ಮೈಸೂರಿನಲ್ಲಿ ಹಾಲಿ, ಮಾಜಿ ಸಿಎಂಗಳ ಭರ್ಜರಿ ಚುನಾವಣಾ ಪ್ರಚಾರ
ಮೈಸೂರು, ಏಪ್ರಿಲ್ 14 : ಹೈ ವೋಲ್ಟೇಜ್ ಚುನಾವಣೆಗೆ ಸಜ್ಜಾಗಿರುವ ಚಾಮುಂಡೇಶ್ಚರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ತಮ್ಮ ಶಕ್ತಿಯನ್ನು ತೋರಿಸಲು ಮುಂದಾಗಿದ್ದಾರೆ. ಭಾರೀ ಪ್ರಚಾರ ದೊಂದಿಗೆ ರಣಕಹಳೆ ಮೊಳಗಿಸಲಿದ್ದಾರೆ. ಆರೋಪ-ಪ್ರತ್ಯಾರೋಪ, ಸವಾಲು-ಪ್ರತಿಸವಾಲುಗಳಿಂದ ರಾಜ್ಯದ ಗಮನ ಸೆಳೆದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾ.ದಳದಿಂದ ಶಾಸಕ ಜಿ.ಟಿ.ದೇವೇಗೌಡ ಕಣಕ್ಕಿಳಿಯಲಿದ್ದು, ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದನ್ನು ಸವಾಲಾಗಿ ತೆಗೆದು ಕೊಂಡಿದ್ದಾರೆ.
ಅಗ್ನಿಪರೀಕ್ಷೆ ಗೆದ್ದು, ವಿರೋಧಿಗಳಿಗೆ ಸೆಡ್ಡು ಹೊಡೆಯುತ್ತಾರಾ ಸಿದ್ದು?
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ, ವರುಣ ಕ್ಷೇತ್ರ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಮುಖ್ಯಮಂತ್ರಿ ಬರುವ ಮುನ್ನವೇ, ಅಂದರೆ ಏ.14ರಿಂದ 3 ದಿನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿಯಲ್ಲಿ ಭಾರೀ ರೋಡ್ ಶೋ ನಡೆಸಲಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತದ 32 ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಮೊದಲ ದಿನ(ಏ.17) ಕ್ಷೇತ್ರ ವ್ಯಾಪ್ತಿಯ ಲಿಂಗಾಬುಧಿಪಾಳ್ಯ, ಶೀರಾಂಪುರ, ಪರಸಯ್ಯನಹುಂಡಿ, ರಮಾಬಾಯಿ ನಗರ ಸೇರಿದಂತೆ 16 ಗ್ರಾಮಗಳಿಗೆ ಭೇಟಿ ನೀಡಲಿರುವ ಅವರು, 18ರಂದು ಜಟ್ಟಿಹುಂಡಿ, ಗೋಹಳ್ಳಿ, ಕೊಮಾರಬೀಡು, ಬೀರಿಹುಂಡಿ ಸೇರಿ 16 ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮೊದಲ ದಿನ(ಏ.14) ಹಿನಕಲ್, ಕೋಟೆಹುಂಡಿ, ಡಿ.ಸಾಲುಂಡಿ, ದಾರಿಪುರ ಸೇರಿ 27 ಗ್ರಾಮಗಳಲ್ಲಿ, 15ರಂದು ಲಿಂಗಾಬುಧಿಪಾಳ್ಯ, ತಳೂರು, ಬೋಗಾದಿ, ಉದ್ಬೂರು ಸೇರಿ 33 ಗ್ರಾಮಗಳಲ್ಲಿ, 16ರಂದು ರಟ್ಟನಹಳ್ಳಿ, ಇಲವಾಲ, ಹುಯಿಲಾಳು, ಕಮರಹಳ್ಳಿ, ಸಾಹುಕಾರಹುಂಡಿ ಸೇರಿ 38 ಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರು ಈಗಾಗಲೇ ಭೇಟಿ ನೀಡಿರುವ ಗ್ರಾಮಗಳಿಗೆ ಕುಮಾರಸ್ವಾಮಿ ಅವರು ತಪ್ಪದೇ ಭೇಟಿ ನೀಡಲಿದ್ದಾರೆ.