ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?
ಮೈಸೂರು, ಡಿಸೆಂಬರ್ 21: ಸುಳ್ವಾಡಿ ವಿಷಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳ ಹೆಚ್ಚಿನ ವಿಚಾರಣೆ ನಂತರ ಅವರನ್ನು ಸಹಜವಾಗಿಯೇ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಇಮ್ಮಡಿ ಮಹದೇವಸ್ವಾಮಿ, ಮಾದೇಶ, ದೊಡ್ಡಯ್ಯ ತಂಬಡಿ ಈ ಮೂವರು ಆರೋಪಿಗಳನ್ನು ಬಹುತೇಕ ಚಾಮರಾಜನಗರ ಕಾರಾಗೃಹದಲ್ಲಿಯೇ ಇರಿಸಲಾಗುತ್ತದೆ.
ಈ ಪ್ರಕರಣದ ಮಹಿಳಾ ಆರೋಪಿ ಅಂಬಿಕಾಳನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವುದು ಬಹುತೇಕ ಖಚಿತವಾಗಿದೆ.
ವಿಚಾರಣೆಗೆ ಅನುಕೂಲವಾಗಲೆಂದು ಸಾಮಾನ್ಯವಾಗಿ ಹತ್ತಿರದಲ್ಲೇ ಇರುವ ಕಾರಾಗೃಹದಲ್ಲಿ ಆರೋಪಿಗಳನ್ನು ಇರಿಸುವುದು ವಾಡಿಕೆ. ಆ ಪ್ರಕಾರ ಈ ಮೂವರು ಪುರುಷ ಆರೋಪಿಗಳು ಚಾಮರಾಜನಗರದಲ್ಲೇ ಉಳಿಯುವಂತೆ ಕಾಣುತ್ತಿದೆ. ಚಾ.ನಗರದಲ್ಲಿ 2005ರಲ್ಲೇ ಜಿಲ್ಲಾ ಕಾರಾಗೃಹವಾಗಿದ್ದು, ಪ್ರಾರಂಭದಲ್ಲಿ ಮಹಿಳಾ ಬಂದಿಖಾನೆ ವ್ಯವಸ್ಥೆಯೂ ಇಲ್ಲಿ ಇತ್ತು.

2013ರಲ್ಲಿ ಪುಟ್ಟನಂಜಮ್ಮ ಎಂಬ ವಿಚಾರಣಾಧೀನ ಕೈದಿ ನೇಣು ಬಿಗಿದು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಕೇಂದ್ರ ಕಚೇರಿಯಿಂದ ಒಬ್ಬಿಬ್ಬರು ಮಹಿಳಾ ವಿಚಾರಣಾಧೀನ ಕೈದಿಗಳನ್ನು ಇಲ್ಲಿ ಉಳಿಸಬಾರದು. ಕನಿಷ್ಠ 10 ಮಂದಿ ಇದ್ದರಷ್ಟೇ ಇರಿಸಬೇಕೆಂಬ ಸೂಚನೆ ಹೊರಬಿದ್ದಿತು. ಆವಾಗಿನಿಂದಲೂ ಮಹಿಳಾ ಕೈದಿಗಳ ಸಂಖ್ಯೆ 10 ತಲುಪಿಲ್ಲ.
ಅಪರೂಪಕ್ಕೊಮ್ಮೆ ಮಹಿಳೆಯರು ಬರುತ್ತಿದ್ದು, ಅವರನ್ನು ಮೈಸೂರು ಕಾರಾಗೃಹಕ್ಕೆ ಕಳಿಸುತ್ತಾ ಬರಲಾಗಿದೆ ಎಂದು ಕಾರಾಗೃಹ ಅಧೀಕ್ಷಕಿ ಶಾಂತಶ್ರೀ ತಿಳಿಸಿದ್ದಾರೆ.
ಇನ್ನುಇಮ್ಮಡಿ ಸ್ವಾಮೀಜಿಯನ್ನು ಗುರುವಾರ ಸಂಜೆ 6 ರಿಂದ ರಾತ್ರಿ 11 ರವರೆಗೆ ತೀವ್ರ ವಿಚಾರಣೆಗೊಳಪಡಿಸಲಾಯಿತು. ಇದೇ ವೇಳೆ ಅವರಿಗೆ ಲೋ ಶುಗರ್ ಸಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆಗ ಸ್ವಾಮೀಜಿಗೆ ಸೂಕ್ತ ಚಿಕಿತ್ಸೆ ನೀಡಿಲಾಗಿದ್ದು, ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ ಎನ್ನುತ್ತದೆ ಪೊಲೀಸ್ ಮೂಲ.












Click it and Unblock the Notifications