ಚುನಾವಣಾ ರಾಜಕಾರಣಕ್ಕೆ ಶ್ರೀನಿವಾಸ್ ಪ್ರಸಾದ್ ನಿವೃತ್ತಿ ಘೋಷಣೆ
ನಂಜನಗೂಡು ಉಪಚುನಾವಣೆಯ ಸೋಲಿನ ನಂತರ ತಾವು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ವಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.
ಮೈಸೂರು, ಏಪ್ರಿಲ್ 13 : "ಇಂದಿನ ಉಪ ಚುನಾವಣೆಯಲ್ಲಿ ಜನರ ಸ್ವಾಭಿಮಾನ, ಆತ್ಮ ವಿಶ್ವಾಸಕ್ಕೆ ಸೋಲಾಗಿದೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ," ಎಂದು ನಂಜನಗೂಡಿನ ಪರಾಜಿತ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಘೋಷಣೆ ಮಾಡಿದ್ದಾರೆ.
ನಂಜನಗೂಡು ಉಪ ಚುನಾವಣೆಯಲ್ಲಿ ಸೋಲಿನ ಬಳಿಕ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್, "ಸ್ವಾಭಿಮಾನಕ್ಕೆ, ಅತ್ಮ ವಿಶ್ವಾಸಕ್ಕೆ ನೋವಾಗಿದೆ ಎಂದು ಹೇಳಿದ್ದೆ .ಇದು ಕೇವಲ ನನ್ನದೊಬ್ಬನ ಆತ್ಮ ಗೌರವ , ಸ್ವಾಭಿಮಾನದ ಪ್ರಶ್ನೆಯೇ ಅಲ್ಲ. ನಾನು 13 ಚುನಾವಣೆಯನ್ನು ಎದುರಿಸಿ ಸೋಲು ಗೆಲುವನ್ನು ಕಂಡಿದ್ದೇನೆ. ಹೀಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುತ್ತೇನೆ," ಎಂದು ತಿಳಿಸಿದರು.[ಶ್ರೀನಿವಾಸಪ್ರಸಾದ್ ಗೆ ಆತ್ಮವಿಶ್ವಾಸವೇ ಮುಳುವಾಯಿತೇ?]
ಮೂರು ದಿನಗಳಲ್ಲಿ ಚುನಾವಣೆ
ಇದೇ ವೇಳೆ ಸೋಲಿಗೆ ಕಾರಣ ತಿಳಿಸಿದ ವಿ.ಶ್ರೀನಿವಾಸ್ ಪ್ರಸಾದ್, "ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಮೂರು ದಿನಗಳಲ್ಲಿ ಹೇಗೆ ಚುನಾವಣೆ ಮಾಡಿದ್ದಾರೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ," ಎಂದು ಕಿಡಿಕಾರಿದರು. ಪ್ರಚಾರದ ವೇಳೆ 1ಲಕ್ಷ 20 ಸಾವಿರ ಜನರಿಗೆ ಕಾಂಗ್ರೆಸ್ ಮುಖಂಡರು ಹಣ ಹಂಚಿದ್ದಾರೆ. ಈ ಮೂಲಕ ಮತದಾನದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಸರ್ಕಾರ ಆಡಳಿತ ಯಂತ್ರವನ್ನು, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಗೆಲವು ಸಾಧಿಸಿದೆ," ಎಂದು ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.[ಪ್ರಸಾದ್ ಗೆ ಭರ್ಜರಿ ಗುದ್ದು ನೀಡಿದ ಸಿಎಂ ಸಿದ್ದು]