ಸಿದ್ದರಾಮಯ್ಯ ಪತ್ನಿಯಿಂದ ಚಾಮುಂಡಿ ದೇವಿಗೆ ವಿಶೇಷ ಪೂಜೆ
ಮೈಸೂರು, ಸೆಪ್ಟೆಂಬರ್ 24: ನವರಾತ್ರಿ ಅಂಗವಾಗಿ ಚಾಮುಂಡಿ ದೇವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಆವರ ಪತ್ನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಭಾನುವಾರ ಬೆಳಗ್ಗೆ ಪಾರ್ವತಿ ಸಿದ್ದರಾಮಯ್ಯನವರು ಬೆಟ್ಟಕ್ಕೆ ಆಗಮಿಸಿ 1 ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರ ಜತೆಗೆ ಕುಟುಂಬದ ಸದಸ್ಯರು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದು, ಸಿದ್ದರಾಮಯ್ಯನವರಿಗೆ ಯಾವುದೇ ಸಂಕಷ್ಟ ಎದುರಾಗದೆ ಮುಂದಿನ ಬಾರಿಯೂ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.

ಪಾರ್ವತಿ ಅವರು ಶರನ್ನವರಾತ್ರಿ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ಸಿದ್ದರಾಮಯ್ಯ ಆಗಮಿಸುವ ಮೊದಲೇ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮುಂದಿನ ಬಾರಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಈ ನವರಾತ್ರಿಯ ಪೂಜೆ ಕೈಗೊಂಡಿದ್ದಾರೆ ಎಂದು ಆಪ್ತ ಮೂಲಗಳು ಖಚಿತ ಪಡಿಸಿವೆ.
ಪ್ರತಿ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ಹೊರಟು ಈ ನವರಾತ್ರಿ ಪೂಜೆಯಲ್ಲಿ ಪಾರ್ವತಿ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ. ಪಾರ್ವತಿ ಅವರು ದೇವಸ್ಥಾನದಿಂದ ಹೊರಬರುವಾಗ ಮಾಧ್ಯಮ ಪ್ರತಿನಿಧಿಗಳು ವಿಡಿಯೋ ತೆಗೆಯಲು ಮುಂದಾಗಿದ್ದು, ಪೊಲೀಸರು ಮಾಧ್ಯಮದವರ ಮೊಬೈಲ್ ಕಿತ್ತುಕೊಂಡು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆಯೂ ನಡೆದಿದೆ.












Click it and Unblock the Notifications