ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಈಗ ಟೋಪಿ ಹಾಕ್ತಿಯಪ್ಪ ಎಂದ ಸಿದ್ದು
Recommended Video

ಮೈಸೂರು, ಜೂನ್ 12 : ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ತವರು ಜಿಲ್ಲೆಗೆ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಈ ಮುಂಚಿನಂತೆ ವಂದಿ ಮಾಗಧರಿಲ್ಲ. ಮನವಿ ಪತ್ರಗಳನ್ನು ಹಿಡಿದು ನಿಲ್ಲುತ್ತಿದ್ದ ಆಸೆ ಕಂಗಳ ಜನರಿಲ್ಲ. ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ತಮ್ಮ ಮನೆಗೆ ತೆರಳಿ, ಸಿದ್ದರಾಮಯ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಗಿಜಿಗುಡುತ್ತಿದ್ದ ಮನೆ ಬಿಕೋ ಎನ್ನುತ್ತಿದೆ.
ನಾಲೈದು ದಿನಗಳಿಂದ ಬಾದಾಮಿ ವಿಧಾನಸಭಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ, ಇದೀಗ ಮೈಸೂರಿಗೆ ಬಂದಿದ್ದಾರೆ. ತಮ್ಮ ಮಗ ಯತೀಂದ್ರನನ್ನು ಗೆಲ್ಲಿಸಿದ ವರುಣಾ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಆ ನಂತರ ರಂಜಾನ್ ಪ್ರಯುಕ್ತ ಅವರು ಮಂಗಳವಾರ ಸಂಜೆ ಮೈಸೂರಿನಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ.
ಸಂಜೆ 6 ಗಂಟೆಗೆ ಬನ್ನಿ ಮಂಟಪದ ಮಿಲನ್ ಫಂಕ್ಷನ್ ಹಾಲ್ ನಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಪ್ರತಿ ವರ್ಷ ರಂಜಾನ್ ನಿಮಿತ್ತ ಮೈಸೂರಿನಲ್ಲಿ ಇಫ್ತಾರ್ ಕೂಟ ಆಯೋಜಿಸುವ ಸಿದ್ದರಾಮಯ್ಯ ಈ ಬಾರಿಯೂ ಏರ್ಪಡಿಸಿದ್ದಾರೆ. ಕರ್ನಾಟಕ ಸರಕಾರದ ಲೆಟರ್ ಹೆಡ್ ನಲ್ಲೇ ಆಹ್ವಾನ ಪತ್ರಿಕೆ ನೀಡಲಾಗಿದೆ ಎನ್ನಲಾಗಿದೆ.

ಕಾರ್ಯಕರ್ತರು- ಸಾರ್ವಜನಿಕರೂ ಯಾರೂ ಇಲ್ಲ
ಮೈಸೂರು ಹಾಗೂ ಚಾಮರಾಜನಗರದಲ್ಲಿ ಗೆದ್ದಿರುವ ಹಾಗೂ ಸೋತಿರುವವವರ ಜೊತೆ ಬುಧವಾರ ಖಾಸಗಿ ಹೋಟೆಲ್ ನಲ್ಲಿ ಸಭೆ ಏರ್ಪಡಿಸಲಾಗಿದೆ. ಸಿದ್ದರಾಮಯ್ಯ ಮನೆಯ ಕಡೆಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮುಖ ಮಾಡಿಲ್ಲ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಅವರ ಮನೆಯ ಮುಂದೆ ಜನರು ಕಾದು ಕುಳಿತುಕೊಳ್ಳುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆ ಮುಂದೆ ಬೆರಳೆಣಿಕೆಯಷ್ಟೇ ಜನರು ಕಾಣುತ್ತಿದ್ದಾರೆ.

ಪುಟ್ಟರಂಗ ಶೆಟ್ಟಿಗೆ ನೈಸಾಗಿ ಕಾಲೆಳೆದ ಸಿದ್ದು
ಇನ್ನು ಸಚಿವ ಪುಟ್ಟರಂಗ ಶೆಟ್ಟಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಾವು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕಂಡುಬರಲಿಲ್ಲವಲ್ಲ ಎಂದಾಗ, ತಮ್ಮದೇ ಲಘು ಧಾಟಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, ಅಧಿಕಾರ ಬಂದ ಮೇಲೆ ನಾವು ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ವ್ಯಂಗ್ಯಕ್ಕ ಸಚಿವ ಪುಟ್ಟರಂಗಶೆಟ್ಟಿ ಮೌನಕ್ಕೆ ಶರಣಾದರು

ಸನ್ಮಾನ ಮಾಡಲು ಬಂದಿದ್ದ ಬೆಂಬಲಿಗ
ಸನ್ಮಾನ ಮಾಡಲು ಬಂದ ಬೆಂಬಲಿಗನ ಮುಂದೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು. ಚಂದನ್ ಎಂಬ ಅಭಿಮಾನಿ ಸಿದ್ದರಾಮಯ್ಯ ಸನ್ಮಾನ ಮಾಡಲು ಆಗಮಿಸಿದ್ದರು. ನಿಮಗೆ ಸನ್ಮಾನ ಮಾಡಬೇಕು ಎಂದಾಗ, ಬಾ ಎಂದು ಕೈ ಸನ್ನೆ ಮೂಲಕ ಸೂಚನೆ ನೀಡಿ, ಶಾಲು , ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋದಾಗ, ಹೇ ಇದೆಲ್ಲ ಯಾಕಪ್ಪ ಎಂದ ಸಿದ್ದರಾಮಯ್ಯ ತಿರಸ್ಕರಿಸಿದರು.

ಜನರೇ ಟೋಪಿ ಹಾಕಿದರಲ್ಲಪ್ಪಾ...
ಆದರೂ ಪೇಟ ತೊಡಿಸುತ್ತಿದ್ದಾಗ ಜನರೇ ಟೋಪಿ ಹಾಕಿದರು. ಇದೆಲ್ಲ ಯಾಕಪ್ಪ ಎಂದ ಬೇಸರದಿಂದಲೇ ಸಿದ್ದರಾಮಯ್ಯ ನುಡಿದರು. ಜನರೇ ಟೋಪಿ ಹಾಕಿದರು. ನೀನ್ಯಾಕೆ ಈಗ ಟೋಪಿ ಹಾಕ್ತೀಯಪ್ಪ ಎಂದು ಕಾಂಗ್ರೆಸ್ ಅಥವಾ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಸೋಲಿನ ಕುರಿತು ಮತ್ತೆ ವ್ಯಂಗ್ಯವಾಡಿದರು ಸಿದ್ದರಾಮಯ್ಯ.












Click it and Unblock the Notifications