ಮೈಸೂರು : ಜನರ ನಿದ್ದೆಗೆಡಿಸಿದ ಶಾಲಾ ಕಾಂಪೌಂಡ್!
ಮೈಸೂರು, ಜೂನ್ 17 : ಬಿರುಕು ಬಿಟ್ಟು ಇವತ್ತೋ ನಾಳೆಯೋ ಕುಸಿದು ಬೀಳುವಂತಿರುವ ಶಾಲೆಯ ಕಾಂಪೌಂಡ್ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಜನರ ನಿದ್ದೆಗೆಡಿಸಿದೆ.
ಶಾಲೆಯ ಕಾಂಪೌಂಡ್ ಬಿರುಕು ಬಿಟ್ಟು ಬಿದ್ದರೆ ಗ್ರಾಮದ ಜನ ಏಕೆ ಭಯಭೀತರಾಗಬೇಕು? ಎಂಬ ಪ್ರಶ್ನೆ ಕಾಡಬಹುದು. ಅದರ ಒಳಮರ್ಮ ತಿಳಿಯಬೇಕಾದರೆ ಸಂಪೂರ್ಣ ವರದಿ ಓದಿ. [ಬೀಗ ಹಾಕಬೇಕಿದ್ದ ಕನ್ನಡ ಶಾಲೆ ಉಳಿದು, ಬೆಳೆದ ಕಥೆ!]

ಸಾಮಾನ್ಯವಾಗಿ ಎಲ್ಲ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲಾಗುತ್ತದೆ. ಇದರಿಂದ ಶಾಲೆಗೆ ಭದ್ರತೆ ಸಿಗುತ್ತದೆ. ದನಕರು, ಜನರಿಂದಲೂ ರಕ್ಷಣೆ ಸಿಗುತ್ತದೆ. ಸರ್ಕಾರ ಶಾಲೆಯ ಕಾಂಪೌಂಡ್ ನಿರ್ಮಿಸಲು ಒಂದಷ್ಟು ಅನುದಾನ ನೀಡುತ್ತದೆ. ಕಾಮಗಾರಿ ಗುತ್ತಿಗೆ ಪಡೆಯುವವರು ಸರ್ಕಾರಿ ಕಟ್ಟಡ ತಾನೇ ಎಂಬ ತಾತ್ಸಾರದಲ್ಲಿ ಗುಣಮಟ್ಟಕ್ಕೆ ಎಳ್ಳುನೀರು ಬಿಟ್ಟು ಕಾಮಗಾರಿ ಮುಗಿಸುತ್ತಾರೆ. [ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!]
ಕಟ್ಟೆಮಳವಾಡಿಯ ಉರ್ದುಶಾಲೆಯ ಕಾಂಪೌಂಡ್ನ ಸ್ಥಿತಿಗೂ ಇದೇ ಕಾರಣವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಕಾಂಪೌಂಡ್ ಈಗ ಬಿರುಕು ಬಿಟ್ಟು ನಿಂತಿದೆ. ಇದನ್ನು ನೋಡಿದರೆ ಯಾವಾಗ ಬೇಕಾದರೂ ಬೀಳಬಹುದು. ಶಿಕ್ಷಕರಂತು ಮಕ್ಕಳನ್ನು ಅದರತ್ತ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. [ಕ್ಷೀರಭಾಗ್ಯ ಯೋಜನೆ ಕೊಂಡಾಡಿದ ಶಾಲಾ ಮಕ್ಕಳು!]
ಕಾಂಪೌಂಡ್ ಬಿರುಕು ಬಿಟ್ಟು ನಿಂತಿದ್ದರೂ ಶಾಲೆಯ ಒಳ ಭಾಗಕ್ಕೆ ಬೀಳುವ ಸಾಧ್ಯತೆ ಕಡಿಮೆ. ಇದು ಬೀಳುವುದು ಹೊರಭಾಗಕ್ಕೆ. ಹೊರಭಾಗಕ್ಕೆ ಬಿದ್ದರೆ ಅನಾಹುತ ತಪ್ಪಿದಲ್ಲ. ಕಾರಣ ಈ ಕಾಂಪೌಂಡ್ ಬಳಿಯೇ ಟ್ರಾನ್ಸ್ಫಾರ್ಮರ್ ಇದೆ.

ಕಾಂಪೌಂಡ್ ಬಿದ್ದರೆ ಟ್ರಾನ್ಸ್ಫಾರ್ಮರ್ ಕಂಬ ಮುರಿದು ವಿದ್ಯುತ್ ತಂತಿ ತುಂಡಾಗಿ ಮನೆಗಳ ಮೇಲೆ ಬೀಳುವ ಆತಂಕ ಎದುರಾಗಿದೆ. ಇದೀಗ ಗ್ರಾಮದಲ್ಲಿ ಮಳೆ, ಗಾಳಿ ಬಂದರೆ ಎಲ್ಲಿ ಕಾಂಪೌಂಡ್ ಕುಸಿದು ಬಿದ್ದು ಅನಾಹುತ ಸಂಭವಿಸುತ್ತದೆಯೋ? ಎಂಬ ಆತಂಕ ಜನರದ್ದಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಇದರತ್ತ ಗಮನಹರಿಸಿ ಕಾಂಪೌಂಡ್ ದುರಸ್ತಿಗೊಳಿಸಬೇಕಿದೆ. ಅನಾಹುತ ಸಂಭವಿಸಿದ ಬಳಿಕ ಬಾಯಿ ಬಡಿದುಕೊಳ್ಳುವ ಬದಲು ಮೊದಲೇ ಇದರತ್ತ ಗಮನಹರಿಸುವುದು ಒಳಿತು. ಕಾಂಪೌಂಡ್ ಬಳಿಯ ರಸ್ತೆಯಲ್ಲಿಯೇ ಓಡಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ನೋಡಬೇಕಿದೆ.











Click it and Unblock the Notifications