ಭಗವಾನ್ ಭಾಷಣ, ಭದ್ರತೆಗೆ ಸರ್ಕಾರದಿಂದ ಲಕ್ಷ ಲಕ್ಷ ವೆಚ್ಚ
ಮೈಸೂರು, ಫೆಬ್ರವರಿ 7 : ಹಿಂದೂಗಳ ದೇವರೆನಿಸಿರುವ ಸೀತೆ ಹಾಗೂ ರಾಮನ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ. ಕೆಎಸ್ ಭಗವಾನ್ ಅವರ ಭದ್ರತೆಗೆ ಸರ್ಕಾರ ಲಕ್ಷಗಟ್ಟಲೆ ವೆಚ್ಚ ಮಾಡುತ್ತಿದೆ.
ಹೌದು, ಪ್ರಚೋದನಕಾರಿ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸಿ ಅದೇ ಕಾರಣದಿಂದ ಜೀವ ಬೆದರಿಕೆಗೆ ಗುರಿಯಾಗಿರುವ ಭಗವಾನ್ ಗೆ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ಭದ್ರತೆ ನೀಡುತ್ತಿದ್ದು, ಇದಕ್ಕಾಗಿ ಬರೋಬ್ಬರಿ 60ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ.
ಮತ್ತೊಂದು ವಿವಾದದ ಹೇಳಿಕೆ ನೀಡಿದ ಪ್ರೊ.ಕೆ.ಎಸ್. ಭಗವಾನ್
ಸದ್ಯ ಪ್ರೊ. ಭಗವಾನ್ ಅವರು ರಕ್ಷಣೆಗೆ ಸರ್ಕಾರದ ಗನ್ ಮ್ಯಾನ್ ಸೇರಿದಂತೆ ಐವರು ಪೊಲೀಸರನ್ನು ನಿಯೋಜಿಸಲಾಗಿದೆ. ಈ ಐವರು ಪೊಲೀಸರು ಬರೋಬ್ಬರಿ 40 ತಿಂಗಳಿನಿಂದ ಭಗವಾನ್ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಒಬ್ಬ ಪೇದೆಯ ಮಾಸಿಕ ವೇತನ ಕನಿಷ್ಠ 30 ಸಾವಿರ ಎಂದಿಟ್ಟುಕೊಂಡರೂ ಐವರು ಪೊಲೀಸರ ಮಾಸಿಕ ವೇತನ 1.5ಲಕ್ಷ ರೂ ವ್ಯಯವಾಗುತ್ತಿದೆ. 40 ತಿಂಗಳ ಲೆಕ್ಕ ಹಾಕಿದರೆ ಬರೋಬ್ಬರಿ 65 ಲಕ್ಷ ರೂ ವೆಚ್ಚವಾಗುತ್ತದೆ.
ಭಗವಾನ್ ರವರಿಗೆ ಕೇವಲ ಮನೆಯೊಳಗೆ ಮಾತ್ರವಲ್ಲ. ಹೊರಗೆ ಹೋದಾಗಲೂ ಗನ್ ಮ್ಯಾನ್ ಭದ್ರತೆ ಇರುತ್ತದೆ .ಸಶಸ್ತ್ರ ಮೀಸಲು ಪಡೆಯ ಪೇದೆ ಬೆಂಗಾವಲಿಗೆ ಇರುತ್ತಾರೆ. 2015ರ ಆಗಸ್ಟ್ ನಿಂದ ಪೊಲೀಸರ ಬೆಂಗಾವಲಿನಲ್ಲಿದ್ದಾರೆ.
ಬಸವಣ್ಣನವರ ಸಿದ್ಧಾಂತ ಪಾಲಿಸಿದ ಮಹಾನ್ ವ್ಯಕ್ತಿ ಶ್ರೀಗಳು: ಭಗವಾನ್
ಹಿರಿಯ ಸಾಹಿತಿ ಕಲಬುರ್ಗಿ ಹತ್ಯೆಯಾದ ಬೆನ್ನಲ್ಲೇ ಮೈಸೂರಿನಲ್ಲಿಯೂ ಸರಕಾರ ಭಗವಾನ್ ಅವರಿಗೆ ರಕ್ಷಣೆ ನೀಡಲು ಮುಂದಾಯಿತು. ಪ್ರಾರಂಭದಲ್ಲಿ ಒಂದಿಬ್ಬರು ಪೊಲೀಸರನ್ನು ರಕ್ಷಣೆಗೆ ನಿಯೋಜಿಸಲಾಯಿತು. ಬಳಿಕ ಭಗವಾನ್ ಅವರಿಗೆ ಬೆದರಿಕೆ ಕರೆಗಳು ಶುರುವಾದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು ಸರಕಾರದ ಸೂಚನೆ ಮೇರೆಗೆ ಭದ್ರತೆಯನ್ನು ಹೆಚ್ಚಿಸಿದರು.
ಇದಾದ ಬಳಿಕ ಭಗವಾನ್ ಅವರ ಮನೆ ಎದುರು ಸಿಆರ್ ಪಿಸಿ ತುಕಡಿಯನ್ನೇ ನಿಯೋಜಿಸಲಾಯಿತು. ಬಳಿಕ ಎರಡು ಪಾಳಿಯಲ್ಲಿ ನಾಲ್ವರು ಪೊಲೀಸರು ಮೇಲಧಿಕಾರಿ ಜತೆ ರಕ್ಷಣಾ ಜವಾಬ್ದಾರಿ ಹೊರಬೇಕಾಯಿತು.
ಮನೆಯ ಪ್ರವೇಶ ದ್ವಾರ ಮತ್ತು ಆವರಣದಲ್ಲಿ ಸರ್ಕಾರದಿಂದಲೇ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮನೆಗೆ ಬರುವ ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ. ಜೊತೆಗೆ ಮನೆಗೆ ಬಂದು ಹೋಗುವವರ ದಾಖಲೆ ಇರಿಸಿಕೊಳ್ಳಲು ಪ್ರತ್ಯೇಕವಾಗಿ ಪುಸ್ತಕ ಇರಿಸಲಾಗಿದ್ದು, ಬಂದವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಉದ್ದೇಶವನ್ನು ತಿಳಿದುಕೊಂಡು ಒಳಬಿಡಲಾಗುತ್ತದೆ.
ಭಗವಾನ್ ಮೇಲಿನ ಎಲ್ಲಾ ದೂರುಗಳನ್ನು ವಜಾಗೊಳಿಸುವಂತೆ ಪೊಲೀಸರಿಗೆ ಒತ್ತಡ
ಕೆ ಎಸ್ ಭಗವಾನ್ ಅವರ ವಿವಾದಾಸ್ಪದ ಮಾತುಗಳಿಗೆ ಸರಕಾರ ತೆರಿಗೆದಾರರ ಲಕ್ಷಾಂತರ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬ ಪ್ರಶ್ನೆ ಎದ್ದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಾಗಿರುವುದು ಸರ್ಕಾರದ ಕರ್ತವ್ಯ ನಿಜ. ಆದರೆ, ಅದೇ ನೆಪದಲ್ಲಿ ನಿರ್ದಿಷ್ಟ ಸಮುದಾಯದವರಿಗೆ ನೋವುಂಟು ಮಾಡುವ ಮಾತುಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎನ್ನುತ್ತಾರೆ ನಾಗರೀಕರು.