ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಏಳು ಮಂದಿ ಬಂಧನ
ಮೈಸೂರು, ಜುಲೈ 15: ಮಸಾಜ್ ಕೇಂದ್ರ ನಡೆಸುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆಯುರ್ವೇದಿಕ್ ಸ್ಪಾವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಸಮುದ್ರ ಮೈಸೂರು ಎಂಬ ಹೋಟೆಲ್ನ 4ನೇ ಮಹಡಿಯಲ್ಲಿರುವ ಆಯುರ್ ಟಚ್ ಎಂಬ ಆಯುರ್ವೇದಿಕ್ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮನು ಫಿಲಿಪ್, ಮೃದುಲ್ ರಾಜ್, ಸುಧೀರ್ ಬಾಬು, ಪ್ರಜೇಶ್, ದನೀಶ್ ಕರ್, ಸಜೀತ್, ಪ್ರದೀಪ, ರಿಜೇಶ್ ಎಂಬುವರನ್ನು ಬಂಧಿಸಲಾಗಿದೆ.
ಹೋಟೆಲ್ನಲ್ಲಿ ಆಯುರ್ವೇದಿಕ್ ಸ್ಪಾ ನಡೆಸುತ್ತಾ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹೋಟೆಲ್ಗೆ ಬರುವ ಗಿರಾಕಿಗಳು ಇಲ್ಲಿಗೆ ಬರುತ್ತಿದ್ದರು. ಆನ್ ಲೈನ್ ಮೂಲಕ ಗ್ರಾಹಕರನ್ನು ಸೆಳೆದು ಮಸಾಜ್ ನೆಪದಲ್ಲಿ ದಂಧೆ ನಡೆಸಲಾಗುತ್ತಿತ್ತು.

ಈ ಕುರಿತಂತೆ ಖಚಿತ ಮಾಹಿತಿ ದೊರೆತ ಮೇರೆಗೆ ಮೈಸೂರು ನಗರದ ಡಿ.ಸಿ.ಪಿ. ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಲಿಂಗಪ್ಪರವರ ನೇತೃತ್ವದ ತಂಡ ದಾಳಿ ನಡೆಸಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ. 15,000 ರೂ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications