ಸಿಕ್ಕಾಪಟ್ಟೆ ಕಾರ್ಯಕ್ರಮದಲ್ಲಿ ಸಿದ್ದು ಭಾಗಿ, ಮೈಸೂರಿನಲ್ಲಿ ಹವಾ ಜೋರು
ಮೈಸೂರು, ಮಾರ್ಚ್ 10 : ಎರಡನೇ ದಿನದ ತವರು ಜಿಲ್ಲೆ ಮೈಸೂರಿನ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಕ್ಷಣವೂ ಬಿಡದಂತೆ ಹಲವು ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಹೀಗೆ ಬಿಡುವಿಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಅವರ ಪಾಲ್ಗೊಂಡ ಕಾರ್ಯಕ್ರಮಗಳ ಕುರಿತಾದ ಮಾಹಿತಿ ಇಲ್ಲಿದೆ.
ಮೊದಲು ಮಾಧ್ಯಮ ಪ್ರತಿನಿಧಿಗಳ ಜೊತೆ ಸುದೀರ್ಘವಾಗಿ ಮಾತನಾಡಿ ಹೊರಟ ಸಿದ್ದರಾಮಯ್ಯ, ಕೆಪಿಟಿಸಿಎಲ್ ವತಿಯಿಂದ ಕುಕ್ಕರಹಳ್ಳಿಯಲ್ಲಿ ನಿರ್ಮಿಸಿರುವ ಸಬ್ ಸ್ಟೇಷನ್ ಉದ್ಘಾಟಿಸಿದರು. ಆ ಬಳಿಕ ರಾಮಸ್ವಾಮಿ ವೃತ್ತದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಆ ನಂತರ ಲಲಿತಾದ್ರಪುರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಲಾಟರಿ ಮೂಲಕ ಚೀಟಿ ಎತ್ತಿ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಿದರು. ಒಟ್ಟು 530 ನಿವೇಶನಗಳ ವಿತರಣೆ ಮಾಡಿದರು. ವೇದಿಕೆ ಕಾರ್ಯಕ್ರಮ ಮುಗಿಸಿ ಜರ್ಮನ್ ಪ್ರೆಸ್ ಅವರಣದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಹಾಗೂ ಇತರ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು.
ಇದೇ ವೇಳೆ ಜರ್ಮನ್ ಪ್ರೆಸ್ ಆವರಣದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಿದ ಸಿದ್ದರಾಮಯ್ಯ, ಬನ್ನೂರು ರಸ್ತೆಯಲ್ಲಿರುವ ದೇವೇಗೌಡ ವೃತ್ತಕ್ಕೆ ಆಗಮಿಸಿ, ರಸ್ತೆ ಉದ್ಘಾಟನೆ ಮಾಡಿದರು. ಕೆ.ಆರ್. ಆಸ್ಪತ್ರೆಗೆ ತೆರಳಿ ಅಲ್ಲಿನೆ ಫ್ರೋ. ಯುರಾಲಜಿ ಕೇಂದ್ರ ಉದ್ಘಾಟನೆ ನೆರವೇರಿಸಿದರು. ಆ ನಂತರ ಟ್ರಾಮಾ ಕೇಂದ್ರ ಹಾಗೂ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಕೆಆರ್ ಎಸ್ ರಸ್ತೆಯ ಪಿ.ಕೆ.ಟಿ.ಬಿ. ಆಸ್ಪತ್ರೆ ಆವರಣ ತಲುಪಿ, ಜಯದೇವ ಹೃದ್ರೋಗ ಆಸ್ಪತ್ರೆಗೆ ಚಾಲನೆ ನೀಡಿದರು.

ಹೆಣಕ್ಕೆ ಹಣ ಪಡೆದರೆ ಕ್ರಿಮಿನಲ್ ಕೇಸ್
ಇನ್ನು ಕಾರ್ಯಕ್ರಮಗಳಲ್ಲಿ ಪುಂಖಾನುಪುಂಖವಾಗಿ ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹೆಣಕ್ಕೆ ಹಣ ಪಡೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಿದ ಅವರು, ರಾಜ್ಯದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಇನ್ಮುಂದೆ ಹೆಣಕ್ಕೆ ಹಣ ಪಡೆಯುವಂತಿಲ್ಲ. ಹೆಣಕ್ಕೆ ಹಣ ಪಡೆದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗುವುದು ಎಂದರು.

ಜಿಲ್ಲೆಯ ಅಭಿವೃದ್ಧಿಗೆ 5000 ಕೋಟಿ ರುಪಾಯಿ ವೆಚ್ಚ
ದೇಶದ ಬೃಹತ್ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. ಆರೋಗ್ಯಭಾಗ್ಯ ಯೋಜನೆಯಡಿ ಹೆಲ್ತ್ ಕಾರ್ಡ್ ವಿತರಣೆಯಾಗಿದ್ದು, ಕಾರ್ಡ್ ತೋರಿಸಿ ಚಿಕಿತ್ಸೆ ಪಡೆಯಬಹುದು. ಮೈಸೂರು ಜಿಲ್ಲಾಭಿವೃದ್ಧಿಗೆ 5000 ಕೋಟಿ ರುಪಾಯಿ ವೆಚ್ಚ ಮಾಡಿದ್ದೇವೆ. ಮೈಸೂರು ಪರಂಪರೆ ಉಳಿಸಿ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಲಲಿತ್ ಮಹಲ್ ಮಾದರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಿದೆ. ನಾನು ಮುಖ್ಯಮಂತ್ರಿ ಆದ ಮೇಲೆ ಈ ಎಲ್ಲವನ್ನೂ ಮಾಡಿದ್ದೇನೆ ಎಂದಿದ್ದಾರೆ.

50ಕ್ಕೂ ಹೆಚ್ಚು ರೈತರ ಬಂಧನ
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಸಿದ್ದರಾಮಯ್ಯಗೆ ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನಾ ಕಾರ್ಯಕ್ರಮದ ವೇಳೆ ಕಪ್ಪು ಪಟ್ಟಿ ತೋರಿಸಲು ರೈತರು ಮುಂದಾಗಿದ್ದರು. ಕಬ್ಬಿನ ಬೆಂಬಲ ಬೆಲೆಗೆ ಆಗ್ರಹಿಸಿದರು. ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಬರುವುದಕ್ಕೂ ಮುನ್ನವೇ ಅಲ್ಲಿದ್ದ ಪೊಲೀಸರು 50ಕ್ಕೂ ಹೆಚ್ಚು ರೈತರನ್ನು ಬಂಧಿಸಿದರು.

ಪೌರ ಕಾರ್ಮಿಕರಿಂದ ಕಾರಿಗೆ ಅಡ್ಡಿ ಪ್ರಯತ್ನ
ವೇತನ ಹೆಚ್ಚಳ ವಿಚಾರದಲ್ಲಿ ಮೈಸೂರಿನ ಸಿದ್ದರಾಮಯ್ಯ ನಿವಾಸದ ಮುಂದೆ ಧರಣಿ ಕುಳಿತಿದ್ದ ಪೌರಕಾರ್ಮಿಕರು ಮನೆಯಿಂದ ನಿರ್ಗಮಿಸುವ ವೇಳೆ ಕಾರಿಗೆ ಅಡ್ಡಿಪಡಿಸಲು ಮುಂದಾದರು. ಈ ವೇಳೆ ಮುಖ್ಯಮಂತ್ರಿ ಬೆಂಗಾವಲು ಪಡೆಯು ಪ್ರತಿಭಟನಾನಿರತರನ್ನು ಚದುರಿಸಿ ಕಾರಿಗೆ ದಾರಿ ಮಾಡಿಕೊಟ್ಟರು.












Click it and Unblock the Notifications