ಪ್ರವಾಸೋದ್ಯಮಕ್ಕೆ ಉತ್ತೇಜನ: ಮೈಸೂರಿನಲ್ಲಿ ಸ್ಕೈಡೈವಿಂಗ್
ಮೈಸೂರು, ಡಿಸೆಂಬರ್ 17 : ಮೈಸೂರು ಪ್ರವಾಸೋದ್ಯಮ ಕ್ಷೇತ್ರವಾಗಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ಸ್ಕೈಡೈವಿಂಗ್ ಆಯೋಜಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ತಿಳಿಸಿದರು.
ದೆಹಲಿಯ ಸ್ಕೈಡೈವಿಂಗ್ ಸಂಸ್ಥೆಯ ವತಿಯಿಂದ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಸ್ಕೈಡೈವಿಂಗ್ ಕಾರ್ಯಕ್ರಮದಲ್ಲಿ ನವೀನ್ ರಾಜ್ ಸಿಂಗ್ ಮಾತನಾಡಿದರು. ಪ್ರಥಮ ಬಾರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರಿನಲ್ಲಿ ರೋಮಾಂಚನಕಾರಿ ಸಾಹಸ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮೈಸೂರಿನಲ್ಲಿ ಜಂಪ್ ಮಾಡಲು ಸೂಕ್ತ ವಾತಾವರಣವಿದೆ ಎನ್ನುವ ದೃಷ್ಟಿಯಿಂದ ಆಯೋಜಿಸಲಾಗಿದೆ ಎಂದರು.

ಈ ಹಿಂದೆ ರೈಟ್ ಟು ಹಂಪಿ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಉಡುಪಿಯಲ್ಲಿ ಸರ್ಫಿಂಗ್ ನಡೆಸಲಾಗಿತ್ತು. ಇದೀಗ ಇಲ್ಲಿ ಬಲೂನ್ ಹಾರಾಟವನ್ನೂ ನಡೆಸಬೇಕೆಂದುಕೊಂಡಿದ್ದೇವೆ. ಅನುಮತಿ ಸಿಕ್ಕರೆ ಬಲೂನ್ ಹಾರಾಟವನ್ನೂ ನಡೆಸಲಿದ್ದೇವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಸ್ಕೈಡೈವಿಂಗ್ ಗೆ ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೈಸೂರಲ್ಲಿ ಸ್ಕೈಡೈವಿಂಗ್ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಎರಡು ತಿಂಗಳುಗಳ ಕಾಲ ಇದು ನಡೆಯಲಿದ್ದು. ಒಬ್ಬರಿಗೆ 35ಸಾವಿರ ರೂಪಾಯಿ ತಗುಲುತ್ತದೆ ಎಂದು ತಿಳಿಸಿದರು.

ಮೊದಲು ಸ್ಕೈಡೈವಿಂಗ್ ನಡೆಸಿದ ಸಮಾಜಕಲ್ಯಾಣ ಇಲಾಖಾ ಕಾರ್ಯದರ್ಶಿ ಮಣಿವಣ್ಣನ್ ತಮ್ಮ ಅನುಭವವನ್ನು ಹಂಚಿಕೊಂಡರು. ಗಾಳಿ ಮತ್ತು ತಂಪಾದ ವಾತಾವರಣದಲ್ಲಿ ಹಾರಾಟ ನಡೆಸಿದ್ದು ರೋಮಾಂಚನವಾಯಿತು. ಒಂದು ಕ್ಷಣಕ್ಕೆ ಮಾತುಗಳು ಹೊರಬರುತ್ತಿಲ್ಲ. ಅಷ್ಟೊಂದು ಸಂತೋಷವಾಗಿದೆ. ಮೈಸೂರಿನಲ್ಲಿ ಸ್ಕೈಡೈವಿಂಗ್ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮೈಸೂರಿನ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಿ. ಇಂಥಹ ಕ್ರೀಡೆಗಳು ಕೇವಲ ವಿದೇಶಗಳಲ್ಲಿ ಮಾತ್ರ ನಡೆಯುತ್ತವೆ ಮೈಸೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಷಯ ಎಂದರು.
*18 ವರ್ಷ ವಯಸ್ಸು ದಾಟಿರಬೇಕು.
* ಅಂತರರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರವನ್ನು ಹೊಂದಿರುವ ಪರಿಣತರಿಂದ ತರಬೇತಿ ನೀಡಿದ ಬಳಿಕ ಸ್ಕೈಡೈವಿಂಗ್ ಗೆ ಅವಕಾಶ
* ಸ್ಟ್ಯಾಟಿಕ್ ಲೈನ್ ಜಂಪ್ ಮತ್ತು ಟಂಡೆಮ್ ಜಂಪ್ ನಲ್ಲಿಯೂ ತರಬೇತಿಯನ್ನು ನೀಡಲಾಗುವುದು.












Click it and Unblock the Notifications