ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ: ಇಡಿ ಕೈಸೇರಿತು ವೈಟ್ನರ್ ಹಾಕಿದ್ದ ಮೂಲಕ ದಾಖಲೆ
ಮುಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಅಖಾಡಕ್ಕೆ ಇಳಿದಿದ್ದು, ಸತತ ಎರಡನೆ ದಿನವೂ ಮುಡಾ ಕಚೇರಿಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ. ಇಡಿ ಅಧಿಕಾರಿಗಳ ಪರಿಶೀಲನೆ ವೇಳೆ ವೈಟ್ನರ್ ಹಾಕಿ ತಿದ್ದಿದ್ದ ಮೂಲ ದಾಖಲೆ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ಮುಡಾ ಕಚೇರಿಯಲ್ಲಿ ಶುಕ್ರವಾರ ತಡರಾತ್ರಿಯವರಗೆ ಕಾರ್ಯಾಚರಣೆ ನಡೆಸಿದ್ದ ಇಡಿ ಅಧಿಕಾರಿಗಳು ಶನಿವಾರ ಕೂಡ ಆಗಮಿಸಿ ಶೋಧ ಕಾರ್ಯ ಮುಂದುವರೆಸಿದರು. ತಡರಾತ್ರಿ 11.30 ರ ತನಕ ತನಿಖೆ ನಡೆಸಿದ ವಾಪಾಸು ತೆರಳಿದ್ದರು.

ದಾಖಲೆಗಳ ಕಳ್ಳತನ ಆಗುತ್ತದೆ ಎನ್ನುವ ಭಯದಿಂದ ಮುಡಾ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಿಆರ್ ಪಿಎಫ್ ಯೋಧರು ಹಾಸಿಗೆ, ದಿಂಬು, ರಗ್ಗು ತರಿಸಿಕೊಂಡು ಮುಡಾ ಕಚೇರಿಯಲ್ಲಿ ಮಲಗಿದ್ದರು.
ಮುಡಾದಲ್ಲೇ ಅಧಿಕಾರಿಗಳ ವಾಸ್ತವ್ಯ
ಮುಡಾಕ್ಕೆ ಮೂರು ಹೊತ್ತು ಊಟ ತಿಂಡಿ ತರಿಸಿಕೊಂಡು ಅಲ್ಲಿಯೇ ಅಧಿಕಾರಿಗಳು ವಾಸ್ತವ್ಯ ಹೂಡಿದ್ದಾರೆ. ಶತಾಯಗತಾಯ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಬೇಕೆಂದು ಇಡಿ ಅಧಿಕಾರಿಗಳ ತಂಡ ನಿರ್ಧರಿಸಿದೆ. ಈ ನಡುವೆ ಮುಡಾ ಕಾರ್ಯದರ್ಶಿ ಪ್ರಸನ್ನ ಅವರು ಶನಿವಾರ ಬೆಳಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸಿದರು.
ಈ ನಡುವೆ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ಪತ್ರದಲ್ಲಿ ಪತ್ನಿ ಪಾರ್ವತಿ ಅವರ ಸಹಿಗೂ, ಆರ್ ಟಿಐ ಅಡಿ ಲಭ್ಯವಾಗಿರುವ ಪತ್ರದಲ್ಲಿರುವ ಸಹಿಗೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಜೊತೆಗೆ ವೈಟ್ನರ್ ಹಾಕಿ ಅಳಿಸಿರುವ ಮೂಲ ಕಡತವೂ ಇಡಿ ಅಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗುತ್ತಿದೆ. ಇದರಿಂದ ಲೋಕಾಯುಕ್ತ ತನಿಖೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಘಟನೆ ಸಂಬಂಧ ಸಂಸದ ಯದುವೀರ್ ಮಾತನಾಡಿ, ಮುಡಾ ಹಗರಣದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಬಿಜೆಪಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಸಲ್ಲಿಸುತ್ತೇವೆ ಎಂದರು.
ಮುಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕರ್ನಾಟಕ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಡಾದಲ್ಲಿ 5000 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದ ಹಿನ್ನಲೆಯಲ್ಲಿ ಅಧಿಕಾರಿಗಳು ಈ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.












Click it and Unblock the Notifications