಂದು ಇರಲಾರದು. ಹಳೇ ಮೈಸೂರು ಭಾಗದಲ್ಲಿ ಇರುವ ಅಸ್ತಿತ್ವವನ್ನೇ ಆಧಾರವಾಗಿಟ್ಟುಕೊಂಡು, ಹಾಸನ, ಮಂಡ್ಯ, ಮೈಸೂರು-ಕೊಡಗು, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ... ಹೀಗೆ ಜೆಡಿಎಸ್ ಬಲವಾಗಿರುವ ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕು ಸ್ಥಾನಗಳನ್ನಾದರೂ ಗೆದ್ದುಕೊಳ್ಳಬೇಕು. ಒಂದು ಕಡೆಯಿಂದ ಪ್ರಜ್ವಲ್ ರೇವಣ್ಣ, ಮತ್ತೊಂದು ಕಡೆಯಿಂದ ನಿಖಿಲ್ ಕುಮಾರಸ್ವಾಮಿ ಅನಾಯಾಸವಾಗಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಆರಿಸಿಕೊಂಡು, ಸಂಸತ್ ಗೆ ಪ್ರವೇಶ ದೊರಕಿಸುವ ಆಲೋಚನೆ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರದು. ಇದನ್ನು ಮೊದಲೇ ಊಹಿಸಿದಂತೆ ಕಾಂಗ್ರೆಸ್ ನಿಂದ ಬೇಕೆಂತಲೇ ಅಡ್ಡಗಾಲು ಹಾಕುವಂತೆ ನೋಡಿಕೊಳ್ಳಲಾಗುತ್ತಿದೆ ಎಂಬುದು ಗುಮಾನಿ.

ಸುತ್ತೂರು ಶ್ರೀಗಳು ಅತ್ಯಂತ ಪ್ರಭಾವಿಗಳು

ಸುತ್ತೂರು ಶ್ರೀಗಳು ಅತ್ಯಂತ ಪ್ರಭಾವಿಗಳು

ಸುಮಲತಾ ಅಂಬರೀಶ್ ರ ಮಾತುಗಳು, ನಿಲವು- ನಿರ್ಧಾರ, ಇತ್ತೀಚೆಗೆ ಅವರು ಭೇಟಿ ನೀಡುತ್ತಿರುವ ಮುಖಂಡರು, ಸಿಆರ್ ಪಿಎಫ್ ಯೋಧ ಗುರು ಕುಟುಂಬದ ಜತೆಗೆ ಅವರು ನಿಂತ ಪರಿ ಎಲ್ಲವೂ ನಾಯಕತ್ವ ಗುಣಗಳನ್ನು ಹೊರಹಾಕುತ್ತಿವೆ. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಸುತ್ತೂರು ಮಠದ ಸ್ವಾಮೀಜಿ ಬಹಳ ಪ್ರಭಾವಿಗಳು. ಸುಮಲತಾ ಅವರು ಶನಿವಾರ ಅಲ್ಲಿಗೆ ಭೇಟಿ ನೀಡಿರುವುದು ತಮ್ಮ ಮಗನ ಮೊದಲ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಎಂದು ಹೇಳಿದ್ದಾರೆ. ಆದರೆ ಇದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇನ್ನು ಅಂಬರೀಶ್ ಅವರಿಗೆ ಪಕ್ಷಾತೀತವಾಗಿ ಅಭಿಮಾನಿಗಳಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹೀಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದ ಅಂಬಿ ನಿಧನರಾಗಿದ್ದು, ಭಾವನಾತ್ಮಕವಾಗಿ ಜನರು ಸುಮಲತಾ ಪರವಾಗಿ ನಿಲ್ಲುವುದು ತಮ್ಮ ವಿಶ್ವಾಸವನ್ನು ತೋರಿಸುವುದಕ್ಕೆ ಇರುವ ಮಾರ್ಗ ಎಂದು ಭಾವಿಸಬಹುದು. ಹಾಗಾದಲ್ಲಿ ಜೆಡಿಎಸ್-ಕಾಂಗ್ರೆಸ್ ನ ಮಧ್ಯೆ ಮೈತ್ರಿಯೇ ಇಲ್ಲದಂತಾಗುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+